ಸುಮಾರು ಎಂಬತ್ತೆಂಟು ವರ್ಷದ ತುಂಬುಬಾಳನ್ನು ಬಾಳಿದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ಕಳೆದ ವಾರ ನಿಧನರಾದರು. ಕನ್ನಡ ಸಾರಸ್ವತ ಲೋಕದ ಹಲವು ಗಣ್ಯರು, ಸಹೃದಯರು, ಸಮಾಜ ಮತ್ತು ರಾಜಕಾರಣದ ಪ್ರತಿಷ್ಠಿತರು, ಅವರ ಅಸಂಖ್ಯಾತ ಅಭಿಮಾನಿಗಳು, ವಿದ್ಯಾರ್ಥಿಗಳು ಕಂಬನಿ ಮಿಡಿದರು. ಅವರ ಸಾಧನೆ ಮತ್ತು ಸದ್ಗುಣಗಳನ್ನು ತುಂಬುಮನದಿಂದ ನೆನಪಿಸಿಕೊಂಡರು.
ಅವರ ಸಾವಿನಿಂದ ಶೋಕಗ್ರಸ್ತರಾದ ಅಸಂಖ್ಯಾತರಲ್ಲಿ ನಾನೂ ಒಬ್ಬ.
ನನಗೆ ಅವರ ವಿದ್ಯಾರ್ಥಿಯಾಗುವ ಪುಣ್ಯ ಸಿಗಲಿಲ್ಲ. ಅವರ ಎಲ್ಲ ವಿದ್ಯಾರ್ಥಿಗಳೂ ಅವರೊಬ್ಬ ಅದ್ಭುತ ಪ್ರಾಧ್ಯಾಪಕರೆಂದು ಹೇಳುತ್ತಿದ್ದರು. ನನ್ನ ಬರವಣಿಗೆಯ ಎಳೆಯ ಕಾಲದಲ್ಲಿ ಮೆಚ್ಚುಗೆ ಸೂಚಿಸಿ ನನಗೆ ಪ್ರೋತ್ಸಾಹ ನೀಡಿದ ಹಿರಿಯರಲ್ಲಿ ಜಿಎಸ್ಎಸ್ ಅವರೂ ಒಬ್ಬರು. ಕನ್ನಡದ ಹಿರಿಯಣ್ಣನಾದ ಮೇಲೂ ಕಿರಿಯರ ಬರಹದ ಬಗ್ಗೆ ಜಿಎಸ್ಎಸ್ ಅವರಂತೆ ಆರೋಗ್ಯಪೂರ್ಣ ಕಾಳಜಿ ತೋರಿಸುವ ಬರಹಗಾರರ ಸಂಖ್ಯೆ ವಿರಳ.
ಬಿಟ್ಟಿ ಸಂಬಳ ತಿನ್ನುವ ಅಧ್ಯಾಪಕರ ಸಂಖ್ಯೆ ಹೆಚ್ಚುತ್ತಿರುವ ಇಂದಿನ ಸನ್ನಿವೇಶದಲ್ಲಿ ಜಿಎಸ್ಎಸ್ ಅವರಂಥ ಆದರ್ಶ ಅಧ್ಯಾಪಕರು ಅನುಕರಣೀಯರು. ಎರಡು ಅಥವಾ ಎರಡೂವರೆ ಪುಸ್ತಕ ಬರೆದು ಅದಕ್ಕೆ ಇಡೀ ಪ್ರಪಂಚವನ್ನೇ ಪ್ರತಿಫಲವಾಗಿ ಬೇಡುವ ಬರಹಗಾರರು ಅತೃಪ್ತಿಯಿಂದ ಈಗ ವಿಧಾನಸೌಧದ ಮೆಟ್ಟಲಿನ ಮೇಲೋ ಅಥವಾ ಪ್ರಶಸ್ತಿ ಸಂಸ್ಥೆಗಳ ಬಾಗಿಲಲ್ಲೋ ಕಾಯುತ್ತಿರುವ ಸಂದರ್ಭದಲ್ಲಿ ಜಿಎಸ್ಎಸ್ ಅವರ ನಿರಂತರ ಸೃಜನತತ್ಪರತೆ ಒಂದು ಶ್ಲಾಘನೀಯ ಮಾದರಿಯಾಗಿತ್ತು.
ಅಕಾಡೆಮಿ ಅಧ್ಯಕ್ಷತೆ, ಬ್ರಹ್ಮಪದವಿ ವಿಷ್ಣುಪದವಿಗಳಿಗೂ ಅವರು ಕೈಯೊಡ್ಡುತ್ತಿರಲಿಲ್ಲ. ಪದವಿಗಳು ತಾವಾಗಿಯೇ ಬಂದಾಗ ಅವನ್ನು ಜಾಗರೂಕತೆ ಮತ್ತು ಜವಾಬುದಾರಿಯಿಂದ ನಿಭಾಯಿ ಸುತ್ತಿದ್ದರು. ಪ್ರಶಸ್ತಿಗಳು ತಾವಾಗಿಯೇ ಬಂದಾಗ ಅವನ್ನು ಕೃತಜ್ಞತಾಪೂರ್ವಕವಾಗಿ, ಗಂಭೀರವಾಗಿ ಸ್ವೀಕರಿಸುತ್ತಿದ್ದರು. ಅವರು ರಾಷ್ಟ್ರಕವಿಗಳಾದಾಗ ನಮ್ಮೆಲ್ಲರಿಗೂ ಸಂತಸವಾಗಿತ್ತು.
ಗದ್ಯ ಪದ್ಯಗಳೆರಡನ್ನೂ ಹಿತಮಿತ ಮೃದು ವಚನಗಳಿಂದ ರಚನೆ ಮಾಡುತ್ತಿದ್ದ ಜಿಎಸ್ಎಸ್ ಅವರ ಅಭಿವ್ಯಕ್ತಿಯ ಗುಣ ಮತ್ತು ಗಾತ್ರಗಳೆರಡೂ ಹಿರಿದು. ನವೋದಯದ ರಮ್ಯ ಸಂವೇದನೆಯಿಂದ ಬರೆಯಲಾರಂಭಿಸಿದ ಅವರು ನವ್ಯ ಬಂಡಾಯಾದಿಗಳಿಂದ ಕಲಿಯಬೇಕಾದ್ದನ್ನು ಕಲಿತು ತಮ್ಮ ದಾರಿಯಲ್ಲೇ ಮುನ್ನಡೆಯುತ್ತಾ ಹೋದರು. ಹೊಸತರ ಎಡೆಬಿಡದ ಒಡಂಬಡಿಕೆಯಿಂದ ತಮ್ಮ ಬರಹ,-ಚಿಂತನೆಗಳನ್ನು ವಿಸ್ತರಿಸುತ್ತಾ ಹೋಯಿತು ಅವರ ತೆರೆದ ಮನ.
ಕುವೆಂಪು ಅವರ ಜಾತ್ಯತೀತ ಮತ್ತು ವಿಶ್ವಮಾನವ ತತ್ವಗಳನ್ನು ರಕ್ತವಾಗಿಸಿಕೊಂಡಿದ್ದರು ಜಿಎಸ್ಎಸ್. ಆ ಪರಿಧಿಯಲ್ಲೇ ಬರೆದರು, ಬದುಕಿದರು.
ಸಾಹಿತ್ಯ ಚಿಂತಕರಲ್ಲಿ ಅಗ್ರಗಣ್ಯರೂ, ಅಪರೂಪರೂ ಆಗಿದ್ದ ಜಿಎಸ್ಎಸ್ ಅವರು ಸಂಸ್ಕೃತ ಕಾವ್ಯಮೀಮಾಂಸೆಯ ಬಹುದೊಡ್ಡ ವಿದ್ವಾಂಸರಾಗಿದ್ದರು. ಪಾಶ್ಚ್ಾತ್ಯ ಸೌಂದರ್ಯ ಮೀಮಾಂಸೆಯನ್ನೂ ಚೆನ್ನಾಗಿ ಬಲ್ಲವರಾಗಿದ್ದರು. ಅವರ ಇನ್ನೊಂದು ವೈಶಿಷ್ಟ್ಯವೆಂದರೆ ಕನ್ನಡಕ್ಕೆ ತನ್ನದೇ ಆದ ಕಾವ್ಯಮೀಮಾಂಸೆಯ ವಿವೇಕವಿದೆಯೆಂದು ಪ್ರತಿಪಾದಿಸಿದ್ದು.
ಮುಂದೆ ಹಿರಿಯರಾದ ಕೆ.ವಿ. ಸುಬ್ಬಣ್ಣ ಅವರೂ ಈ ವಿಚಾರವನ್ನು ಇನ್ನೊಂದು ಬಗೆಯಲ್ಲಿ ಪ್ರತಿಪಾದಿಸಿದರು. ಭಾಷಾ ಪರಂಪರೆಗಳಿಗೆ ಸಂಸ್ಕೃತೇತರ ಕಾವ್ಯವಿವೇಕಗಳಿವೆಯೆಂದು ಶಿಸ್ತುಬದ್ಧವಾಗಿ ವಾದಿಸಿದವರು ಭಾರತೀಯ ಸಾಹಿತ್ಯದಲ್ಲೇ ವಿರಳ. ಗುಜರಾತಿಯ ಸೀತಾಂಶು ಯಶಸ್ಚಂದ್ರ, ಮರಾಠಿಯ ನೆಮಾಡೆ, ತಮಿಳಿನ ಜ್ಞಾನಕೂಟ್ಟನ್ ಹೀಗೆ ಎಲ್ಲೋ ಕೆಲವರು ನೆನಪಾಗುತ್ತಾರೆ. ಈ ಸಾಲಿನಲ್ಲಿ ಜಿಎಸ್ಎಸ್ ಅವರಿಗೆ ಅಗ್ರಸ್ಥಾನ.
ಇತರ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳು ಆ ಈ ಜಾತಿ-, ಉಪಜಾತಿಗಳ ಉದ್ಯೋಗ ಕೇಂದ್ರಗಳಾಗಿ ಮಾರ್ಪಡುತ್ತಿವೆಯೋ ಎಂಬ ಅನುಮಾನವಿದ್ದಾಗ ಜಿಎಸ್ಎಸ್, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗವನ್ನು ಒಂದು ಜಾತ್ಯತೀತ ಗುಣಗ್ರಾಹಿ ಸಂಸ್ಥೆಯನ್ನಾಗಿ ಕಟ್ಟಿದರು.
ತಮ್ಮ ಕಿರಿಯ ತಲೆಮಾರಿನ ಪ್ರತಿಭಾವಂತರಾದ ಕೀರಂ, ಚಂದ್ರಶೇಖರ ಕಂಬಾರ, ಕೆಎಂಎಸ್, ಡಿ.ಆರ್. ನಾಗರಾಜ್, ಸಿದ್ದಲಿಂಗಯ್ಯ, ಕೆ.ವಿ. ನಾರಾಯಣ, ಬರಗೂರು, ಕಾಳೇಗೌಡ ನಾಗವಾರ, ವಿದ್ಯಾಶಂಕರ್ ಮುಂತಾದ ಹಲವರನ್ನು ನೇಮಿಸಿ ಕನ್ನಡ ಸಾಹಿತ್ಯದ ಬೋಧನೆ ಮತ್ತು ಸಂಶೋಧನೆಗಳ ಒಂದು ಸುವರ್ಣಯುಗವನ್ನು ಪ್ರಾರಂಭಿಸಿದರು. ಪಂಪನಿಂದ ಹಿಡಿದು ಬೇಂದ್ರೆವರೆಗಿನ ಶ್ರೇಷ್ಠತಮ ಕವಿಗಳ ಕುರಿತ, ಟಿ.ಎಸ್. ಎಲಿಯಟ್ ಮತ್ತು ಆಧುನಿಕತೆ ಕುರಿತ ಹಲವು ಸಮರ್ಥ ವಿಚಾರಗೋಷ್ಠಿಗಳ ಆಯೋಜನೆ ಮಾಡಿ ವಿಮರ್ಶೆ, -ಚಿಂತನೆಗಳ ಗಡಿಗಳನ್ನು ವಿಸ್ತಾರಗೊಳಿಸಿದರು.
ಜಿಎಸ್ಎಸ್ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದು ನನ್ನ ಪ್ರೀತಿಯ ಕವಿಗಳೂ ಮಿತ್ರರೂ ಆದ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಅವರ ನಂತರ. ನಿಸಾರ್ ಅವರು, ನಿದ್ದೆ ಹೋಗಿದ್ದ ಅಕಾಡೆಮಿಯನ್ನು ಚುರುಕುಗೊಳಿಸಿ ಸಕ್ರಿಯವಾಗಿಸಿದ್ದರು. ಆ ನಂತರ ಜಿಎಸ್ಎಸ್ ಅದಕ್ಕೆ ಹೊಸಚಿಂತನೆಯ ಜೀವ ತುಂಬಿದರು. ಪ್ರಕಟಣೆ ಮತ್ತು ಕಾರ್ಯಕ್ರಮಗಳನ್ನು ಹಿಗ್ಗಿಸಿ ವೈವಿಧ್ಯಮಯಗೊಳಿಸಿದರು. ಅವರ ಸಂವೇದನಾತ್ಮಕ ವೈವಿಧ್ಯಕ್ಕೆ ಪೂರಕವಾಗಿ ಅವರ ನಂತರ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪ ಅವರು ಅದಕ್ಕೊಂದು ಸಾಮಾಜಿಕ ವಿಸ್ತಾರವನ್ನು ತಂದುಕೊಟ್ಟರು.
ಇವೆಲ್ಲವೂ ಜಿಎಸ್ಎಸ್ ಅವರ ಸಾರ್ವಜನಿಕ ಕೊಡುಗೆಗಳು. ಆದರೆ ಅವರು ಸ್ನೇಹಜೀವಿಯಾಗಿಯೂ ಲೋಕೋಪಕಾರಿಯೂ ಆಗಿದ್ದರಿಂದ ಅವರ ಒಡನಾಟದಲ್ಲಿದ್ದ ಪ್ರತಿಯೊಬ್ಬನಿಗೂ ವಿಶಿಷ್ಟ ಅನುಭವಗಳಾಗಿವೆ.
ಕಿಲಾರಿ ರೋಡಿನ ರೌಡಿಗಳ ಸಂಗಾತಿಯಾಗಿದ್ದ ನಾನು ಕಾವ್ಯದ ಗಂಭೀರ ವಿದ್ಯಾರ್ಥಿಯಾಗುವ ಪೂರ್ವದಲ್ಲೇ ಜಿ.ಎಸ್. ಶಿವರುದ್ರಪ್ಪನವರ ಹೆಸರಿಗೆ ಪರಿಚಿತನಾಗಿದ್ದೆ. ಬೆಳಗ್ಗೆ ಹಾಸಿಗೆಯಲ್ಲಿ ಮಲಗಿರುವಾಗಲೇ ರೇಡಿಯೊದಲ್ಲಿ ಅವರಿಂದ ರಚಿತವಾದ ಏಳು ಸುತ್ತಿನ ಮಲ್ಲಿಗೆ, ಉಡುಗಣವೇಷ್ಟಿತ ಚಂದ್ರಸುಶೋಭಿತ... ಮುಂತಾದ ಹಾಡುಗಳು ಕಿವಿ ಮನಸ್ಸುಗಳನ್ನು ತುಂಬುತ್ತಿದ್ದವು. ಆದರೆ ಆ ಕವಿ ನನಗಿನ್ನೂ ದೂರದ ಬೆಟ್ಟವಾಗಿದ್ದರು.
ನಮ್ಮ ತಂದೆಯವರ ಲೈಬ್ರರಿಯಲ್ಲಿದ್ದ ಅವರ ಕೆಲವು ಪುಸ್ತಕಗಳನ್ನು ಮುಂದೆ ಹುಡುಕಿತೆಗೆದೆ. ಯಥಾಶಕ್ತಿ ಓದತೊಡಗಿದ್ದೆ. ತುಂಬುತೋಳಿನ ಷರಟು ಮತ್ತು ಕಚ್ಚೆಪಂಚೆಯ ಅವರನ್ನು ಕಂಡದ್ದು ಅವರು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಬಂದ ಹೊಸತರಲ್ಲಿ. ಬೆಂಗಳೂರು ವಿ.ವಿ.ಯ ಸೆನೆಟ್ ಹಾಲಿನಲ್ಲಿ ಅವರು ನಡೆಸಿದ ಕಾರ್ಯಕ್ರಮಕ್ಕೆ ನನ್ನ ತಂದೆಯವರ ಜೊತೆಯಲ್ಲಿ ಹೋಗಿಬಂದೆ. ಆಗ ನಮ್ಮನ್ನು ಜಿಎಸ್ಎಸ್ ಅವರೇ ತಮ್ಮ ಕಾರಿನಲ್ಲಿ ಕರೆದೊಯ್ದಿದ್ದರು. ಕಿರಿಯನಾದ ನನ್ನನ್ನು ಪ್ರೀತಿಯಿಂದ ಮಾತಾಡಿಸಿದ್ದರು.
ಕುಸ್ತಿಪಟುವಾಗಿ ಭುವನಖ್ಯಾತಿಯನ್ನು ಪಡೆಯಬೇಕೆಂಬ ಕನಸಿನಲ್ಲಿ ತೇಲಾಡುತ್ತಿದ್ದ ನಾನು ಗೆಳೆಯ ಕೀರಂ ಅವರ ಜೊತೆಗಿನ ಪಾನಗೋಷ್ಠಿಗಳಲ್ಲಿ ಕವಿತೆಯ ಗೀಳು ಹತ್ತಿಸಿಕೊಂಡೆ. ಸಾಹಿತ್ಯ ಕಾರ್ಯಕ್ರಮಗಳಿಗೆ ಹೋಗತೊಡಗಿ ದಾಗ ಜಿಎಸ್ಎಸ್ ಅವರನ್ನು ನೋಡುವ ಅವಕಾಶ ದೊರಕತೊಡಗಿತು. ಆ ಸಂದರ್ಭದಲ್ಲಿ ಶ್ರೀನಿವಾಸರಾಜು ಸಂಪಾದಿಸುತ್ತಿದ್ದ ‘ಅಂಕಣ’ದಲ್ಲಿ ನನ್ನ ಸಂದರ್ಶನ ಮಾಡಲಾಯಿತು.
ಕನ್ನಡ ಕಾವ್ಯಪರಂಪರೆಯ ಜೊತೆಗಿನ ನನ್ನ ನಂಟನ್ನು ಕುರಿತ ಪ್ರಶ್ನೆಗೆ ಉತ್ತರಿಸುತ್ತಾ ಬಿಎಂಶ್ರೀ ಅವರು ಪ್ರಾರಂಭಿಸಿದ ಆಧುನಿಕ ಕನ್ನಡದ ಕವಿರಾಜಮಾರ್ಗ ನನ್ನದಲ್ಲವೆಂದೂ ಶಿಶುನಾಳರು, ಬೇಂದ್ರೆಯವರು ನಿರ್ಮಿಸಿದ ಕವಿಪ್ರಜಾಮಾರ್ಗ ನನ್ನದೆಂದೂ ಘೋಷಿಸಿಬಿಟ್ಟೆ. ಆಶ್ಚರ್ಯವೆಂದರೆ ಹಿರಿಯರಾದ ಜಿಎಸ್ಎಸ್ ಅವರು ಇದನ್ನು ಓದಿ ಮೆಚ್ಚಿಬಿಟ್ಟಿದ್ದರು. ನನ್ನನ್ನು ಉಲ್ಲೇಖಿಸಿ ಹಲವು ಕಡೆ ಈ ವಿಚಾರಕ್ಕೆ ಒತ್ತುಕೊಡುತ್ತಾ ಬಂದರು. ಆಗ ಹೆಮ್ಮೆಯ ಜೊತೆಗೆ ನನಗೆ ಸ್ವಲ್ಪ ದುರಹಂಕಾರವೂ ಬಂತು.
ಆ ನಂತರ ತುಮಕೂರಿನಲ್ಲಿ ನೌಕರಿ ಹಿಡಿದೆ. ಅಲ್ಲಿ ನನ್ನಂತೆಯೇ ಭಿನ್ನಮತೀಯರಾದ ಕೆ.ಜಿ. ನಾಗರಾಜಪ್ಪ ಅವರು ನನಗೆ ಹತ್ತಿರವಾದರು. ಜಿಎಸ್ಎಸ್ ಅವರ ಮತ್ತು ಕೆ.ಜಿ. ನಾಗರಾಜಪ್ಪ ಅವರ ಸ್ನೇಹ ಬಹಳ ಹಳೆಯದು. ಜಿಎಸ್ಎಸ್ ಆಗಾಗ ಕೆಜಿಎನ್ ಅವರ ಮನೆಯಲ್ಲಿ ಉಳಿಯುತ್ತಿದ್ದರು. ಆಗ ನಡೆದ ಸಂಭಾಷಣೆಗಳಲ್ಲಿ ಅವರಿಂದ ಹಲವು ವಿಷಯಗಳನ್ನು ವಿಶೇಷವಾಗಿ ಕಾವ್ಯ ಮೀಮಾಂಸೆಯ ಬಗ್ಗೆ- ಕಲಿತೆ.
ನನಗೆ ಬೆಂಗಳೂರಿಗೆ ವರ್ಗವಾದ ಮೇಲೆ ಅವರನ್ನು ವ್ಯಕ್ತಿಗತವಾಗಿ ಕಾಣುವ ಸಂದರ್ಭಗಳು ಕಡಿಮೆಯಾದರೂ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭೆಟ್ಟಿಯಾಗುತ್ತಿದ್ದೆವು. ನಾನು ಹೋಮ್ ಸೈನ್ಸ್ ಕಾಲೇಜಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಕನ್ನಡ ವಿಭಾಗದಲ್ಲಿ ಇಂಗ್ಲಿಷ್ ಅಧ್ಯಾಪಕ ಹುದ್ದೆಗೆ ಜಾಹೀರಾತು ಪ್ರಕಟವಾಯಿತು. ನಾನು ಆ ಹುದ್ದೆಯನ್ನಲಂಕರಿಸಬೇಕೆಂದು ಕೀರಂ ಒತ್ತಾಯಿಸಿದರು. ಜಿಎಸ್ಎಸ್ ನನ್ನನ್ನು ತೆಗೆದುಕೊಳ್ಳಲು ಒಪ್ಪಲಿಲ್ಲ. ಅವರಂತೆ ನಾನೂ ಜಾತಿಯಲ್ಲಿ ಲಿಂಗಾಯತನಾಗಿದ್ದರಿಂದ ನಾನು ಬೇಡವೆಂದೂ ಅನ್ಯ ಜಾತಿಯ ಯಾರನ್ನಾದರೂ ಸೂಚಿಸಬೇಕೆಂದೂ ಅವರು ಹೇಳಿದರೆಂದು ಕೀರಂ ನನಗೆ ನೋವಿನಿಂದ ತಿಳಿಸಿದರು. ಅವರ ಜಾತ್ಯತೀತ ನಿಲವಿಗೆ ಇದೊಂದು ನಿದರ್ಶನ.
ಆದರೂ ನನಗಾಗಲೀ ಅವರಿಗಾಗಲೀ ಜಾತಿವಾದದ ಆರೋಪ ತಪ್ಪಲಿಲ್ಲ. ನನ್ನ ವಿದ್ಯಾಗುರುಗಳಾದ ಎಸ್. ರಾಮಸ್ವಾಮಿ ಮತ್ತು ಆತ್ಮೀಯ ದಿವಂಗತ ಕೆ.ಎಸ್.ರಾಧಾಕೃಷ್ಣ ಈ ಇಬ್ಬರ ಜೊತೆ ನನ್ನನ್ನು ಜಿಎಸ್ಎಸ್ ಅವರು ಅಕಾಡೆಮಿಯ ಇಂಗ್ಲಿಷ್ ಪತ್ರಿಕೆ ‘ಅನಿಕೇತನ’ಕ್ಕೆ ಸಂಪಾದಕನನ್ನಾಗಿ ನೇಮಿಸಿದರು. ಆಗ ಹಿಂದಿನ ಸಂಪಾದಕ ಮಂಡಲಿಯ ಒಬ್ಬ ಮಹನೀಯರು ಒಬ್ಬ ಸಾಹಿತ್ಯ ಪತ್ರಿಕೆಯ ಸಂಪಾದಕನ ಜೊತೆ ಸೇರಿ ನಾನು, ಜಿಎಸ್ಎಸ್ ಇಬ್ಬರೂ ಲಿಂಗಾಯತರಾಗಿದ್ದರಿಂದ ನನ್ನ ನೇಮಕಾತಿಯಾಯಿತೆಂದು ದುಶ್ಪ್ರಚಾರ ಮಾಡಿದರು. ಮಂಜಿನಂತೆ ಬೆಳ್ಳಗಿದ್ದರೂ, ಮಂಜುಗಡ್ಡೆಯಂತೆ ತಣ್ಣಗಿದ್ದರೂ ನೀನು ಅಪವಾದಗಳಿಂದ ತಪ್ಪಿಸಿಕೊಳ್ಳಲಾರೆ ಎಂಬ ಹ್ಯಾಮ್ಲೆಟ್ಟನ ಮಾತು ನೆನಪಾಯಿತು.
ಸಾಹಿತ್ಯ ಅಕಾಡೆಮಿಯಲ್ಲಿ ಸಂಪಾದನ ಕೆಲಸ ಮಾಡುವ ಸಂದರ್ಭದಲ್ಲಿ ಜಿಎಸ್ಎಸ್ ಅವರ ಜೊತೆ ನಿಕಟ ಸಂಪರ್ಕ, -ಸಂಭಾಷಣೆಗಳಿಗೆ ಅವಕಾಶವಾಯಿತು. ದಿನಾ ಸಂಜೆ ಅವರು ಗಾಂಧಿ ಬಜಾರಿನವರೆಗೆ ತಮ್ಮ ಕಾರಿನಲ್ಲಿ ನನ್ನನ್ನು ಬಿಟ್ಟುಹೋಗುತ್ತಿದ್ದರು. ನನ್ನ ಕವಿತೆಗಳನ್ನು ಓದಿಸಿ ಕೇಳಿಸಿಕೊಂಡು ಪ್ರೋತ್ಸಾಹಿಸುತ್ತಿದ್ದರು.
ಆರು ತಿಂಗಳ ಹಿಂದೆ ಜರ್ಮನಿಯಿಂದ ನಾನು ಗುರುಗಳಾದ ಕೆಎಂಎಸ್ ಅವರಿಗೆ ಫೋನು ಮಾಡಿದಾಗ ಕೊನೆಯ ಸಲ ಅವರ ಜೊತೆ ಮಾತಾಡಿದೆ. ನನ್ನ ‘ಪ್ರಜಾವಾಣಿ’ ಅಂಕಣ ಕುರಿತು ‘ತಪ್ಪದೆ ಓದುತ್ತಿದ್ದೇನೆ, ತುಂಬಾ ಚೆನ್ನಾಗಿ ಬರೆಯುತ್ತಿದ್ದೀರಾ’ ಎಂದು ಮೆಚ್ಚುಗೆಯ ಮಾತಾಡಿದ್ದರು. ಬೆಂಗಳೂರಿಗೆ ಬಂದಾಗ ಬನ್ನಿ ಎಂದು ಕರೆ ನೀಡಿದರು.ಆದರೆ ಮತ್ತೆ ಅವರ ಭೆಟ್ಟಿಯಾಗುವುದರಲ್ಲಿ ಮರಣ ಅಡ್ಡ ಬಂತು.
ಅವರ ವಿದ್ವತ್ತು ಮತ್ತು ಪ್ರತಿಭೆಗಳಿಗೆ ಸಲಾಮು. ಆದರೆ ಒಂದು ಪ್ರಶ್ನೆ ನನ್ನನ್ನು ಗಾಢವಾಗಿ ಕಾಡಹತ್ತಿದೆ. ಆಧುನಿಕರಲ್ಲಿ ನನಗೆ ಪ್ರಿಯರಾದ ಕುವೆಂಪು, ಪು.ತಿ.ನ., ಅಡಿಗ, ನರಸಿಂಹಸ್ವಾಮಿ, ಲಂಕೇಶ್, ಕಂಬಾರರ ಕವಿತೆಗಳು ನನ್ನನ್ನು ಕಾಡಿದ ಹಾಗೆ ಜಿಎಸ್ಎಸ್ ಕಾವ್ಯ ಯಾಕೆ ನನ್ನನ್ನು ಕಾಡುತ್ತಿಲ್ಲ. ಬಹುಶಃ ಹೀಗಿರಬಹುದು. ಅತಿಗಳನ್ನು ಅನುಮಾನಿಸಿದ ಅವರ ಕಾವ್ಯ ಮಧ್ಯಮಮಾರ್ಗವನ್ನು ಹಿಡಿಯಿತು.
ಈ ಮಧ್ಯಮ ಮಾರ್ಗ ಅವರ ಕಾವ್ಯದ ಮಧ್ಯಮವರ್ಗೀಯತೆಯೂ ಹೌದು. ಅವರ ಕಾವ್ಯದ ಹಿತವಾದ ತಂಗಾಳಿಯಲ್ಲಿ ನಾವು ಸುಖಪಡಬಹುದು. ಇದು ಯಥಾಸ್ಥಿತಿವಾದದ ಇನ್ನೊಂದು ಮುಖವೇ. ಪುತಿನ ಅವರ ಕಣಿವೆಯ ಮುದುಕನಾಗಲಿ, ಅಡಿಗರ ವರ್ಧಮಾನವಾಗಲಿ, ಲಂಕೇಶರ ಅವ್ವನಾಗಲಿ, ಕೆಎಸ್ನ ಅವರ ತೆರೆದ ಬಾಗಿಲಿನ ವಿಹ್ವಲ ವಯೋವೃದ್ಧನಾಗಲಿ- ಈ ಎಲ್ಲರೂ ಮಧ್ಯಮವರ್ಗೀಯ ಮಿತಿಗಳಾಚೆಗಿನ ಮಾನವ ಸಾಧ್ಯತೆಗಳು. ಕೊಲುವ, ಕೊಂದು ಬದುಕಿಸುವ ಜೀವನೋತ್ತರ ದನಿಗಳು. ತನ್ನೆಲ್ಲ ವಿಪುಲತೆ ಮತ್ತು ರಚನಾಕೌಶಲಗಳ ನಡುವೆಯೂ ಜಿಎಸ್ಎಸ್ ಅವರ ಕಾವ್ಯ ಇಂಥಾ ಸಾಧ್ಯತೆಗಳಿಂದ ವಂಚಿತವಾಗಿದೆಯೆಂಬ ಆತಂಕ ನನ್ನದು.
ಗೋಳೀಕರಣದ ಪಿಪಾಸೆಯಿಂದ ಜೀವದಾಯಕ ನದಿ, ನೆಲ, ಕಾಡುಗಳನ್ನು ಕಳೆದುಕೊಂಡು ಬದುಕು- ಸಾವುಗಳೆರಡರಿಂದಲೂ ಗಡಿಪಾರಾದ ನಮ್ಮ ಸೋದರಸೋದರಿಯರ ಆಕ್ರಂದನಗಳಿಗೆ ನಾವು ಮಿಡಿಯದಂತೆ ಮಾಡುತ್ತಿರುವುದು ಮಧ್ಯಮವರ್ಗದ ಬೆಚ್ಚಗಿನ ಮನೆಗಳೇ ಅಲ್ಲವೆ?
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.