ಕಳೆದ ವಾರ ಹುಬ್ಬಳ್ಳಿಯಲ್ಲಿ ಕರ್ನಾಟಕ ಹರಿಯಾಣ ನಡುವೆ ರಣಜಿ ಟ್ರೋಫಿ ಪಂದ್ಯ ನಡೆಯುತ್ತಿದ್ದಾಗ ಸ್ನೇಹಿತರೊಬ್ಬರು, `ದೋನಿ 2015 ರ ವಿಶ್ವ ಕಪ್ ವರೆಗೆ ತಂಡದ ನಾಯಕರಾಗಿ ಅಥವಾ ಆಟಗಾರನಾಗಿ ಮುಂದುವರಿಯುತ್ತಾರೆಯೇ' ಎಂದು ಕೇಳಿದರು. `ಅದು ಗೊತ್ತಿಲ್ಲ, ಆದರೆ ಅವರ ತಲೆ ಹಾರಿಸುವ ಕತ್ತಿ ಮಾತ್ರ ತಯಾರಾಗುತ್ತಿದೆ' ಎಂದು ವಿನೋದವಾಗಿ ಹೇಳಿದೆ. ಬೇರೆ ತಂಡಗಳು ಟೆಸ್ಟ್ ಮತ್ತು ನಿಗದಿಯ ಓವರುಗಳ ಪಂದ್ಯಗಳಿಗೆ ಬೇರೆ ಬೇರೆ ನಾಯಕರನ್ನು ಆಡಿಸಿ ಯಶಸ್ವಿಯಾಗಿವೆ. ಭಾರತ ತಂಡದಲ್ಲೂ ಅಂಥ ಪ್ರಯೋಗ ಆದರೆ ದೋನಿಗೆ ಒಳ್ಳೆಯದಾಗಬಹುದು.
ಅಂದರೆ ಅವರನ್ನು ಟೆಸ್ಟ್ ಪಂದ್ಯದ ಒತ್ತಡದಿಂದ ಬಿಡಿಸಿ, ಬರೀ ನಿಗದಿಯ ಓವರುಗಳ ಪಂದ್ಯಗಳಿಗೆ ನಾಯಕನನ್ನಾಗಿ ಮಾಡಿದರೆ, ಅವರು ಇನ್ನೂ ಎರಡು ವರ್ಷ ಚೆನ್ನಾಗಿ ಆಡಿ, ಭಾರತ ವಿಶ್ವ ಕಪ್ ಉಳಿಸಿಕೊಳ್ಳುವ ಯತ್ನಕ್ಕೆ ಕೈಹಾಕಬಹುದು. ಇಲ್ಲದಿದ್ದರೆ ಆಸ್ಟ್ರೇಲಿಯ ವಿರುದ್ಧ ಅವರು ಪರದಾಡುವ ಸ್ಥಿತಿ ಎದುರಾಗಬಹುದು. ಒಮ್ಮೆ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡರೆ ಅದರಿಂದ ಹೊರಬರುವುದು ಕಷ್ಟ. ಯಾಕೆಂದರೆ ಎಲ್ಲರೂ ಸೇರಿ ಕೆಳಗೆ ದೂಡುತ್ತಲೇ ಇರುತ್ತಾರೆ. ನಾಯಕತ್ವ ಹೋಗಲಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವುದೇ ಕಷ್ಟವಾಗಬಹುದು. ನಾಯಕನೂ ತಂಡದ ಒಬ್ಬ ಆಟಗಾರನೇ ಆಗಿರುವುದರಿಂದ, ಆತ ತಂಡದ ಯಶಸ್ಸಿನ ಜೊತೆ ಸ್ವತಃ ರನ್ ಗಳಿಸಬೇಕಾಗುತ್ತದೆ. ಇದಕ್ಕೆ ಪಾಕಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧದ 50 ಓವರುಗಳ ಪಂದ್ಯಗಳ ಸರಣಿಯಲ್ಲಿ ಉತ್ತರ ಸಿಗಬಹುದು.