ಷಾಜಿ ಕರಣ್, ಕೌಶಿಕ್ ಬ್ಯಾನರ್ಜಿ ಅವರಷ್ಟೇ ಅಲ್ಲ ಗಿರೀಶ್ಕಾಸರವಳ್ಳಿ ಅವರ ಸಿನಿಮಾಗಳ ಬಗ್ಗೆಯೂ ಇದೇ ಅನ್ಯಾಯ ಆಗಿದೆ. ಕರ್ನಾಟಕದಲ್ಲಿ ನಾವು ಗಿರೀಶ್ಕಾಸರವಳ್ಳಿ ಅವರ ಸಿನಿಮಾಗಳನ್ನು ಗೌರವಿಸುತ್ತೇವೆ. ಅಂತರರಾಷ್ಟ್ರೀಯ ಮಟ್ಟದ ಚಿತ್ರಗಳನ್ನು ಅವರು ನೀಡಿದ್ದರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ಸಿನಿಮಾಗಳ ಬಗ್ಗೆ ಚರ್ಚೆಯಾಗಿರುವುದು ಕಡಿಮೆ. ಒಂದು ಅರ್ಥದಲ್ಲಿ ಇದು ಮಾಧ್ಯಮಗಳಿಂದಲೂ ಆಗಿರುವ ಅಪಚಾರ.
ಪ್ರಾದೇಶಿಕ ಭಾಷಾ ಚಿತ್ರಗಳ ಬೆಳವಣಿಗೆ ಬಗ್ಗೆ ಅರಿವು ಇಲ್ಲದಿರುವುದು. ಭಾರತದ ಇತರ ಭಾಷಾ ಚಿತ್ರರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸದಿರುವುದು. ಇತರ ಭಾಷಾ ಪರ್ಯಾಯ ಚಿತ್ರಗಳ ಸಾಧನೆ ದೇಶದ ಇತರ ಭಾಗಗಳಿಗೆ ತಲುಪದಿರುವುದು ಇಂತಹ ಸಂವಹನದ ಕೊರತೆಯಿಂದಾಗಿ ಹಿನ್ನಡೆಯಾಗಿದೆ.
ಇಲ್ಲದಿದ್ದರೆ ಸಂಸ್ಕಾರ, ಘಟಶ್ರಾದ್ಧ, ಹಂಸಗೀತೆ, ತಬರನಕಥೆ, ದ್ವೀಪ, ತಾಯಿಸಾಹೇಬ ಮೊದಲಾದ ಚಿತ್ರಗಳು ಜಗತ್ತಿನ ಅತ್ಯುತ್ತಮ ಚಿತ್ರಗಳ ಪಟ್ಟಿಯಲ್ಲಿ ಸೇರಿಕೊಳ್ಳದೇ ಇರುತ್ತಿರಲಿಲ್ಲ. ವಾಣಿಜ್ಯ ಚಿತ್ರಗಳದೇ ಮೇಲುಗೈ ಆಗುತ್ತಿದ್ದ ಸಮಯದಲ್ಲಿ ಅಭಿವ್ಯಕ್ತಿ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡು ಆರಂಭವಾದ ಪರ್ಯಾಯ ಸಿನಿಮಾ, (ಹೊಸಅಲೆ) ನಿರ್ಮಾಣ ಕಾರ್ಯ ಪ್ರಾದೇಶಿಕ ಭಾಷಾ ಚಿತ್ರರಂಗದಲ್ಲಿ ಆದಂತೆ ಹಿಂದೀ ಸಿನಿಮಾರಂಗದಲ್ಲಿ ಆಗಿಲ್ಲ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಕನ್ನಡ, ಮಲಯಾಳಂ ಮತ್ತು ಪಶ್ಚಿಮ ಬಂಗಾಳ, ಒಡಿಶಾ ಚಿತ್ರರಂಗದಲ್ಲಿ ತಯಾರಾದ ಹೊಸ ದೃಷ್ಟಿಕೋನದ ಚಿತ್ರಗಳು, ಭಾರತೀಯ ಚಿತ್ರರಂಗದ ಸೃಜನಶೀಲತೆಯನ್ನು ಉಳಿಸಿವೆ. ಅದನ್ನು ಕಲೆಯಾಗಿಯೇ ಉಳಿಸಲು ಯತ್ನಿಸುತ್ತಿವೆ. ಆದರೆ ಆಸ್ಕರ್ ಪ್ರಶಸ್ತಿಗೆ ಭಾರತೀಯ ಚಿತ್ರಗಳನ್ನು ಶಿಫಾರಸು ಮಾಡುವ ಸಂದರ್ಭ ಬಂದಾಗ ಹಿಂದೀ ಚಿತ್ರಗಳಿಗೇ ಆದ್ಯತೆಯಿರುತ್ತದೆ.
ದೆಹಲಿಯಲ್ಲಿ ಕುಳಿತು ತೀರ್ಮಾನಗಳನ್ನು ತೆಗೆದುಕೊಳ್ಳುವ ಸಿನಿಮಾ ನಿರ್ದೇಶನಾಲಯಕ್ಕೆ ಕಾಣುವುದು ಹಿಂದೀ ಚಿತ್ರಗಳಷ್ಟೇ, ಹಿಂದೀ ಚಿತ್ರರಂಗದ ಲಾಬಿ ಅಷ್ಟರಮಟ್ಟಿಗಿದೆ. ಲಗಾನ್ ಚಿತ್ರ ಅವರ ಕಣ್ಣಿಗೆ ಕಾಣುತ್ತದೆ. ಅದೇ ವಸ್ತುವನ್ನೊಳಗೊಂಡ ಹಗಲು ವೇಷ ಅವರ ಗಮನಕ್ಕೇ ಬರುವುದಿಲ್ಲ. ಲಾರೆಲ್ ಹಾರ್ಡಿ ಚಿತ್ರಗಳಂತೆ ಕಾಣುವ `ಬರ್ಫಿ' ಚಿತ್ರ ಅವರಿಗೆ ಅತ್ಯುತ್ತಮ ಚಿತ್ರವಾಗಿ ಕಾಣಿಸುತ್ತದೆ.
ಜಾಗತೀಕರಣದ ನಂತರ ಎಲ್ಲ ವಲಯಗಳಲ್ಲಿ ಆಗುತ್ತಿರುವ ಸ್ಥಿತ್ಯಂತರ ಹಾಗೂ ಅದರ ಪರಿಣಾಮಗಳನ್ನು ಚಿತ್ರೀಕರಿಸಿರುವ ಕೂರ್ಮಾವತಾರ ಅವರ ಕಣ್ಣಿಗೆ ಬೀಳುವುದೇ ಇಲ್ಲ. ಪ್ರಾದೇಶಿಕ ಭಾಷಾ ನಿರ್ಮಾಪಕರು ನಮ್ಮ ಚಿತ್ರ ಆಸ್ಕರ್ಗೆ ಶಿಫಾರಸ್ಸಾಗಿದೆ ಎಂದು ಕನವರಿಸಿಕೊಂಡದ್ದಷ್ಟೇ ಲಾಭ. ಹಿಂದಿ ಭಾಷಿಗ ನಿರ್ಮಾಪಕರ ಲಾಬಿಯ ಮುಂದೆ ಪ್ರಾದೇಶಿಕ ಭಾಷಾ ಸಿನಿಮಾಗಳು ಸೊರಗಿದ್ದು ಹೀಗೆ.