ಚಾಮರಾಜನಗರ: ‘ಲೋಕಸಭಾ ಚುನಾವಣೆಗೆ ಮಾಡುವ ವೆಚ್ಚದ ವಿವರವನ್ನು ಅಭ್ಯರ್ಥಿಗಳು ನಿಗಧಿತ ವಹಿಯಲ್ಲಿ ದಾಖಲು ಮಾಡಿ ಪ್ರತಿದಿನ ಕಡ್ಡಾಯವಾಗಿ ಸಲ್ಲಿಸಬೇಕು’ ಎಂದು ಚಾಮರಾಜನಗರ ಲೋಕಸಭಾ ಚುನಾವಣಾ ವೆಚ್ಚ ವೀಕ್ಷಕ ಕಾರ್ತಿಕ್ ಮಾಣಿಕ್ಯಂ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣಾ ವೆಚ್ಚ ವಿವರ ಮಾರ್ಗದರ್ಶನ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಗುರುವಾರ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಭಾರತ ಚುನಾವಣಾ ಆಯೋಗ ಅಭ್ಯರ್ಥಿಗಳ ಖರ್ಚು ವೆಚ್ಚವನ್ನು ಪರಿಶೀಲಿಸುವ ಅಧಿಕಾರವನ್ನು ಚುನಾವಣಾ ವೆಚ್ಚ ವೀಕ್ಷಕರಿಗೆ ನೀಡಿದೆ. ಆಯೋಗ ಅನ್ವಯ 3 ಬಾರಿ ಪರಿಶೀಲನೆ ನಡೆಸಬಹುದು. ಸುಳ್ಳು ಮಾಹಿತಿಯನ್ನು ವರದಿಯಲ್ಲಿ ಸಲ್ಲಿಸಿದರೆ ಅಭ್ಯರ್ಥಿಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಖರ್ಚು, ವೆಚ್ಚ ಪರಿಶೀಲನೆಗಾಗಿ ಚುನಾವಣೆಗೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸುವ ಪ್ರತಿ ಅಭ್ಯರ್ಥಿಗೆ ಚುನಾವಣಾ ಆಯೋಗದಿಂದ ಎ. ಬಿ ಹಾಗೂ ಸಿ ಮಾದರಿಯ ಪ್ರತ್ಯೇಕ ವಹಿಗಳನ್ನು ನೀಡಲಾಗುವುದು. ಇದರಲ್ಲಿ ಅಭ್ಯರ್ಥಿಗಳು ಮಾಡುವ ಪ್ರತಿ ವಾಹನ, ಚುನಾವಣಾ ಪ್ರಚಾರ ಸಾಮಗ್ರಿ, ಸಭೆ, ಸಮಾರಂಭ ಸೇರಿದಂತೆ ಎಲ್ಲ ಬಗೆಯ ಖರ್ಚು, ವೆಚ್ಚಗಳನ್ನು ವಹಿಯಲ್ಲಿರುವ ಪ್ರತಿ ಕಾಲಂನಲ್ಲಿ ನಮೂದು ಮಾಡಬೇಕು ಎಂದು ಹೇಳಿದರು.
ಪ್ರತ್ಯೇಕ ಬ್ಯಾಂಕ್ ಖಾತೆ: ಅಭ್ಯರ್ಥಿ ಪ್ರತ್ಯೇಕ ಬ್ಯಾಂಕ್ ಖಾತೆ ಹೊಂದಿರಬೇಕು. ಚುನಾವಣೆ ವೆಚ್ಚಕ್ಕಾಗಿ ಮಾಡಲಾದ ಯಾವುದೇ ₨ 20 ಸಾವಿರಕ್ಕೂ ಮೀರಿದ ಹಣವನ್ನು ಚೆಕ್ ಮೂಲಕ ಪಾವತಿ ಮಾಡಬೇಕು. ಅಭ್ಯರ್ಥಿಗಳ ಚುನಾವಣೆ ವೆಚ್ಚದ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎ.ಎಂ.ಕುಂಜಪ್ಪ ಮಾತನಾಡಿ, ‘ಸಭೆ, ಸಮಾರಂಭ, ಪ್ರಚಾರ ಸಾಮಗ್ರಿ, ವಾಹನ ಬಾಡಿಗೆ ಇನ್ನಿತರ ವೆಚ್ಚಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇರಬಹುದಾದ ವಾಸ್ತವ ದರವನ್ನು ನಿಗಧಿ ಮಾಡಲಾಗಿದೆ.
ಈ ಪ್ರಕಾರ ಅಭ್ಯರ್ಥಿಗಳ ಖರ್ಚನ್ನು ಲೆಕ್ಕ ಹಾಕಲಾಗುತ್ತದೆ. ಅಭ್ಯರ್ಥಿಗಳು ಕಡಿಮೆ ದರ ನಮೂದು ಮಾಡಿದರೂ ಸಹ ವಾಸ್ತವವಾಗಿ ನಿಗದಿ ಮಾಡಲಾಗಿರುವ ದರವನ್ನೇ ವೆಚ್ಚಕ್ಕೆ ಪರಿಗಣಿಸಲಾಗುತ್ತದೆ’ ಎಂದರು.
ಅಭ್ಯರ್ಥಿಗಳು ಯಾವುದೇ ವೆಚ್ಚವನ್ನು ಮರೆಮಾಚಲು ಸಾಧ್ಯವಿಲ್ಲ. ಪಾರದರ್ಶಕವಾಗಿ ವೆಚ್ಚ ಪ್ರಕ್ರಿಯೆಗೆ ಸಹಕರಿಸಬೇಕು ಎಂದು ಹೇಳಿದರು.
ಚುನಾವಣಾ ಜಾಹೀರಾತು– ಪ್ರಮಾಣೀಕರಣ ಅನುಮೋದನೆ ಅತ್ಯಗತ್ಯ: ವಿದ್ಯುನ್ಮಾನ ಮಾಧ್ಯಮಗಳಲ್ಲಿ ಚುನಾವಣಾ ಜಾಹಿರಾತುಗಳನ್ನು ಪ್ರಸಾರ ಮಾಡುವ ಮುನ್ನ ಕಡ್ಡಾಯ ವಾಗಿ ಜಿಲ್ಲಾ ಮಾಧ್ಯಮ ಪ್ರಮಾಣೀ ಕರಣ ಹಾಗೂ ಕಣ್ಗಾವಲು ಸಮಿತಿ ಯಿಂದ ಅನುಮೋದನೆ ಪಡೆಯ ಬೇಕು. ಮಾಧ್ಯಮಗಳಲ್ಲಿ ಪ್ರಕಟ ವಾಗುವ ಜಾಹಿರಾತುಗಳು, ಸುದ್ದಿ ರೂಪದ ಜಾಹಿರಾತುಗಳು ಚುನಾವಣಾ ಪ್ರಚಾರ ಸಾಮಗ್ರಿಗಳ ಬಗ್ಗೆ ನಿಗಾವಹಿಸ ಲಾಗು ವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ರವಿಕುಮಾರ್ ಮಾತನಾಡಿ, ‘ದಾಖಲೆಗಳಿಲ್ಲದೆ ಅಕ್ರಮವಾಗಿ ಹಣ ಮತ್ತು ಸಾಮಗ್ರಿ ಸಾಗಣೆಗಳನ್ನು ಚುನಾವಣೆ ಕೆಲಸಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ವಿಡಿಯೊ ಚಿತ್ರೀಕರಣ ಮಾಡಿ ಮುಟ್ಟುಗೋಲು ಹಾಕಿಕೊಳ್ಳ ಲಾಗುವುದು. ಅಲ್ಲದೆ, ಸಂಬಂಧಿಸಿದ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.