ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ| ಶಿವನ ಮೇಲೆ ಮನ್ಮಥ ಲೀಲೆ

Last Updated 6 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಇಂದ್ರನ ಆಣತಿಯಂತೆ ಶಿವನನ್ನು ಮೋಹಪಾಶಕ್ಕೆ ಸಿಲುಕಿಸಲು ಬಂದ ಮನ್ಮಥನಿಗೆಶಿವನಹಠಯೋಗ ಅಡ್ಡಿಯಾಗುತ್ತದೆ. ಇಂಥ ಸಂದರ್ಭದಲ್ಲಿಶಿವನಬಳಿಗೆ ಪಾರ್ವತಿ ಬಂದಿದ್ದು,ಮನ್ಮಥನಕಾರ್ಯಕ್ಕೆ ಅನುಕೂಲವಾಗುತ್ತದೆ. ಸೌಂದರ್ಯಕ್ಕೆ ಒಡತಿಯಂತಿದ್ದ ಪಾರ್ವತಿಯನ್ನು ಆಯಾಯ ಋತುಗಳಲ್ಲಿ ಅರಳುವ ಸುಂದರಪುಷ್ಪಗಳಿಂದ ಅಲಂಕರಿಸಿದರೆ, ಅವಳ ಸೌಂದರ್ಯವನ್ನು ವರ್ಣಿಸಲು ಸಾವಿರಾರು ವರ್ಷಗಳಾದರೂ ಸಾಧ್ಯವಾಗುವುದಿಲ್ಲ. ಅಂಥ ಅಪ್ರತಿಮ ಲೋಕಸುಂದರಿಯಾದ ಪಾರ್ವತಿಯುಶಿವನಬಳಿಗೆ ಬಂದಾಗ, ಶಿವ ಧ್ಯಾನವನ್ನು ಬಿಟ್ಟು ಸ್ವಲ್ಪ ಹೊತ್ತು ಬಹಿರ್ಮುಖನಾದ. ಇದೇ ತಕ್ಕ ಸಮಯವೆಂದು ಮನ್ಮಥ ತನ್ನ ಬತ್ತಳಿಕೆಯಲ್ಲಿದ್ದ ‘ಹರ್ಷಣ’ ಎಂಬ ಬಾಣವನ್ನು ಪ್ರಯೋಗಿಸಿದ. ಇದರಿಂದ ಶಂಕರನ ಮನಸ್ಸಿಗೆ ಹರ್ಷವಾದಂಥ ಅನುಭವವಾಯಿತು.

ಆಗ ಮನ್ಮಥ ‘ಪುಷ್ಪಶರ’ವನ್ನು ಬಿಲ್ಲಿಗೇರಿಸಿ ಶಂಕರನಮೇಲೆಪ್ರಯೋಗಿಸಿದ. ಇದರಿಂದಶಿವನಮನದಲ್ಲಿ ಅನುರಾಗದ ಅಲೆ ಅಪ್ಪಳಿಸಿದಂತಾಯಿತು. ಇದೇ ಸಮಯಕ್ಕೆ ಗಿರಿಜೆಯು ಎಂದಿನಂತೆ ಶಿವನಿಗೆ ಭಕ್ತಿಯಿಂದ ಪೂಜಿಸಿ, ಅವನ ಮುಂದೆ ನಿಂತಳು. ಪಾರ್ವತಿಯನ್ನು ನೋಡಿದ ಶಿವನಿಗೆ ಒಂದು ಕ್ಷಣ ವಿಚಲಿತನಾದ. ‘ಇದೇನು ಮುಖವೋ ಅಥವಾ ಚಂದ್ರನೊ? ಕಣ್ಣುಗಳೋ ಅಥವಾ ಕನ್ನೈದಿಲೆಗಳೋ? ಈ ಭ್ರುಕುಟಗಳುಮನ್ಮಥನಧನುಸ್ಸುಗಳೇ? ಇದೇನು ಅಧರವೊ? ಅಥವಾ ಬಿಂಬಫಲವೊ? ಇದು ನಾಸಿಕವೊ? ಅಥವಾ ಗಿಳಿಯ ಚಂಚುವೊ? ಇದೇನು ಸ್ವರವೋ ಅಥವಾ ಕೋಗಿಲೆಯ ಧ್ವನಿಯೋ?’ – ಎಂದು ಶಿವ ಮೋಹಪರವಶನಾಗಿ ನುಡಿದ

ಲೋಕದಲ್ಲಿರುವ ಲೋಕೋತ್ತರವಾದ ಸೌಂದರ್ಯವೆಲ್ಲವೂ ಒಟ್ಟುಗೂಡಿ ಈ ಪಾರ್ವತಿಯನ್ನು ಬಹುಮನೋಹರವಾಗಿಸಿದಂತಿದೆ. ಇವಳ ಅಂಗಗಳು ಎಲ್ಲಾ ರೀತಿಯಿಂದಲೂ ರಮಣೀಯವಾಗಿವೆ. ಇಂತಹ ಆಶ್ಚರ್ಯ, ಅದ್ಭುತರೂಪವುಳ್ಳ ಪಾರ್ವತಿಯಂತಹ ಸುಂದರಿ ಮೂರು ಲೋಕಗಳಲ್ಲಿಯೂ ಇಲ್ಲವೇ ಇಲ್ಲ. ಮಹಾಲಾವಣ್ಯವತಿಯಾದ ಇವಳು, ತನ್ನ ಅದ್ಭುತವಾದ ಅವಯವ ಸೌಷ್ಠವದಿಂದ ಮುನಿಗಳ ಮನಸ್ಸನ್ನೂ ಮೋಹಗೊಳಿಸಬಲ್ಲಳು. ನೋಡುವವರ ಮನಸ್ಸನ್ನು ಕ್ಷಣಾರ್ಧದಲ್ಲಿ ಸೆಳೆಯುವ ಆಕರ್ಷಣಾ ಶಕ್ತಿ ಪಾರ್ವತಿಗೆ ಇದೆ ಎಂದು ಪಾರ್ವತಿಯ ಸೌಂದರ್ಯವನ್ನು ಭಾವಪರವಶನಾಗಿ ಶಿವ ವರ್ಣಿಸತೊಡಗಿದ.

ತನ್ನ ಅಂಗಗಳನ್ನು ಶಿವ ವರ್ಣಿಸಿದ್ದನ್ನು ಕೇಳಿ, ಪಾರ್ವತಿ ನಾಚಿಕೆಯಿಂದ ದೂರಹೋಗಿ ನಿಂತಳು. ಅಲ್ಲಿ ಗಿರಿಜೆ ತನ್ನ ಕೋಮಲವಾದ ಅಂಗಗಳನ್ನು ನೋಡಿಕೊಳ್ಳುತ್ತಾ, ತನಗಿರುವ ಅದ್ಭುತ ಸೌಂದರ್ಯವನ್ನು ನೆನೆದು ಸಂತೋಷದಿಂದ ಹಿಗ್ಗಿದಳು. ಪಾರ್ವತಿಯ ಶೃಂಗಾರ ಚೇಷ್ಟೆಯನ್ನು ನೋಡಿದ ಮಹಾಲೀಲಾಮಯನಾದ ಮಹೇಶ್ವರ ಮೋಹಗೊಂಡ.

ಹೀಗೆ ಸ್ವಲ್ಪ ಹೊತ್ತು ಗಿರಿಜೆಯ ಬಗ್ಗೆ ವಿಚಾರಮಾಡಿದ ಬಳಿಕ ಎಚ್ಚೆತ್ತ ಮಹಾಯೋಗಿಯೂ ವಿರಕ್ತನೂ ಆದ ಮಹಾದೇವ ತನ್ನಲ್ಲಾದ ಬದಲಾವಣೆಯಿಂದ ಆಶ್ಚರ್ಯಗೊಂಡ. ‘ಇದೇನಾಯಿತು? ನಾನೇಕೆ ಮೋಹಗೊಂಡೆ. ಪರಮೇಶ್ವರನಾದರೂ ನಾನು ಕಾಮವಿಕಾರಕ್ಕೆ ಒಳಗಾದೆನಲ್ಲಾ. ಹಠಯೋಗಿಯಾದ ನಾನೇ ಸಾಮಾನ್ಯ ಮನುಷ್ಯರಂತೆ ಹೆಣ್ಣಿನಮೇಲೆಮೋಹಗೊಳ್ಳುವುದು ಸರಿಯಲ್ಲ’ ಅಂತ ತೀರ್ಮಾನಿಸಿದ ಮಹಾಶಿವ, ಮತ್ತೆ ವೈರಾಗ್ಯವನ್ನು ಹೊಂದಿದ. ಪರ್ಯಂಕಾಸನದಲ್ಲಿ ಕುಳಿತು ತಪವನ್ನ ಆಚರಿಸುತ್ತಾ ತನ್ನಲ್ಲಾಗುತ್ತಿದ್ದ ಕಾಮವಿಕಾರವನ್ನು ತಡೆದುಕೊಂಡ. ಇಲ್ಲಿಗೆ ಪಾರ್ವತೀಖಂಡದ ಹದಿನೆಂಟನೆಯ ಅಧ್ಯಾಯ ಮುಕ್ತಾಯವಾಗುತ್ತದೆ.l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT