ನನ್ನ ಶಾಲಾ ದಿನಗಳಲ್ಲಿ ಬೆಳಿಗ್ಗೆ ಮುಖ ತೊಳೆದು ನನ್ನ ತಂದೆಯ ಮುಂದೆ ನಿಲ್ಲಬೇಕಿತ್ತು. ಅವರು ಆ ವೇಳೆಗಾಗಲೇ ತಯಾರಾಗಿ ಹಣೆಗೆ ಉದ್ದನಾಮ ಹಚ್ಚಿ ಕುಳಿತಿರುತ್ತಿದ್ದರು. ಅವರ ಮುಂದೆ ನಿಂತಾಗ, ಒಂದು ಕಡ್ಡಿಗೆ (ತೆಂಗಿನ ಗರಿಯ ಕಡ್ಡಿ) ಕೆಂಪು ನಾಮ ಬಳಿದು ನನಗೂ ಹಣೆಗೆ ಉದ್ದಕ್ಕೆ ಬರೆಯುತ್ತಿದ್ದರು. ಆ ರೀತಿ ಬರೆಯುವಾಗ ನಾನು ಬಹಳ ಶಿಸ್ತಾಗಿ, ನೆಟ್ಟಗೆ ನಿಲ್ಲಬೇಕಿತ್ತು. ಇಲ್ಲವಾದಲ್ಲಿ ಇಡೀ ದಿನ ಸೊಟ್ಟ ನಾಮ ಹೊತ್ತು ತಿರುಗಬೇಕಿತ್ತು.
ಇಡೀ ಶಾಲೆಯಲ್ಲಿ ನನ್ನೊಬ್ಬನ ಹಣೆಯ ಮೇಲೆ ಮಾತ್ರ ಈ ರೀತಿ ‘ಅಯ್ಯಂಗಾರ್ ಲಾಂಛನ’. ಶಾಲೆಯಿಂದ ಸಂಜೆ ಮನೆಗೆ ಬಂದಮೇಲೆ ಮುಖ ತೊಳೆದ ನಂತರ ‘ಅಡ್ಡ ವಿಭೂತಿ’ ಹಚ್ಚಿ, ಭಕ್ತಿ ಭಂಡಾರಿ ಬಸವಣ್ಣನ ಶಿಷ್ಯನಂತೆ ಬೇರೊಂದು ಅವತಾರಕ್ಕೆ ನನ್ನನ್ನು ಒಡ್ಡುತ್ತಿದ್ದರು. ಈ ದಿನದ ತನಕ ನನ್ನ ಈ ಎರಡು ಅವತಾರಗಳಿಗೆ ಕಾರಣ ನಿಗೂಢವಾಗಿದೆ. ಯಾವ ಸಿದ್ಧಾಂತಗಳ ಸಮನ್ವಯದ ಸಂಕೇತವೋ ತಿಳಿಯದಾಗಿದೆ. ನಮ್ಮ ತಂದೆ ನಾಸ್ತಿಕರೋ ಆಥವಾ ಆಸ್ತಿಕರೋ ಗೊತ್ತಾಗುತ್ತಿರಲಿಲ್ಲ. ಕುವೆಂಪು ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಅವರು, ವೈಚಾರಿಕ ನೆಲೆಗಟ್ಟಿನಲ್ಲಿ ನಮ್ಮನ್ನು ಬೆಳೆಸಿದರು. ಅವರಿಗೆ ಸತ್ಯನಾರಾಯಣ ವ್ರತ, ಶನಿಮಹಾದೇವರ ಪೂಜೆ ಇವೆಲ್ಲದರಲ್ಲಿ ನಂಬಿಕೆ ಇರಲಿಲ್ಲ. ಮೂಢನಂಬಿಕೆ ಮತ್ತು ಅಂಧಶ್ರದ್ಧೆಯ ಕಡು ವಿರೋಧಿಯಾಗಿದ್ದರು. ರಾಹುಕಾಲ, ಗುಳಿಕಾಲಗಳಲ್ಲಿ ನಂಬಿಕೆ ಇಟ್ಟವರಲ್ಲ. ಎಲ್ಲ ಕಾಲಗಳೂ ಒಳ್ಳೆಯ ಕಾಲವೆಂದು ನಂಬಿಕೆ ಇದ್ದವರು.
ನಾನು ಕನ್ನಡ ಓದಲು ಕಲಿತ ಕೂಡಲೇ ನಮ್ಮ ತಂದೆ ‘ಕುಮಾರವ್ಯಾಸ ಭಾರತ’ ವಾಚನ ಮಾಡಲು ಕಲಿಸಿದರು. ಅಂದಿನ ಮೈಸೂರು ಸರ್ಕಾರ, ಸಂಸ್ಕೃತಿ ಇಲಾಖೆಯಿಂದ ರೂ 2 ರಿಯಾಯ್ತಿ ದರದಲ್ಲಿ ‘ಕುಮಾರವ್ಯಾಸ ಭಾರತ’ವನ್ನು ಪ್ರಕಟಿಸಿ ಮಾರಾಟ ಮಾಡುತ್ತಿತ್ತು.
ಕುವೆಂಪು ಮತ್ತು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಂಪಾದಕತ್ವದಲ್ಲಿ ಅದು ಪ್ರಕಟವಾಗಿತ್ತು. ಆ ಕಾಲದಲ್ಲಿ ನನಗೆ ಬಹು ಭಾರವೆನಿಸಿದ ಕೃತಿಯನ್ನು ನಮ್ಮ ತಂದೆ ಮನೆಗೆ ತಂದಿದ್ದರು. ಪ್ರತಿದಿನ ಸಂಜೆ ಒಂದು ಗಂಟೆ ವಾಚನ ಮಾಡಬೇಕಿತ್ತು. ಸಂಜೆ ಹಣೆಗೆ ವಿಭೂತಿ ಬಳಿದುಕೊಂಡು ‘ಕುಮಾರವ್ಯಾಸ ಭಾರತ’ ವಾಚಿಸುವುದೊಂದು ದಿನಚರಿಯೇ ಆಗಿಹೋಯ್ತು. ‘ಶ್ರೀ ವನಿತೆಯರಸನೆ ವಿಮಲ ರಾಜೀವ ಪೀಠನ ಪಿತನೆ ಜಗಕತಿ ಪಾವನನೆ ...’ ಹೀಗೆ ಮುಂದುವರಿಯುತ್ತಿತ್ತು. ಈ ಪದ್ಯಗಳಿಗೆ ನಮ್ಮ ತಂದೆಯವರು ಸರಳವಾದ ರೀತಿಯಲ್ಲಿ ಅರ್ಥವಾಗುವಂತೆ ವಿವರಣೆ ನೀಡುತ್ತಿದ್ದರು. ಶಾಲೆಗೆ ನಡೆದುಕೊಂಡು ಹೋಗಿ ಆಟವಾಡಿ, ತಿರುಗಾಡಿ ಸುಸ್ತಾಗಿರುತ್ತಿದ್ದ ನನಗೆ ನಿದ್ರೆ ಒತ್ತರಿಸಿಕೊಂಡು ಬರುತ್ತಿತ್ತು. ಎಲ್ಲಾದರೂ ಅಪ್ಪಿ–ತಪ್ಪಿ ತೂಕಡಿಸಿದರೆ ನನಗೆ ಸೋಮಾರಿತನದ ಪಟ್ಟ ಸಿಗಬಹುದೆಂಬ ಭಯವಿತ್ತು. ಹೀಗಾಗಿ ಬಹಳ ಎಚ್ಚರದಿಂದ, ಕಷ್ಟದಿಂದ ವಾಚನ ಮುಂದುವರಿಸುತ್ತಿದ್ದೆ.
ನನ್ನ ಕೋಪ ಈ ಕುಮಾರವ್ಯಾಸ ಭಾರತವನ್ನು ಅಗ್ಗದ ದರದಲ್ಲಿ ಒದಗಿಸಿದವರ ಮೇಲೆ ತಿರುಗುತ್ತಿತ್ತು. ಊರಲ್ಲಿ ಯಾರ ಮನೆಯಲ್ಲೂ ಇಲ್ಲದ ಪುಸ್ತಕ ನಮ್ಮ ಮನೆಗೆ ಬಂದು ನನ್ನನ್ನು ದೊಡ್ಡ ಸಂಕಟಕ್ಕೆ ಸಿಲುಕಿಸಿತ್ತು. ನನ್ನ ಸವಿ ಸಂಜೆಗಳನ್ನು ಹಾಳು ಮಾಡಿತ್ತು. ಆ ಭಾರದ ‘ಭಾರತ’ವನ್ನು ಶಪಿಸುತ್ತಿದ್ದೆ. ‘ಕ್ರೂರ ಕರ್ಮಿಗಳೆತ್ತಬಲ್ಲರು ಭಾರತದ ಕಥನ ಪ್ರಸಂಗವ’ ಎಂಬ ಅದರದ್ದೇ ಪದ್ಯದ ಅರ್ಥವನ್ನು ವಿವರಿಸಿದಾಗ ಅದನ್ನು ಶಪಿಸುವುದು ಮಹಾಪಾಪವೆಂದೂ ಮತ್ತು ಅದರಿಂದ ಭಯಂಕರ ಕೆಡಕು ಉಂಟಾಗಬಹುದೆಂದು ಹೆದರಿ ನಿಂದಿಸದೆ ತೆಪ್ಪಗೆ ಓದುವುದನ್ನು ಮುಂದುವರಿಸುತ್ತಿದ್ದೆ. ಆ ಒತ್ತಾಯದ ಓದಿನ ಫಲದಿಂದ ‘ಕುಮಾರವ್ಯಾಸ ಭಾರತ’ದ ಹಲವಾರು ಪದ್ಯಗಳು ಕಂಠಪಾಠವಾಗಿವೆ.
ಮುಂದೆ ನನ್ನನ್ನು ಕನ್ನಡ ಸಾಹಿತ್ಯದ ಓದಿಗೆ ಹಚ್ಚಲು ಇದು ನಾಂದಿಯಾಯಿತು. ಹೀಗೆ ಚಿಕ್ಕಂದಿನಿಂದಲೇ ಶುರುವಾದ ಸಂಸ್ಕೃತಿ
ಇಲಾಖೆಯ ಸಂಬಂಧ ಮುಂದೊಂದು ದಿನ ಆ ಇಲಾಖೆಯ ಜವಾಬ್ದಾರಿ ನಿರ್ವಹಿಸುವ ಹಂತ ತಲುಪಬಹುದೆಂದು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಅದೇ ಕುಮಾರವ್ಯಾಸ ಭಾರತ ಕೃತಿಯನ್ನು ಹಾಗೂ ಇನ್ನಿತರ ನೂರಾರು ಸಾಹಿತ್ಯಿಕ ಕೃತಿಗಳನ್ನು ಮರು ಮುದ್ರಣಗೊಳಿಸಿ ರಿಯಾಯ್ತಿ ದರದಲ್ಲಿ ಮಾರಾಟ ಮಾಡಿ ನನ್ನ ಮುಂದಿನ ಪೀಳಿಗೆಯವರಿಗೆ ನಾನು ಅನುಭವಿಸಿದ ಸಂಕಷ್ಟಗಳು ಮರುಕಳಿಸುವಂತೆ ಮಾಡಿ ಸೇಡು ತೀರಿಸಿಕೊಂಡೆ!
70ರ ದಶಕದಲ್ಲಿ ಆಕಾಶವಾಣಿ ವಿವಿಧ ಭಾರತಿ ತರಂಗಾಂತರದಲ್ಲಿ ಮೂಡಿ ಬರುತ್ತಿದ್ದ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್(ಎಂಎಸ್ಐಎಲ್) ಗೀತೆಗಳು ನನ್ನನ್ನು ಬಹುವಾಗಿ ಆಕರ್ಷಿಸಿದ್ದವು. ಎಂಎಸ್ಐಎಲ್ ಸಂಸ್ಥೆ ನನಗೆ ಮೊಟ್ಟ ಮೊದಲು ಪರಿಚಯವಾದದ್ದು ಆಕಾಶವಾಣಿಯ ವಿವಿಧ ಭಾರತಿ ತರಂಗಾಂತರದಲ್ಲಿ ಮೂಡಿ ಬರುತ್ತಿದ್ದ ಎಂಎಸ್ಐಎಲ್ ಗೀತೆಗಳು ಎಂಬ ಕಾರ್ಯಕ್ರಮದ ಮುಖಾಂತರ. ಪ್ರಖ್ಯಾತ ಕವಿಗಳ ರಚನೆಗಳನ್ನು ನಾಡಿನ ಪ್ರತಿಭಾನ್ವಿತ ಗಾಯಕರು ಪ್ರಸ್ತುತಪಡಿಸುತ್ತಿದ್ದ ಕಾರ್ಯಕ್ರಮವದು.
ವಾರಕ್ಕೊಮ್ಮೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿದ್ದ ಆ ಮಧುರ ಗಾಯನದ ಪ್ರಸಾರ ನನ್ನನ್ನು ಅಯಸ್ಕಾಂತದಂತೆ ಸೆಳೆದಿತ್ತು. ನನ್ನ ಕಾಲೇಜಿನ ದಿನಗಳಲ್ಲಿ ಕಾರ್ಯಕ್ರಮ ಸವಿಯಲು ಹಲವಾರು ಸ್ನೇಹಿತರೊಂದಿಗೆ ರೇಡಿಯೊ ಮುಂದೆ ಬಹಳ ಕಾತರದಿಂದ ಕೇಳುತ್ತಿದ್ದ ಕಾರ್ಯಕ್ರಮ ಅದು.
ಬಹುಪಾಲು ಕವಿತೆಗಳಿಗೆ ಮೈಸೂರು ಅನಂತಸ್ವಾಮಿಯವರ ಸ್ವರ ಸಂಯೋಜನೆ, ಗಾಯನ ಇರುತ್ತಿತ್ತು. ಅದೇ ಸಮಯದಲ್ಲಿ ಪ್ರಸಿದ್ಧಿಗೆ ಬಂದ ಸಿ.ಅಶ್ವತ್ಥ, ಶಿವಮೊಗ್ಗ ಸುಬ್ಬಣ್ಣ, ರತ್ನಮಾಲಾ, ಮಾಲತಿ... ಆಗಲೇ ಹೆಸರುವಾಸಿಯಾಗಿದ್ದ ಪಿ.ಕಾಳಿಂಗರಾವ್, ಬಿ.ಕೆ. ಸುಮಿತ್ರಾ, ಶ್ಯಾಮಲಾ ಭಾವೆ, ಕಸ್ತೂರಿ ಶಂಕರ್ ಮುಂತಾದವರು ರಸಿಕರಿಗೆ ತಮ್ಮ ಗಾಯನದ ವಿಶೇಷ ಸವಿಯನ್ನು ನೀಡುತ್ತಿದ್ದರು. ಎಂಎಸ್ಐಎಲ್ ಸಂಸ್ಥೆ ತಾನು ತಯಾರಿಸಿ ಮಾರಾಟ ಮಾಡುತ್ತಿದ್ದ ಲೇಖಕ್ ನೋಟ್ ಬುಕ್ ಮತ್ತು ಇನ್ನಿತರ ಸಾಮಗ್ರಿಗಳ ಜಾಹೀರಾತಿಗಾಗಿ ಈ ಕಾರ್ಯಕ್ರಮವನ್ನು ಸಂಯೋಜಿಸಿ ಪ್ರಸಾರ ಮಾಡುತ್ತಿತ್ತು. ನಾಟಕಕಾರ ಪರ್ವತವಾಣಿ ಅವರು ಈ ಕಾರ್ಯಕ್ರಮವನ್ನು ತುಂಬಾ ಸ್ವಾರಸ್ಯಕರವಾಗಿ, ನಾಟಕೀಯವಾಗಿ, ರಂಜನೀಯವಾಗಿ ಪ್ರಸ್ತುತಪಡಿಸುತ್ತಿದ್ದರು.
ಕುವೆಂಪು, ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಚಂದ್ರಶೇಖರ ಕಂಬಾರ, ಕೆ.ಎಸ್. ನರಸಿಂಹಸ್ವಾಮಿ, ನಿಸಾರ್ ಅಹಮದ್, ಜಿ.ಎಸ್. ಶಿವರುದ್ರಪ್ಪ, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಹೀಗೆ ಹಲವಾರು ಪ್ರಸಿದ್ಧ ಕವಿಗಳ ಕವನಗಳನ್ನು ಮೊದಲ ಬಾರಿಗೆ ಕೇಳಿದ, ಆಸ್ವಾದಿಸಿದ, ಆನಂದಿಸಿ ಸಂಭ್ರಮಿಸಿದ ಕ್ಷಣಗಳು ನನ್ನ ಮನಸ್ಸಿನಲ್ಲಿ ಸದಾ ಹಸಿರಾಗಿವೆ. ನನ್ನ ವಯೋಮಾನದ ಲಕ್ಷಾಂತರ ಕನ್ನಡಿಗರು ಈ ಕಾರ್ಯಕ್ರಮದಿಂದ ತನ್ಮಯಗೊಂಡು ಸುಖಿಸಿದ ಸಮಯವದು. ಕೆಲಕಾಲ ನಡೆದ ಕಾರ್ಯಕ್ರಮ ನಂತರ ನಿಂತು ಹೋಯಿತು. ಆದರೆ, ಅದರ ಗುಂಗು ನನ್ನನ್ನು ಬಿಡಲಿಲ್ಲ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕನಾಗಿ ಬಂದಾಗ ಎಂಎಸ್ಐಎಲ್ ಗೀತೆಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವಾರು ಗಾಯಕರ ನೇರ ಸಂಪರ್ಕ ಒದಗಿತು. ಮತ್ತೊಮ್ಮೆ ಅವರಿಂದ ಅದೇ ಗೀತೆಗಳನ್ನು ಕೇಳುವ ಭಾಗ್ಯ ನನ್ನದಾಯಿತು. ಸಂಸ್ಕೃತಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ಸುಮಾರು 12 ವರ್ಷಗಳ ನಂತರ ಎಂಎಸ್ಐಎಲ್ ಸಂಸ್ಥೆಗೆ ಎಂ.ಡಿ. ಆಗಿ ನೇಮಕಗೊಂಡೆ. ರಾಜ್ಯದೆಲ್ಲೆಡೆ ವಿವಿಧ ಜಿಲ್ಲೆಗಳಲ್ಲಿ ಮತ್ತು ಇಲಾಖೆಗಳಲ್ಲಿ ಕೆಲಸ ಮಾಡಿದರೂ ಸಂಸ್ಕೃತಿ ಇಲಾಖೆಯ ಹಳೆಯ ಸಂಬಂಧ ಒಂದಲ್ಲ ಒಂದು ರೀತಿಯಲ್ಲಿ ಬೆಳೆಯುತ್ತಲೇ ಹೋಯ್ತು. ಕರ್ನಾಟಕ ಗಾನಕಲಾ ಪರಿಷತ್, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಆಯೋಜಿಸಿದ ಸಮ್ಮೇಳನಗಳು, ವಿಜಾಪುರದಲ್ಲಿ ನಡೆದ ಪಟ್ಟದಕಲ್ಲು, ನವರಸಪುರ ಉತ್ಸವಗಳು, ವಿವಿಧ ಅಕಾಡೆಮಿಗಳು, ನಾನು ಕಾರ್ಯ ನಿರ್ವಹಿಸುತ್ತಿದ್ದ ಜಿಲ್ಲೆಗಳಲ್ಲಿ ನಡೆಸಿದ ಕಾರ್ಯಕ್ರಮಗಳು... ಹೀಗೆ ನನ್ನ, ಸಾಹಿತಿಗಳ, ಕಲಾವಿದರ ನಂಟು ಗಟ್ಟಿಯಾಗಿ ಬೆಳೆಯಿತು. ಆಡಳಿತಾನುಭವಕ್ಕೆ ಹೊಸ ಆಯಾಮ ನೀಡಿತು.
ಇದೇ ಜಾಡಿನಲ್ಲಿ ಎಂಎಸ್ಐಎಲ್ ಸಂಸ್ಥೆಗೆ ಬಂದಾಗ ಕನ್ನಡ ಕವನಗಳ ಗಾಯನದ ಬಗ್ಗೆ ಒಂದು ಹೊಸ ಪ್ರಯತ್ನ ಮಾಡುವ ಅವಕಾಶ ಒದಗಿತು. ಕಾಲೇಜಿನಲ್ಲಿ ಕಲಿಯುವಾಗ ಎಂಎಸ್ಐಎಲ್ ಸಂಸ್ಥೆ, ಆಕಾಶವಾಣಿ ವಿವಿಧ ಭಾರತಿ ತರಂಗಾಂತರದಲ್ಲಿ ತನ್ನ ಸಂಸ್ಥೆಯ ಕೆಲವು ಸಾಮಗ್ರಿಗಳ ಜಾಹೀರಾತಿಗಾಗಿ ಆಯೋಜಿಸಿದ್ದ ಎಂಎಸ್ಐಎಲ್ ಗೀತೆಗಳ ಕಾರ್ಯಕ್ರಮ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿತ್ತು. ಮೈಸೂರು ಅನಂತಸ್ವಾಮಿ ಕರ್ನಾಟಕ ಕಂಡ ಅದ್ಭುತ ಗಾಯಕರು. ರಾಗ ಸಂಯೋಜಕರು. ಕವಿಕಾವ್ಯದ ವಿಶೇಷ ಒಳನೋಟವಿದ್ದ ಅಚ್ಚಕನ್ನಡದ ಅದ್ಭುತ ಪ್ರತಿಭೆ. ಮಿತಭಾಷಿ, ಸ್ನೇಹಮಯಿ, ಅತ್ಯಂತ ಸೃಜನಶೀಲ ಗಾಯಕ. ಕವಿಯ ಪರಕಾಯ ಪ್ರವೇಶ ಮಾಡಿ ಕಾವ್ಯದ ಒಳತೋಟಿಯನ್ನು, ತಿರುಳನ್ನು ಶ್ರೋತೃಗಳಿಗೆ ಅತಿ ಮಧುರವಾಗಿ ಉಣಬಡಿಸುತ್ತಿದ್ದರು.
ಕವಿಗಳನ್ನು, ಕವಿತೆಗಳನ್ನು ಪ್ರಸಿದ್ಧಿಗೊಳಿಸಿದರು. ಹೊಸ ಕೇಳುಗರನ್ನು ಸೃಷ್ಟಿಸಿದರು. ಅವರು ರಾಗ ಸಂಯೋಜಿಸಿರುವ ಕುವೆಂಪು ಅವರ ‘ತನುವು ನಿನ್ನದು ಮನವು ನಿನ್ನದು’, ಬೇಂದ್ರೆ ಅವರ ‘ಆವು ಈವಿನ ನಾವು ನೀವಿಗೆ’, ಅಡಿಗರ ‘ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು’, ಕೆ.ಎಸ್.ನ ಅವರ ಗೀತೆಗಳು, ನಿಸಾರ್ ಅಹಮದ್ ಅವರ ‘ನಿತ್ಯೋತ್ಸವ ತಾಯಿ ನಿತ್ಯೋತ್ಸವ’, ‘ಕುರಿಗಳು ಸಾರ್ ಕುರಿಗಳು’, ಜಿ.ಎಸ್.ಎಸ್ ಅವರ ‘ಎದೆ ತುಂಬಿ ಹಾಡಿದೆನು’ ಜನಪ್ರಿಯವಾಗಿದ್ದವು. ಸಿ.ಅಶ್ವತ್ಥ ರಾಗ ಸಂಯೋಜಕರಾಗಿ, ಗಾಯಕ ರಾಗಿ ಶಿಶುನಾಳ ಷರೀಫರ ಪದಗಳನ್ನು ಪ್ರಸಿದ್ಧಿಗೊಳಿಸಿದರು. ಶಿವಮೊಗ್ಗ ಸುಬ್ಬಣ್ಣ ಅವರ ಕಂಠಸಿರಿ ನಾಡಿನ ಮನೆಮಾತಾಯ್ತು. ಸುಗಮ ಸಂಗೀತದ ಸುವರ್ಣ ಸಮಯ ಅದು.
ಮೂರು ದಶಕಗಳ ನಂತರ ಸಂಸ್ಥೆಯ ಮುಖ್ಯಸ್ಥನಾಗಿ ಈ ಹಳೆಯ ಹಾಡುಗಳಿಗಾಗಿ ಹುಡುಕಾಡಿದೆ. ಎಲ್ಲ ಸರ್ಕಾರಿ ಸಂಸ್ಥೆಗಳಂತೆ ಇಲ್ಲಿ ಸಹ ಏನೂ ದಾಖಲೆಗಳಿರಲಿಲ್ಲ, ಹಾಡಿನ ಧ್ವನಿಸುರುಳಿ ಸಿಗಲಿಲ್ಲ. ಸತತ ಪ್ರಯತ್ನದ ನಂತರ ಅವು ಪ್ರಭಾತ್ ಸಂಸ್ಥೆಯಲ್ಲಿ ಸಿಕ್ಕವು.
ಪ್ರಭಾತ್
ಕಲಾವಿದ ವೆಂಕಟೇಶ್ ಅವರ ನೆರವಿನಿಂದ ಹಳೆಯ ‘ಸ್ಪೂಲ್’ಗಳನ್ನೆಲ್ಲ ಹೊರತೆಗೆದು ಲಹರಿ ಸಂಸ್ಥೆಯ ವೇಲು ಅವರಿಂದ ಅವುಗಳನ್ನೆಲ್ಲ ಪುನಃ ಸಂಸ್ಕರಿಸಿ ಮೂಲಸ್ಥಿತಿ ತರಲು ಸಾಧ್ಯವಾಯ್ತು. ಕಲಾವಿದ ಎಸ್.ಜಿ.ವಾಸುದೇವ ಅವರಿಂದ ಕವರ್ ಡಿಸೈನ್ ಮಾಡಿಸಿ, ಲಹರಿ ಸಂಸ್ಥೆ ಮುಖಾಂತರ ಬಿಡುಗಡೆ ಮಾಡಲಾಯಿತು.
ಹಳೆಯ ಎಂಎಸ್ಐಎಲ್ ಗೀತೆಗಳಿಗೆ ಮರುಜೀವ ಕೊಟ್ಟ ನಂತರ ದೂರದರ್ಶನ ಚಂದನದ ಮುಖಾಂತರ ‘ನಿತ್ಯೋತ್ಸವ’ ಎಂಬ ಹೊಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ನಿತ್ಯೋತ್ಸವ ಕನ್ನಡದ ಮೊದಲ ರಿಯಾಲಿಟಿ ಷೋ. ಇಡೀ ರಾಜ್ಯದ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿ–ವಿದ್ಯಾರ್ಥಿನಿಯರು ಜಿಲ್ಲಾಮಟ್ಟ ಮತ್ತು ವಿಭಾಗ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದನ್ನು ದೂರದರ್ಶನ ನೇರಪ್ರಸಾರ ಮಾಡಿತು. ಗ್ರಾಮೀಣ ಪ್ರತಿಭೆಗಳಿಗೆ ದೊರೆತ ಅದ್ಭುತ ಅವಕಾಶ. ಅದರ ಸದ್ಬಳಕೆ ಪರಿಣಾಮ ಹೊಸ ಗಾಯಕ–ಗಾಯಕಿಯರ ಉದಯ. ಅವರ ಮೊದಲ ಕ್ಯಾಸೆಟ್ಗಳು ಹಳೆಯ ಎಂಎಸ್ಐಎಲ್ ಗೀತೆಗಳೊಂದಿಗೆ ಬಿಡುಗಡೆಯಾದವು. ’ನಿತ್ಯೋತ್ಸವ’ದ ಕವಿ ನಿಸಾರ್ ಅಹಮದ್ ಅವರು ಕ್ಯಾಸೆಟ್ ಬಿಡುಗಡೆ ಮಾಡುವಾಗ ಪ್ರೋತ್ಸಾಹದ ಮಾತುಗಳನ್ನು ಆಡಿದರು.
ಈ ಯುವ ಪ್ರತಿಭೆಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದು ಅದು ಚಂದನದಲ್ಲಿ ನೇರ ಪ್ರಸಾರವಾಯ್ತು. ಅಂದಿನ ಸಭೆ ಇಂದ್ರನ ಆಸ್ಥಾನದಂತಿತ್ತು ಎಂದು ನಿಸಾರ್ ಬಣ್ಣಿಸಿದರು. ನನ್ನ ಪೀಳಿಗೆಯವರು ಕೇಳಿಬೆಳೆದ ಎಂಎಸ್ಐಎಲ್ ಗೀತೆಗಳ ಸಂಭ್ರಮವನ್ನು ಹೊಸ ಪೀಳಿಗೆಯ ಕನ್ನಡಿಗರು ನಿತ್ಯೋತ್ಸವವನ್ನು ನೋಡಿ ಕೇಳಿ ಆನಂದಿಸುವ ಅವಕಾಶ ದೊರಕಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ನಾಡಿನ ಗ್ರಾಮೀಣ ಪ್ರತಿಭೆಗಳಿಗೆ ಸಿಕ್ಕ ಮೊಟ್ಟ ಮೊದಲ ಅವಕಾಶ.
ನಿತ್ಯೋತ್ಸವ ಕಾರ್ಯಕ್ರಮ ಸಂಘಟನೆಯ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಶ್ರೀನಿವಾಸ ಜಿ. ಕಪ್ಪಣ್ಣ ಅವರ ತಂಡ ರಾಜ್ಯದ ಮೂಲೆ–ಮೂಲೆಗಳಿಂದ ಬಂದ ಮಕ್ಕಳನ್ನು ತಿದ್ದಿತೀಡಿ ದೂರದರ್ಶನದ ನೇರ ಪ್ರಸಾರಕ್ಕೆ ಅಣಿಗೊಳಿಸಿತು. ನಿತ್ಯೋತ್ಸವದಿಂದ ಹೊರಹೊಮ್ಮಿದ ಹಲವಾರು ಪ್ರತಿಭಾನ್ವಿತರು ಇಂದು ಗಾಯನವನ್ನೇ ವೃತ್ತಿಯಾಗಿಸಿಕೊಂಡು ಸಾಧನೆಯ ಹಾದಿಯಲ್ಲಿದ್ದಾರೆ. ‘ಹಾಟ್ಲೈನ್ ಫಾರ್ ಹಾಟ್ ವಾಟರ್’ ಎಂಬ ಜಾಹೀರಾತನ್ನು ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಬಳಸಿಕೊಂಡ ಎಂಎಸ್ಐಎಲ್ ಸಂಸ್ಥೆ ಸೋಲಾರ್ ವಾಟರ್ ಹೀಟರ್ಗಳ ಮಾರಾಟ ಗರಿಷ್ಠ ಮಟ್ಟಕ್ಕೆ ಏರಿಸಿಕೊಂಡು ನಿತ್ಯೋತ್ಸವ ಕಾಯ್ರಕ್ರಮದ ಲಾಭ ಪಡೆಯಿತು. ಒಂದು ಸಾರ್ವಜನಿಕ ಸಂಸ್ಥೆ ಹೇಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಬಹುದು ಎಂಬುದಕ್ಕೆ ಮಾದರಿಯಾಯಿತು.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.