ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಂಕಾರದ ವಿಸರ್ಜನೆಯೋ? ಆಚರಣೆಯ ಪೊಳ್ಳುತನವೋ?

Last Updated 18 ಜನವರಿ 2011, 19:30 IST
ಅಕ್ಷರ ಗಾತ್ರ

ಗಾಢವಾದ ಅನುಭವದಿಂದ ಮನಃಪರಿವ ರ್ತನೆ ಸಾಧ್ಯವೇ? ಇದು ಅಸೀಮಾನಂದರ ತಪ್ಪೊಪ್ಪಿಗೆಯಿಂದ ಎದ್ದಿರುವ ಪ್ರಶ್ನೆ. ಮನುಷ್ಯ ಸ್ವಭಾವದ ಬಗ್ಗೆ ಆಳವಾಗಿ ಚಿಂತಿಸುವುದಕ್ಕೆ ಇದು ಸವಾಲು. ನಮಗೆ ಪುರಾತನ ಕಾಲ ದಿಂದಲೂ ಈ ಬಗೆಯ ಪರಿವರ್ತನೆಯ ವಿಸ್ಮ ಯಗಳು ಎದುರಾಗಿವೆ. ಕ್ರೈಸ್ತ ಧರ್ಮವನ್ನು ನಾಶ ಮಾಡಲು ಹೊರಟ ಪಾಲ್‌ನನ್ನು ಒಂದು ದೊಡ್ಡ ಬೆಳಕು ಕ್ರಿಸ್ತನಾಗಿ ಎದುರು ಬಂದು ‘ಹೇ ಪಾಲ್, ನನ್ನನ್ನು ಯಾಕೆ ಬೆನ್ನಟ್ಟುತ್ತೀ’ ಎಂದು ಕೇಳಿದೊಡನೇ ಪಾಲ್ ಪರಿವರ್ತನೆ ಗೊಂಡು ಕ್ರಿಸ್ತನಿಗೆ ಶರಣಾಗುತ್ತಾನೆ.

ಬುದ್ಧನ ಕಾಲದಲ್ಲಿ ಒಬ್ಬ ಟೆರರಿಸ್ಟ್ ಇದ್ದ. ಅವನ ಹೆಸರು ಅಂಗುಲಿಮಾಲ. ಕತ್ತರಿಸಿದ ಹೆಬ್ಬೆರಳುಗಳ ಮಾಲೆಯನ್ನು ಧರಿಸಿ ಇನ್ನೂ ಅದೆಷ್ಟೋ ಹೆಬ್ಬೆರಳುಗಳು ಬೇಕೆಂದು ಹುಡು ಕುತ್ತಿದ್ದಾಗ ಬುದ್ಧನಿಗೆ ಎದುರಾದ. ಬುದ್ಧನ ದಯಾಮಯಿ ರೂಪಕ್ಕೆ ಮಾತಿಗೆ, ಮನ ಸೋತು ಪರಿವರ್ತಿತನಾದ. ಗ್ರೀಕರ ವರ್ಧಮಾ ನದ ಕಾಲದಲ್ಲಿ ಸಾಕ್ರಟೀಸ್ ಜನರನ್ನು ಸತ್ಯದ ಕಡೆಗೆ ಪರಿವರ್ತಿಸಲು ಸತತವಾದ ಸಂವಾದ ವನ್ನು ನಡೆಸುತ್ತಿದ್ದ ಐತಿಹ್ಯವೇ ನಮ್ಮೆದುರು ಇದೆ. ಈ ಎಲ್ಲದರ ಜೊತೆಗೇ ವೇದವ್ಯಾಸರು ಭಾರತದ ಆದಿ ಪುರುಷರಾಗಿ ಒಂದು ಪಾತ್ರವಾ ಗಿಯೂ, ಅದನ್ನು ಸಾಕ್ಷಿಯಾಗಿ ನೋಡಿದ ಕವಿ ಯಾಗಿಯೂ ಒಂದು ಮಾತು ಹೇಳುತ್ತಾರೆ. ‘ನಾನು ಕೈಯೆತ್ತಿ ಯಾವುದು ಧರ್ಮ, ಯಾವುದು ಅಧರ್ಮ ಎಂದು ಸಾರಿ ಸಾರಿ ಹೇಳುತ್ತಿದ್ದೇನೆ. ಆದರೆ ಇದನ್ನು ಕೇಳುವವರು ಯಾರೂ ಇಲ್ಲ’. ಅಂದರೆ ಪರಿವರ್ತನೆಯ ಅದ್ಭುತ ಕಥೆಗಳ ಜೊತೆ ಇಂಥ ಗಾಢವಾದ ವಿಷಾದವೂ ನಮ್ಮಲ್ಲಿ ಇದೆ.

ಪಂಪನ ಆದಿಪುರಾಣದಲ್ಲಿ ನೀಲಾಂಜನೆಯ ನೃತ್ಯದ ಪ್ರಸಂಗ ಬರುತ್ತದೆ. ಆದಿ ದೇವನನ್ನು ಖುಷಿ ಪಡಿಸಲು ಇಂದ್ರ ಏರ್ಪಡಿಸಿದ ನೃತ್ಯ ಇದು. ನೃತ್ಯದ ನಡುವೆ ಪರಮಸುಂದರಿ ನೀಲಾಂಜನೆ ಆಯಸ್ಸು ಮುಗಿದು ಸಾಯಬೇಕಾದವಳು ಸಾಯುತ್ತಾಳೆ. ಆದರೆ ಆ ಒಂದು ಕ್ಷಣದಲ್ಲಿ ರಸಭಂಗವಾಗಬಾರದೆಂದು ಇಂದ್ರ ಪ್ರತಿ ನೀಲಾಂಜನೆಯನ್ನು ಸೃಷ್ಟಿಸಿ ಕುಣಿಸುತ್ತಾನೆ. ಆದರೆ, ಒಂದು ಅರೆಕ್ಷಣದ ಸಾವಿನ ದರ್ಶನದಲ್ಲಿ ಆದಿದೇವ ವೈರಾಗ್ಯದಲ್ಲಿ ಬದಲಾಗಿ ಬಿಡುತ್ತಾನೆ.

ಮಾನವನ ಬಾಳಿನಲ್ಲೇ ಇರುವ ಸಾವಿನ ವಿಸರ್ಜನೆಯನ್ನು ಅನುಭವಿಸುತ್ತಲೇ ಸಾಯಬೇಕೆಂದು ಕೊನೆಗಾಲದಲ್ಲಿ ಕಾಶಿಯಲ್ಲಿ ಸುಡುವ ಹೆಣಗಳ ಮಧ್ಯೆ ಕಾಲ ಕಳೆಯುವ ವೃದ್ಧರಿದ್ದಾರೆ. ಟ್ಯಾಗೋರ್‌ರ ಅಜ್ಜಿಯೊಬ್ಬಳು ಹೀಗೆ ಸತ್ತಾಗ ರಾಜನಂತೆ ಬದುಕುತ್ತಿದ್ದ ಅವರ ತಂದೆಗೆ ಮನಃ ಪರಿವರ್ತನೆಯಾಯಿತು ಎನ್ನುವ ಕಥೆ ಇದೆ. ಇದಕ್ಕೆ ವಿರುದ್ಧವಾದ ಹಠಮಾರಿತನವೂ ಒಂದು ಆಧ್ಯಾತ್ಮಿಕ ಸ್ಥಿತಿಯಾಗಿ ನಮಗೆ ಎದುರಾಗುತ್ತದೆ. ಗಂಟಾಕರ್ಣನೂ ಒಬ್ಬ ಟೆರರಿಸ್ಟೇ.

ಶಿವನನ್ನು ಬಿಟ್ಟು ಬೇರೆ ದೇವರ ಹೆಸರು ಕೂಡಾ ಕೇಳಬಾರದೆಂದು ಎರಡು ಕಿವಿಗಳಿಗೂ ಗಂಟೆಯನ್ನು ಕಟ್ಟಿಕೊಂಡು ಬೇರೆ ದೇವರ ಹೆಸರು ಕೇಳಿದರೆ ಗಂಟೆ ಬಾರಿಸಿ ಕಿವುಡುಗೊಳಿಸಿಕೊಳ್ಳುತ್ತಿದ್ದ. ಇಸ್ಲಾಮಿನಲ್ಲೂ, ಕ್ರಿಶ್ಚಿಯಾನಿಟಿಯಲ್ಲೂ, ಹಿಂದೂಗಳಲ್ಲೂ ಹೀಗೆ ದೇವರನ್ನು ಪ್ರೀತಿಸುವುದರ ಮುಖಾಂತರ ಮಾತ್ರ ಮುಕ್ತಿ ಎಂಬ ಭಾವನೆ ಅವರನ್ನು ಒಂದು ಅತಿಗೆ ಕರೆದುಕೊಂಡು ಹೋಗುವುದು ಸಾಧ್ಯ. ಕಿ.ರಂ. ನಾಗರಾಜ ಒಮ್ಮೆ ‘ಇಂಥವರೆಲ್ಲಾ ಇರುವುದು ಮಾಹೇಶ್ವರ ಸ್ಥಲದಲ್ಲಿ’ ಎಂದಿದ್ದರು. ಅಂದರೆ, ಅದು ಭಕ್ತಿಯ ಅಂತಿಮ ಘಟ್ಟವಲ್ಲ, ಒಂದು ನಡು ಸ್ಥಿತಿ.

ನಮ್ಮ ಕಾಲದಲ್ಲೇ ಗಾಂಧೀಜಿ ಇಂಥ ಮನಃ ಪರಿವರ್ತನೆ ಉಂಟು ಮಾಡಲು ಸತತವಾಗಿ ತನ್ನನ್ನೇ ಒಡ್ಡಿಕೊಂಡು ಪ್ರಯತ್ನಿಸುತ್ತಿದ್ದರು. ವೈಸ್‌ರಾಯ್‌ನನ್ನು ಭೇಟಿಯಾಗಲು ಹೋದಾಗಲೂ ಪರಸ್ಪರ ಮಾತಾಡಿದ್ದನ್ನು ತಾನೇ ಗುರುತು ಮಾಡಿಕೊಂಡು ಆ ವೈಸ್‌ರಾಯ್‌ಗೆ ಕಳುಹಿಸಿ ‘ಇದರಲ್ಲಿ ನೀವು ಒಪ್ಪುವುದನ್ನು ಮಾತ್ರ ನಾನು ಪ್ರಕಟಿಸುತ್ತೇನೆ’
ಎನ್ನುತ್ತಿದ್ದರು. ಈ ರಾಯಭಾರಿ ಆಯಾಮದಲ್ಲಿ ಸಂಭಾಷಣೆ ನಡೆಸುತ್ತಿದ್ದ ಗಾಂಧೀಜಿ ಹಾಗೆಯೇ ಆ ವೈಸ್‌ರಾಯ್‌ಗೆ ವೈಯಕ್ತಿಕವಾಗಿ ಪತ್ರಗಳನ್ನು ಬರೆಯುತ್ತಿದ್ದರು. ಈ ಪತ್ರಗಳಲ್ಲಿ ‘ನೀವು ಸರಿಯಾಗಿ ನಿದ್ರೆ ಮಾಡುತ್ತಿಲ್ಲವೆಂದು ನನಗನ್ನಿಸುತ್ತದೆ’ ಎಂದು ಸೋದರತ್ವದ ಮಾತುಗಳನ್ನೂ ಆಡಿ ಬ್ರಿಟಿಷ್ ಅಧಿಕಾರಿಗಳನ್ನು ಕಂಗಾಲುಗೊಳಿಸುತ್ತಿದ್ದರು. ಆಫ್ರಿಕಾದಲ್ಲಿ ತನ್ನನ್ನು ಜೈಲಿಗೆ ಹಾಕಿದವನಿಗೆ ಒಂದು ಮೆಟ್ಟನ್ನು ಹೊಲೆದು ಕೊಟ್ಟಿದ್ದರು.

ದೇಶದ ವಿಭಜನೆಯ ಕಾಲದಲ್ಲಿ ಹಿಂದೂಗಳು ಮುಸ್ಲಿಮರು ಒಬ್ಬರನ್ನೊಬ್ಬರು ನಿರ್ದಯವಾಗಿ ಕೊಂದುಕೊಂಡಾಗ ತನ್ನ ಮಕ್ಕಳನ್ನು ಕಳೆದುಕೊಂಡ ಒಬ್ಬ ಹಿಂದೂ ಕೋಪಾವಿಷ್ಟನಾಗಿ ಗಾಂಧಿಗೆ ಎದುರು ಬಂದು ‘ನಾನೇನು ಮಾಡಬೇಕು ಹೇಳು’ ಎಂದು ಗದರಿಸಿ ಕೇಳುತ್ತಾನೆ. ಗಾಂಧಿ ಸ್ಪಷ್ಟವಾಗಿ ‘ಅನಾಥನಾದ ಒಂದು ಮುಸ್ಲಿಮ್ ಮಗುವನ್ನು ಸಾಕಿಕೋ’ ಎನ್ನುತ್ತಾರೆ.

ಈ ಅನಿರೀಕ್ಷಿತ ಮಾತಿನಿಂದ ಕ್ರುದ್ಧನಾದವನ ಹೃದಯ ಬದಲಾಗಿ ಬಿಡುತ್ತದೆ. ಇಂಥ ಎಲ್ಲ ಮನಃಪರಿವರ್ತನೆಯ ಕಥೆಗಳಲ್ಲೂ ಒಂದು ಅನಿರೀಕ್ಷಿತ ಘಟನೆ ಸಂಭವಿಸಿರುತ್ತದೆ. ಅದು ನಮ್ಮ ತರ್ಕಕ್ಕೆ ಮೀರಿದ್ದು. ಅಸೀಮಾನಂದರಿಗೂ ಒಬ್ಬ ಮುಸ್ಲಿಮ್ ಹುಡುಗನ ಸೇವೆಯಿಂದ ಹೀಗನ್ನಿಸಿತು ಎಂದಾಗ ನಮ್ಮ ಕಾಲದಲ್ಲಿ ಇದನ್ನು ಸಂಶಯದಿಂದ ನೋಡುವವರೇ ಹೆಚ್ಚಾಗಿರುವುದು ಒಂದು ದುರಂತ. ಎಲ್ಲವೂ ರಾಜಕೀಯಗೊಂಡಾಗ ಮನುಷ್ಯನ ಸ್ವಭಾವದಲ್ಲಿರುವ ಪ್ರೀತಿಯಿಂದ ಮಾತ್ರ ಹುಟ್ಟಬಲ್ಲ ಭಾವನೆಗಳೂ ಕಲ್ಲಾಗಿ ಬಿಡುತ್ತವೆ.

ಟಾಲ್‌ಸ್ಟಾಯ್‌ನ ‘ಅನ್ನಾ ಕರೇನಿನಾ’ ಕಾದಂಬರಿಯಲ್ಲಿ ಎರಡು ಬಗೆಯ ಪಾತ್ರಗಳು ಬರುತ್ತವೆ. ಅನುಭವದಿಂದ ಬದಲಾಗಬಲ್ಲವರು; ಯಾವ ಅನುಭವದಿಂದಲೂ ಬದಲಾಗಲಾರದವರು. ಎರಡೂ ಬಗೆಯ ಪಾತ್ರಗಳು ಒಳ್ಳೆಯವರೇ. ಅನ್ನ ಕರೇನಿನಾ ರೈಲ್ವೇ ಸ್ಟೇಷನ್‌ನಲ್ಲಿ ಒಂದು ಅಪಘಾತವನ್ನು ಕಂಡು ತನ್ನ ಗಂಡನ ಮುಖವನ್ನು ನೋಡುತ್ತಾಳೆ. ಅವನು ಬಹಳ ದೊಡ್ಡ ಅಧಿಕಾರಿ ಮತ್ತು ಶ್ರೀಮಂತ. ಅನ್ನಾ ಕರೇನಿನಾಗೆ ಥಟ್ಟನೆ ಅವನ ಕಿವಿಗಳ ಮೇಲಿನ ರೋಮವನ್ನು ನೋಡಿ ಅಸಹ್ಯವಾಗಿ ಬಿಡುತ್ತದೆ. ಗಂಡನನ್ನು ಮುಂದೆಂದೂ ಪ್ರೀತಿಸಲಾರದವಳಾಗಿ ಬಿಡುತ್ತಾಳೆ.

ಹಿಂದು ಮುಂದು ನೋಡದೆ ರೈಲಿನಲ್ಲಿ ಅಪಘಾತವಾದ ವ್ಯಕ್ತಿಯ ಸಂಬಂಧಿಗಳಿಗೆ ತನ್ನ ಜೇಬಿನಿಂದ ಎಲ್ಲ ದುಡ್ಡನ್ನೂ ಎತ್ತಿಕೊಡುವ ವ್ರಾನ್ಸ್‌ಕಿಯನ್ನು ಅವಳು ಪ್ರೀತಿಸತೊಡಗುತ್ತಾಳೆ. ಅವಳ ಘನತೆ, ಅವಳ ಕುಲ, ಸಮಾಜದಲ್ಲಿ ಅವಳಿಗಿರುವ ಸ್ಥಾನ ಎಲ್ಲವನ್ನೂ ಒಂದು ಕ್ಷಣದಲ್ಲಿ ಮರೆತು ಪ್ರೇಮಕ್ಕೆ ಶರಣಾದ ಹೆಣ್ಣಾಗಿ ಬಿಡುತ್ತಾಳೆ. ಇದಕ್ಕೆ ಕವಿಯಾದ ಟಾಲ್‌ಸ್ಟಾಯ್ ಹಿಂದು ಮುಂದು ಆಲೋಚಿಸಿದೇ ಮನ್ನಣೆ ನೀಡುತ್ತಾನೆ.

ಆದರೆ ಅವನ ನೈತಿಕ ದೃಷ್ಟಿ ಕ್ರಮೇಣ ಈ ಸದ್ಯೋಜಾತ ಅನುಭವದಲ್ಲಿ ಇರುವ ಮಿತಿಗಳನ್ನು ಕಾಣುತ್ತಾ ಹೋಗುತ್ತದೆ. ಈ ಅನ್ನಾ ಕರೇನಿನಾಗೆ ಒಬ್ಬ ಸೋದರನಿದ್ದಾನೆ. ಬಲು ಖುಷಿಯ ಮನುಷ್ಯ. ಅವನಿಗೂ ಇಂದ್ರಿಯ ಗಮ್ಯ ಅನುಭವಗಳೇ ಮುಖ್ಯ. ಆದರೆ ಈ ಇಂದ್ರಿಯ ಗಮ್ಯ ಅನುಭವಗಳಿಂದ ಅವನು ಬದಲಾಗುವುದಿಲ್ಲ. ತಪ್ಪು ಮಾಡಿ ಕ್ಷಮೆ ಕೋರಿ ಮತ್ತೆ ತಪ್ಪು ಮಾಡುತ್ತಾನೆ. ಅವನೊಬ್ಬ ಎಲ್ಲವನ್ನೂ ಸಹಿಸಿಕೊಳ್ಳುವ ಲಿಬರಲ್. ಹಾಗೂ ವಾದ ಮಾಡಬಲ್ಲ, ಹೀಗೂ ವಾದ ಮಾಡಬಲ್ಲ. ಇಂಥವರು ಬದಲಾಗುವುದೇ ಇಲ್ಲ ಎನ್ನುವ ಟಾಲ್‌ಸ್ಟಾಯ್ ರಂಪದ ಸ್ವರೂಪವನ್ನು ನಮ್ಮೆದುರು ಇಡುತ್ತಾನೆ. ರಂಪ ಎಂದರೆ ಆಡಿದ್ದನ್ನೇ ಆಡುವುದು, ಮಾಡಿದ್ದನ್ನೇ ಮಾಡುವುದು- ಸತತವಾಗಿ, ನಿರಂತರವಾಗಿ.

ಈ ಇಬ್ಬಗೆಯ ಮಾನವ ಸ್ವಭಾವವನ್ನು ನಾವು ಕೇವಲ ಸರಿತಪ್ಪುಗಳ ದೃಷ್ಟಿಯಿಂದ ನೋಡಲಾರೆವೇನೋ? ಒಂದು ಮಹತ್ವದ ಅನುಭವದಿಂದ ಬದಲಾಗುವವರೆಲ್ಲರಲ್ಲೂ ದೊಡ್ಡದೊಂದಕ್ಕೆ ಶರಣಾಗುವ, ತನ್ನನ್ನು ತಾನೇ ವಿಸರ್ಜಿಸಿಕೊಳ್ಳುವ ಭಕ್ತಿಯ ಅಂಶ ಇರುತ್ತದೆ. ಹೀಗೆ ವಿಸರ್ಜಿಸಿಕೊಂಡಾಗ ಆತ್ಮಪ್ರತಿಷ್ಠೆ ಮಾಯವಾಗುತ್ತದೆ. ತಾನು ಏನೇನೂ ಅಲ್ಲ ಎನ್ನುವುದು ಇನ್ನೊಂದು ಸೃಜನಶೀಲ ಮರುಹುಟ್ಟಿಗೆ ಕಾರಣವಾಗುತ್ತದೆ. ಮತ್ತೆ ಮತ್ತೆ ಸತ್ತು ಬದುಕುವವರು ಇವರು.

ಕೀಟ್ಸ್ ಎಂಬ ಕವಿ ‘ಡೈಯಿಂಗ್ ಇನ್ ಟು ಲೈಫ್’ ಎನ್ನುತ್ತಾನೆ. ಪರಮ ದೈನ್ಯದಲ್ಲಿ ಆತ್ಮಗೌರವವನ್ನು ಹುಡುಕುವವರು ಮತ್ತು ಸ್ವಪ್ರತಿಷ್ಠೆಯಲ್ಲಿ ಆತ್ಮಗೌರವವನ್ನು ಗಳಿಸಿಕೊಳ್ಳುವವರು ಈ ಇಬ್ಬಗೆಯವರನ್ನೂ ನಾವು ನಿತ್ಯ ನೋಡುತ್ತಿರುತ್ತೇವೆ. ಈ ಬದಲಾಗುವವರಲ್ಲಿ ಒಂದು ಅನುಭವದ ಸ್ಫೋಟವಿರುತ್ತದೆ. ಜಿಡ್ಡು ಕೃಷ್ಣಮೂರ್ತಿ ಒಂದು ಕಡೆ ಹೀಗೆ ಹೇಳುತ್ತಾರೆ:

‘ನೀನೊಂದು ಕಾರನ್ನು ವೇಗವಾಗಿ ಓಡಿಸುತ್ತಿದ್ದೀ ಎಂದುಕೋ. ಥಟ್ಟನೇ ನಿನಗೊಂದು ಪ್ರಪಾತ ಎದುರಾಗುತ್ತದೆ. ಆಗ ನೀನೇನಾದರೂ ಯೋಚಿಸುತ್ತೀಯಾ..? ಇಲ್ಲ, ಥಟ್ಟನೇ ಬ್ರೇಕ್ ಹಾಕುತ್ತೀಯ’ ಇದನ್ನು ಅವರು ಚಾಯ್ಸೀಲೆಸ್ ಅವೇರ್‌ನೆಸ್ (ಆಯ್ಕೆಯ ಅವಕಾಶವಿಲ್ಲದ ಅರಿವು) ಎಂದು ಕರೆಯುತ್ತಾರೆ. ಅಂಗುಲಿಮಾಲನಿಗೂ, ಪಾಲ್‌ಗೂ, ಗಾಂಧಿಯನ್ನು ಎದುರಾದ ಕುಪಿತ ಹಿಂದೂವಿಗೂ, ಗಂಡನ  ಕಿವಿಯ ರೋಮದಿಂದ ಹೇಸಿಕೊಂಡ ಅನ್ನಾ ಕರೇನಿನಾಗೂ ಆಗುವ ಅನುಭವ ಇದು.

ತಮ್ಮ ದೈನ್ಯದಲ್ಲಿ ಹಿರಿದಾದ್ದೊಂದಕ್ಕೆ ಶರಣಾಗಬೇಕೆಂಬ ಸಂಪ್ರದಾಯದಲ್ಲಿರುವವರು ಸ್ನಾನವನ್ನೇ ಮಾಡದೆ ಕೊಳಕರಾಗಿರುವುದನ್ನು ನಾವು ಜೈನರ ಕಥೆಗಳಲ್ಲಿ ಓದಿದ್ದೇವೆ. ರೈಕ್ವ ಕಜ್ಜಿ ಕೆರೆದುಕೊಳ್ಳುತ್ತಾ ಬಿಸಿಲಿನಲ್ಲಿ ಕುಳಿತು ಜನಕ ಮಹಾರಾಜನ ಗುರುವಾಗುತ್ತಾನೆ. ಆದರೆ ಈ ಬಗೆಯ ಸಾಧನೆಗಳೂ ಕೂಡಾ ಆಯಾ ಕಾಲದ ಪ್ರತಿಷ್ಠೆಗಳಿಂದ ತಮ್ಮ ಘನತೆಯನ್ನು ಕಳೆದುಕೊಂಡು ಬಿಡುತ್ತವೆ. ಉದಾಹರಣೆಗೆ ಆತ್ಮ ವಿಸರ್ಜನೆಯಲ್ಲಿ ಎಂಜಲೆಲೆಯ ಮೇಲೆ ಹೊರಳಾಡುವವರು. ಆದರೆ ಅದು ಬ್ರಾಹ್ಮಣರು ತಿಂದು ಎಸೆದ ಎಂಜಲೆಲೆಯೇ ಆಗಬೇಕೆಂಬುದರಲ್ಲಿ ಪುರಾತನ ಕಾಲದ ಒಂದು ಭಕ್ತಿ ಪರಂಪರೆ ತನ್ನ ಸ್ವರೂಪವನ್ನೇ ಕಳೆದುಕೊಂಡಿದೆ. ಈಗ ಎಂಜಲೆಲೆಯ ಮೇಲೆ ಹೊರಳಾಡುವುದರಿಂದ ಚರ್ಮವ್ಯಾದಿ ಗುಣವಾಗುವುದು ಎಂಬ ಮೂಢನಂಬಿಕೆಯವರು. ಈ ಮೂಲಕ ಅವರು ಬ್ರಾಹ್ಮಣ ಜಾತಿಯ ಒಣ ಪ್ರತಿಷ್ಠೆಯನ್ನು ಬೆಳೆಸುತ್ತಾರೆ.

ಪರಮಹಂಸರೂ ತಮ್ಮ ಅವಧೂತತನದ ಪೂರ್ಣಾವಿಷ್ಕಾರಕ್ಕಾಗಿ ಜನಿವಾರ ಕಿತ್ತು ಬಿಸಾಕುತ್ತಾರೆ (ಬಸವನಂತೆ). ಅದೂ ಅಹಂಕಾರ ವಿಸರ್ಜನೆಗೆ ಸಾಲದು ಎನ್ನಿಸಿ ಎಸೆದ ಅನ್ನವನ್ನು ಚರಂಡಿಗಳಲ್ಲಿ ನಾಯಿಗಳ ಜೊತೆ ತಿನ್ನುತ್ತಾರೆ ಎಂದು ಎಲ್ಲಿಯೋ ಓದಿದ ನೆನಪು. ಇದು ಅದ್ವೈತಿ ಜ್ಞಾನಿಯಾದ ರಮಣರ ಮಾರ್ಗವಲ್ಲ. ಐರೋಪ್ಯ ತಾತ್ವಿಕನಾದ ರಸೆಲ್‌ಗೆ ಪರಮಂಹಸರು ಅಸ್ವಸ್ಥ ಮನೋರೋಗಿ. ಅವರ ಭಾವಸಮಾಧಿಯನ್ನು ಅರಿವಿನ ಪರಾಕಾಷ್ಠ ಸ್ಥಿತಿ ಎಂದು ರಸೆಲ್ ಒಪ್ಪುವುದಿಲ್ಲ. ಟ್ಯಾಗೋರರು ಎಂದೂ ಪರಮಹಂಸರನ್ನು ಭೇಟಿಯಾಗಲಿಲ್ಲ. ಕಾಳಿ ಪೂಜೆಯಿಂದ ಗುರುದೇವರು ಬಲುದೂರ!

ಇಂಥ ವರ್ತನೆಗಳಲ್ಲಿರುವ ಪೊಳ್ಳುತನ ಅಲ್ಲಮನಂಥವರಿಗೆ ತಿಳಿದುಬಿಡುತ್ತಿತ್ತೇನೋ? ಅವನು ಯಾವ ಭಕ್ತನನ್ನೂ ಅವರ ಭಕ್ತಿಯ ಮೂಲೋದ್ದೇಶಗಳನ್ನು ಪ್ರಶ್ನಿಸದೇ ಬಿಟ್ಟಿಲ್ಲ. ನಾವು ನಮ್ಮ ನಡುವೆ ರಾಜಕೀಯದಲ್ಲೂ ಧಾರ್ಮಿಕತೆಯಲ್ಲೂ ವಿಜ್ಞಾನದಲ್ಲೂ ಈ ಬಗೆಯ ವಿಕೃತಿಗಳನ್ನು ಕಾಣುತ್ತಿದ್ದೇವೆ.

ನಮ್ಮ ಕಾಲದ ಮಹತ್ವಪೂರ್ಣವಾದ ಸಂವಿಧಾನದ ಆಧಾರದ ಮೇಲೆ ರಚಿತವಾದ ನಮ್ಮ ಪಾರ್ಲಿಮೆಂಟನ್ನೇ ನೋಡೋಣ. ಒಬ್ಬರನ್ನೊಬ್ಬರು ಬದಲಾಯಿಸಲು ಸಾಧ್ಯವಾಗಬಹುದಾದ, ಬದಲಾವಣೆಗೆ ಒತ್ತಾಯ ತರಬಲ್ಲ ಸಂಸ್ಥೆಗಳಿವು. ಅದು ಸಾಧ್ಯವಾಗದೇ ಹೋದದ್ದರಿಂದ ನಾವೀಗ ಅಲ್ಲಿ ಕಾಣುತ್ತಿರುವುದು ರಂಪವನ್ನು ಮಾತ್ರ. ಆದರೆ ಅವರೂ ಮನುಷ್ಯರಲ್ಲವೇ? ಬದಲಾಗುವುದು ಸಾಧ್ಯವಲ್ಲವೇ?

ಹಿಂದೂಗಳಲ್ಲೂ ಭಯೋತ್ಪಾದಕರು ಇದ್ದಾರೆ ಎಂಬ ಸತ್ಯ ನಮಗೆ ಅಸೀಮಾನಂದರಿಂದ ತಿಳಿದಿದೆ. ಇದೂ ರಾಜಕೀಯದ ಹಿಗ್ಗಾಟ, ಮುಗ್ಗಾಟವಾಗಕೂಡದು. ಅಲ್ಲೂ ಇದ್ದಾರೆ, ಇಲ್ಲೂ ಇದ್ದಾರೆ ಟೆರರಿಸ್ಟರು ಎಂಬುದು ಯಾರ ಸಮಾಧಾನದ ತರ್ಕವೂ ಆಗಲಾರದು. ಇಂಥವು ನಾವೆಲ್ಲರೂ ನಮ್ಮನ್ನು ತಿದ್ದಿಕೊಳ್ಳಲು ಬೇಕಾದ ಪಾಠಗಳಾಗಬೇಕು.

ರಾಜಕೀಯ, ಅಧ್ಯಾತ್ಮ, ಆಟ ಹೀಗೆ ಎಲ್ಲವೂ ಕಲುಷಿತಗೊಂಡು ವಿಕೃತವಾಗುವ ಈ ಕಾಲದಲ್ಲಿ ಈ ಎಲ್ಲಾ ವಿಷಯಗಳಲ್ಲಿ ಆಳವಾದ ಅರಿವನ್ನು ಗಳಿಸಿಕೊಂಡು ವರ್ತನೆಯಲ್ಲಿ ಮಾನವೀಯವಾಗಿ ಉಳಿಯುವ ವಿನಯದ ಮಾರ್ಗಗಳನ್ನು ನಾವು ಹುಡುಕಬೇಕು. ಅಸೀಮಾನಂದರು ತನ್ನ ಪಶ್ಚಾತ್ತಾಪದಲ್ಲಿ ಕ್ರೌರ್ಯದ ಅರ್ಥಹೀನತೆಯ ಬಗ್ಗೆ ಪಾಕಿಸ್ತಾನದ ಅಸ್ತಿತ್ವಕ್ಕೂ ಮಾರಕರಾಗಿರುವ ಭಯೋತ್ಪಾದಕರ ಜೊತೆ ಸಂವಾದ ನಡೆಸುವಂತಾಗಬೇಕು.

ಅಸೀಮಾನಂದರು ಹೇಳುತ್ತಾ ಇರುವುದು ಯಾವ ಲಾಭಕ್ಕೋ ಮಾಡುತ್ತಾ ಇರುವ ಉಪಾಯವಾಗಿರದೆ ನೈಜ ಹೃದಯ ಪರಿವರ್ತನೆಯೆಂಬ ನಂಬಿಕೆಯಲ್ಲಿ ಈ ಮೇಲಿನ ಮಾತುಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT