ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯ-ನಮಸ್ಕಾರ | ಉಚಿತ ಕೊಡುಗೆ: ಕ್ರಮ ಕೈಗೊಳ್ಳುವವರಾರು?

ಪ್ರಜಾತಂತ್ರವು ಶುದ್ಧ ಅಣಕವಾಗುವ ಮೊದಲು ಕೋರ್ಟ್‌ ಮಧ್ಯಪ್ರವೇಶ ಮಾಡಬೇಕು
Published 25 ನವೆಂಬರ್ 2023, 0:30 IST
Last Updated 25 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳಿಗೆ ಉಚಿತ ಸ್ಕೂಟರ್ ಮತ್ತು ಉಚಿತ ಲ್ಯಾಪ್‌ಟಾಪ್, ಎಲ್ಲ ಮಹಿಳೆಯರಿಗೆ ಉಚಿತವಾಗಿ ಸ್ಮಾರ್ಟ್‌ಫೋನ್, ಮದುಮಗಳಿಗೆ ₹ 1 ಲಕ್ಷಕ್ಕಿಂತ ಹೆಚ್ಚು ಹಣ ಮತ್ತು 10 ಗ್ರಾಂ ಚಿನ್ನ, 100 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್, ಉಚಿತವಾಗಿ ಅಥವಾ ಭಾರಿ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್, ಕಾಲೇಜು ವಿದ್ಯಾರ್ಥಿಗಳಿಗೆ ಮಾಸಿಕ ಪ್ರಯಾಣ ಭತ್ಯೆ, ಎಲ್ಲ ಮಹಿಳೆಯರಿಗೆ ಮಾಸಿಕ ಪಿಂಚಣಿ... ಇವೆಲ್ಲ ಐದು ರಾಜ್ಯಗಳ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ನೀಡುತ್ತಿರುವ ಉಚಿತ ಕೊಡುಗೆಗಳ ಭರವಸೆ. ಈ ಮೂಲಕ ಪಕ್ಷಗಳು ದೇಶದಲ್ಲಿ ಜನಪ್ರಿಯ ಭರವಸೆಗಳನ್ನು ಹೊಸ ಹಂತಕ್ಕೆ ಒಯ್ಯುತ್ತಿವೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ಹಣಕಾಸಿನ ಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ಹೀಗಿರುವಾಗ, ಮತದಾರರ ಮನ ಗೆಲ್ಲಲು ರಾಜಕೀಯ ಪಕ್ಷಗಳು ಈ ಬಗೆಯ ಸ್ಪರ್ಧೆಗೆ ಇಳಿದಿರುವುದು ದೇಶದ ಅರ್ಥ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಉಂಟುಮಾಡಬಹುದು. ಆದರೆ ಈ ಸಮಸ್ಯೆಯನ್ನು ಹತ್ತಿಕ್ಕಲು ಚುನಾವಣಾ ಆಯೋಗದ ಬಳಿಯಾಗಲಿ, ರಾಜಕೀಯ ಪಕ್ಷಗಳಲ್ಲಿ ಯಾಗಲಿ ಯಾವುದೇ ಯೋಜನೆ ಇಲ್ಲ. ಹೀಗಾಗಿ, ಉಚಿತ ಕೊಡುಗೆಗಳಿಗೆ ಸಂಬಂಧಿಸಿದ ಎರಡು ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಇದು ಸಕಾಲ.

ರಾಜಸ್ಥಾನದಲ್ಲಿ ಅಶೋಕ್ ಗೆಹಲೋತ್ ನೇತೃತ್ವದ ಸರ್ಕಾರವು ಮತದಾರರಿಗೆ ಏಳು ಗ್ಯಾರಂಟಿಗಳ ಭರವಸೆ ನೀಡಿದೆ. ಕುಟುಂಬದ ಯಜಮಾನಿಗೆ ವರ್ಷಕ್ಕೆ ₹ 10 ಸಾವಿರ ನೆರವು; ಒಂದು ಕೋಟಿ ಕುಟುಂಬಗಳಿಗೆ ₹ 500ಕ್ಕೆ ಎಲ್‌ಪಿಜಿ ಸಿಲಿಂಡರ್; ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿ ಗಳಿಗೆ ಲ್ಯಾಪ್‌ಟಾಪ್ ಅಥವಾ ಟ್ಯಾಬ್; ನೈಸರ್ಗಿಕ ವಿಕೋಪಗಳಲ್ಲಿ ಹಾನಿಯಾದರೆ ಪ್ರತಿ ಕುಟುಂಬಕ್ಕೆ ₹ 15 ಲಕ್ಷದವರೆಗಿನ ವಿಮಾ ರಕ್ಷಣೆ; ಚಿರಂಜೀವಿ ಆರೋಗ್ಯ ವಿಮಾ ರಕ್ಷೆಯ ಮೊತ್ತವನ್ನು ₹ 25 ಲಕ್ಷದಿಂದ ₹ 50 ಲಕ್ಷಕ್ಕೆ ಹೆಚ್ಚಿಸುವುದು. ಇದಕ್ಕೆ ಪ್ರತಿಯಾಗಿ ಬಿಜೆಪಿಯು ಬಡ ಕುಟುಂಬಗಳ ಹೆಣ್ಣು
ಮಕ್ಕಳಿಗೆ ಉಚಿತ ಶಿಕ್ಷಣ; ವಿದ್ಯಾರ್ಥಿ ನಿಯರಿಗೆ ಸ್ಕೂಟಿ;
₹ 450ಕ್ಕೆ ಎಲ್‌ಪಿಜಿ ಸಿಲಿಂಡರ್; ರೈತರಿಗೆ ವರ್ಷಕ್ಕೆ ₹ 12 ಸಾವಿರ ನೆರವು; ಕಾಲೇಜು ವಿದ್ಯಾರ್ಥಿಗಳಿಗೆ ಮಾಸಿಕ ₹ 1,200ರಷ್ಟು ಪ್ರಯಾಣ ಭತ್ಯೆ; ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಮಾಸಿಕ ₹ 1,500 ಮೊತ್ತದ ಪಿಂಚಣಿಯ ಭರವಸೆಗಳನ್ನು ನೀಡಿದೆ.

ಮಧ್ಯಪ್ರದೇಶದಲ್ಲಿ 20 ವರ್ಷಕ್ಕೂ ಹೆಚ್ಚಿನ ಅವಧಿಗೆ ಆಡಳಿತ ನಡೆಸಿರುವ ಬಿಜೆಪಿಯು ತನ್ನ ಕಾರ್ಯಕರ್ತರಲ್ಲಿ ಉತ್ಸಾಹದ ಕೊರತೆ ಎದುರಿಸುತ್ತಿದೆ. ಅಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮವೇ ಆದ ಉಚಿತ ಕೊಡುಗೆಗಳನ್ನು ಪ್ರಕಟಿಸಿದ್ದಾರೆ. ಮಾರ್ಚ್‌ನಲ್ಲಿ ಲಾಡ್ಲಿ ಬೆಹ್ನಾ ಯೋಜನೆ ಆರಂಭಿಸಿರುವ ಅವರು ಪ್ರತಿ ಮಹಿಳೆಗೆ ತಿಂಗಳಿಗೆ ₹ 1,000 ಘೋಷಿಸಿದ್ದಾರೆ. ಕಾಂಗ್ರೆಸ್ ತಾನು
₹ 1,500 ನೀಡುವುದಾಗಿ ಭರವಸೆ ಕೊಟ್ಟಾಗ, ಬಿಜೆಪಿಯು ಮೊತ್ತವನ್ನು ₹ 1,250ಕ್ಕೆ ಹೆಚ್ಚಿಸಿದೆ. ಕಾಲಾನು ಕ್ರಮದಲ್ಲಿ ಮೊತ್ತವನ್ನು ₹ 3,000ಕ್ಕೆ ಹೆಚ್ಚಿಸುವುದಾಗಿ ಚೌಹಾಣ್ ಭರವಸೆ ನೀಡಿದ್ದಾರೆ. ಮತದಾರರ ಬೆಂಬಲ ಪಡೆಯಲು ಈ ಎರಡು ಪಕ್ಷಗಳ ನಡುವಿನ ಸೆಣಸಾಟವು ಹರಾಜು ಪ್ರಕ್ರಿಯೆಯನ್ನು ಹೋಲುವಂತಿದೆ. ₹ 500ಕ್ಕೆ ಎಲ್‌ಪಿಜಿ ಸಿಲಿಂಡರ್ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದಾಗ ಚೌಹಾಣ್ ಅವರು ಅದನ್ನು ತಾವು ₹ 450ಕ್ಕೆ ನೀಡುವುದಾಗಿ ಹೇಳಿದರು. ಮೊದಲ 100 ಯೂನಿಟ್‌ ವಿದ್ಯುತ್ ಉಚಿತ, ನಂತರದ 100 ಯೂನಿಟ್‌ಗಳಿಗೆ ಶೇ 50ರಷ್ಟು ರಿಯಾಯಿತಿ ಎಂಬ ಘೋಷಣೆಯನ್ನು ಕಾಂಗ್ರೆಸ್ ಮಾಡಿದೆ. ಅಲ್ಲದೆ, ವಿದ್ಯಾರ್ಥಿ ಗಳಿಗೆ ಮಾಸಿಕ ವಿದ್ಯಾರ್ಥಿವೇತನದ ಭರವಸೆ ನೀಡಿದೆ.

ತೆಲಂಗಾಣದ ಪರಿಸ್ಥಿತಿ ಗಮನಿಸೋಣ. ಈ ರಾಜ್ಯದ ಮೇಲಿನ ಸಾಲದ ಹೊರೆ ₹ 3 ಲಕ್ಷ ಕೋಟಿ. ಕಳೆದ ಹತ್ತು ವರ್ಷಗಳಲ್ಲಿ ಸಾಲದ ಪ್ರಮಾಣ ಶೇ 300ರಷ್ಟು ಹೆಚ್ಚಾಗಿದೆ ಎನ್ನಲಾಗುತ್ತಿದೆ. ಹೀಗಿದ್ದರೂ, ಪರಿಣಾಮಗಳ ಬಗ್ಗೆ ಗಮನ ನೀಡದೆ, ಆಡಳಿತಾರೂಢ ಬಿಆರ್‌ಎಸ್ ಪಕ್ಷವು ಮದುಮಗಳಿಗೆ ಮದುವೆಯ ನಂತರದಲ್ಲಿ ₹ 1 ಲಕ್ಷಕ್ಕಿಂತ ಹೆಚ್ಚು ನಗದು ನೀಡಲಾಗುವುದು ಎಂದು ಹೇಳಿದೆ. ಅಷ್ಟೇ ಅಲ್ಲದೆ, ₹ 15 ಲಕ್ಷ ವಿಮಾ ರಕ್ಷೆ ನೀಡುವ ಆರೋಗ್ಯ ವಿಮಾ ಯೋಜನೆಯೊಂದನ್ನು ಪಕ್ಷ ಭರವಸೆಯಾಗಿ ನೀಡಿದೆ, ಬೀಡಿ ಕಾರ್ಮಿಕರಿಗೆ ₹ 5000 ಗೌರವಧನ, ಬಡ ಕುಟುಂಬದ ಪ್ರತಿ ಮಹಿಳೆಗೆ ₹ 3,000 ಹಾಗೂ ರೈತರ ಸಾಲಮನ್ನಾ ಭರವಸೆಗಳನ್ನೂ ಪಕ್ಷ ನೀಡಿದೆ.

ಬಿಆರ್‌ಎಸ್‌ಗಿಂತ ಮುಂದಿರಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು, ಕರ್ನಾಟಕ ಮಾದರಿಯ ಗ್ಯಾರಂಟಿಗಳನ್ನು ತೆಲಂಗಾಣದ
ಲ್ಲಿಯೂ ಜಾರಿಗೆ ತರುವುದಾಗಿ ಹೇಳಿದೆ. ಬಿಆರ್‌ಎಸ್‌ ಪಕ್ಷವನ್ನು ಅನುಕರಿಸಿರುವ ಕಾಂಗ್ರೆಸ್, ಅಲ್ಪಸಂಖ್ಯಾತ ಸಮುದಾಯದ ಮದುಮಗಳಿಗೆ ₹ 1.60 ಲಕ್ಷ ಹಣ ಹಾಗೂ ಹಿಂದೂ ಮದುಮಗಳಿಗೆ ₹ 1 ಲಕ್ಷ ನಗದು ಹಾಗೂ 10 ಗ್ರಾಂ ಚಿನ್ನ ನೀಡುವುದಾಗಿ ಭರವಸೆ ಇತ್ತಿದೆ. ಇನ್ನೂ ಹಲವು ಘೋಷಣೆಗಳು ಇವೆ.

18 ವರ್ಷ ವಯಸ್ಸಿನ ನಂತರವೂ ವ್ಯಾಸಂಗಕ್ಕೆ ಮುಂದಾಗುವ ಹೆಣ್ಣುಮಕ್ಕಳಿಗೆ ವಿದ್ಯುತ್ ಚಾಲಿತ ಸ್ಕೂಟಿ, ಆಟೊ ಚಾಲಕರಿಗೆ ವರ್ಷಕ್ಕೆ
₹ 12 ಸಾವಿರ ನೆರವು, ವಿಧವೆಯರಿಗೆ ಮಾಸಿಕ ₹ 6,000 ಪಿಂಚಣಿ ಮತ್ತು ರೈತರಿಗೆ ₹ 3 ಲಕ್ಷದಷ್ಟು ಬಡ್ಡಿ ರಹಿತ ಬೆಳೆ ಸಾಲ ನೀಡುವುದಾಗಿ ಅದು ಭರವಸೆ ನೀಡಿದೆ.

ತಾನು ಹಿಂದುಳಿಯಬಾರದು ಎಂದು ಬಿಜೆಪಿ ಕೂಡ ಒಂದಿಷ್ಟು ಭರವಸೆಗಳನ್ನು ನೀಡಿದೆ. ಅಭಿವೃದ್ಧಿಗೆ ಪೂರಕವಾಗುವ ಹಲವು ಯೋಜನೆಗಳನ್ನು ಜಾರಿಗೆ ತರುವುದಾಗಿ ಬಿಜೆಪಿ ಹೇಳಿದೆ. ದುರ್ಬಲ ವರ್ಗಗಳಿಗೆ ಒಟ್ಟಾರೆಯಾಗಿ ಪ್ರಯೋಜನ ತಂದುಕೊಡುವ, ಬಡ ಕುಟುಂಬಗಳಿಗೆ ವರ್ಷಕ್ಕೆ ನಾಲ್ಕು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳು ಮತ್ತು ಪೆಟ್ರೋಲ್, ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ತಗ್ಗಿಸುವ ಭರವಸೆಗಳನ್ನು ಅದು ನೀಡಿದೆ. ಹಾಗೆಯೇ, ಜನಪ್ರಿಯ ಘೋಷಣೆಗಳ ಅನಿವಾರ್ಯಕ್ಕೆ ಶರಣಾಗಿರುವ ಬಿಜೆಪಿಯು ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ನೀಡುವುದಾಗಿ ಭರವಸೆ ಕೊಟ್ಟಿದೆ. ಆದರೆ ಛತ್ತೀಸಗಢದ ಲ್ಲಿನ ಆಡಳಿತಾರೂಢ ಸರ್ಕಾರವು ಉಚಿತ ಕೊಡುಗೆಗಳ ವಿಚಾರದಲ್ಲಿ ಹೆಚ್ಚು ಎಚ್ಚರಿಕೆಯಿಂದಿರುವಂತೆ ಕಾಣುತ್ತಿದೆ. ಚುನಾವಣೆಯ ಗುಂಗಿನಲ್ಲಿರುವ ಐದು ರಾಜ್ಯಗಳ ಪೈಕಿ ಉಚಿತ ಕೊಡುಗೆಗಳ ಬಗ್ಗೆ ಹೆಚ್ಚಿನ ಮಾತು ಕೇಳದೆ ಇದ್ದುದು ಮಿಜೋರಾಂನಲ್ಲಿ ಮಾತ್ರ.

ತಮಿಳುನಾಡಿನಂತಹ ರಾಜ್ಯಗಳಲ್ಲಿ ಉಚಿತ ಕೊಡುಗೆ ಗಳ ಸಂಸ್ಕೃತಿಯು ಬಹಳ ಹಿಂದೆ ಆರಂಭವಾಯಿತು. ಅಲ್ಲಿ ದ್ರಾವಿಡ ಪಕ್ಷಗಳು ಅದರಲ್ಲೂ ಮುಖ್ಯವಾಗಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷವು ಟಿ.ವಿ. ಮತ್ತು ಪ್ರೆಷರ್ ಕುಕ್ಕರ್‌ಗಳನ್ನು ಮತದಾರರಿಗೆ ನೀಡಿತ್ತು.

ಈ ವಿಚಾರದಲ್ಲಿ ಚುನಾವಣಾ ಆಯೋಗವು ಮೂಕ ಪ್ರೇಕ್ಷಕ ಆಗಿ ಕುಳಿತಿರುವುದು ವಿಷಾದಕರ. ಈ ಪ್ರವೃತ್ತಿಗೆ ಕಡಿವಾಣ ಹಾಕಲು ಆಯೋಗವು ಮುಂದಡಿ ಇರಿಸಿರುವ ಸೂಚನೆಗಳು ಕಾಣುತ್ತಿಲ್ಲ. ಉಚಿತ ಕೊಡುಗೆಗಳು ನ್ಯಾಯಸಮ್ಮತವಾದ ಚುನಾವಣೆ ಹಾಗೂ ಒಳ್ಳೆಯ ಆಡಳಿತಕ್ಕೆ ಧಕ್ಕೆ ತರುವ ಅಪಾಯ ಎದುರಾಗಿದೆ. ಇದಕ್ಕೆ ಸಂಬಂಧಿಸಿದ ಎರಡು ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಅಭಿವೃದ್ಧಿ ಹಾಗೂ ಬಡತನ ನಿರ್ಮೂಲನೆ ಹೆಸರಿನಲ್ಲಿ ಮತದಾರರಿಗೆ ಇಂತಹ ಆಮಿಷಗಳನ್ನು ನೀಡುವ ವಿಚಾರದಲ್ಲಿ ರಾಜಕೀಯ ಪಕ್ಷಗಳಲ್ಲಿ ಇರುವ ಸಹಮತವನ್ನು ಗಮನಿಸಿ ದರೆ, ನ್ಯಾಯಾಂಗದ ಮಧ್ಯಪ್ರವೇಶ ಮಾತ್ರವೇ ಈ ಸಮಸ್ಯೆ ನಿವಾರಿಸಬಹುದು. ಈ ವಿಚಾರದಲ್ಲಿ ತಾನು ಏನು ಮಾಡಬಹುದು ಎಂಬ ಪ್ರಶ್ನೆಯನ್ನು ಕೋರ್ಟ್‌ ಈ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಕೇಳಿದೆ ಕೂಡ.

ಸಮಸ್ಯೆಯು ಸಂಪೂರ್ಣವಾಗಿ ಕೈಮೀರುವ ಮೊದಲು, ಪ್ರಜಾತಂತ್ರವು ಶುದ್ಧ ಅಣಕವಾಗುವ ಮೊದಲು ಕೋರ್ಟ್‌ ಮಧ್ಯಪ್ರವೇಶ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT