ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್ತನ ಮರಣದ ದಿನ ‘ಶುಭ ಶುಕ್ರವಾರ’!

Last Updated 6 ಏಪ್ರಿಲ್ 2023, 20:25 IST
ಅಕ್ಷರ ಗಾತ್ರ

‘ಶುಭ ಶುಕ್ರವಾರ’ ಅಥವಾ ‘ಗುಡ್ ಫ್ರೈಡೇ’ ಎಂಬುದು ಯೇಸುಕ್ರಿಸ್ತ ಶಿಲುಬೆಯ ಮೇಲೆ ಮರಣ ಹೊಂದಿದ ದಿನ. ಇದು ಸಾಮಾನ್ಯವಾಗಿ ಕ್ರೈಸ್ತರಿಗೆ ಸೂತಕದ ದಿನವಾಗಬೇಕಿತ್ತು; ಆದರೆ ‘ಶುಭ’ವಾಗಿರುವುದು ಏಕೆ?

ಕ್ರಿಸ್ತ ಜೀವಿಸಿದ್ದು ಇಸ್ರೇಲ್‌ ರೋಮ್ ಸಾಮ್ರಾಜ್ಯದ ವಸಹಾತುವಾಗಿದ್ದ ಕಾಲಘಟ್ಟದಲ್ಲಿ. ಜನರನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಶೋಷಿಸುತ್ತಿದ್ದ ರೋಮ್ ಚಕ್ರಾಧಿಪತ್ಯ ಒಂದೆಡೆಯಾದರೆ, ತಮ್ಮದೇ ಜನರನ್ನು ಕಠಿಣ ಧಾರ್ಮಿಕ ಕಾನೂನು ಆಚರಣೆಗಳ ಮೂಲಕ ಹಿಂಸಿಸುತ್ತಿದ್ದ ಯೆಹೂದ್ಯ ಧಾರ್ಮಿಕ ವರ್ಗ ಮತ್ತೊಂದೆಡೆ. ಇವರಿಬ್ಬರ ನಡುವೆ ಸಾಮಾನ್ಯ ಜನ ನಲುಗಿ, ಕನಲಿ ಹೋಗಿದ್ದರು. ತಮ್ಮನ್ನು ಈ ಎಲ್ಲಾ ಸಂಕೋಲೆಗಳಿಂದ ಬಿಡಿಸುವ ‘ಮೆಸ್ಸಾಯ’ (ಉದ್ಧಾರಕ)ನ ಬರುವಿಕೆಯನ್ನು ನಿರೀಕ್ಷಿಸುತ್ತಿದ್ದರು. ಆಗ ಬಂದ ಯೇಸು ಕ್ರಿಸ್ತರು ಯೆಹೂದ್ಯ ಧಾರ್ಮಿಕ ನೇತಾರರ ಧಾರ್ಮಿಕ ಡಂಭಾಚಾರ, ಜನರನ್ನು ಮಾನಸಿಕವಾಗಿ ಹಿಂಸಿಸುವ ಕಟು ಆಚರಣೆಗಳನ್ನು ಖಂಡಿಸಿದರು; ದೇವರು ಮನುಷ್ಯರ ಹೃದಯದಲ್ಲಿದ್ದಾನೆ, ನಿಮ್ಮಂತೆಯೇ ಪರರನ್ನು ಪ್ರೀತಿಸಿದರೆ ಅದು ದೇವರನ್ನೇ ಪ್ರೀತಿಸಿದಂತೆ – ಎಂಬ ಮಾನವತೆಯ ಸಂದೇಶವನ್ನು ಸಾರಿದರು. ಯೆಹೂದ್ಯ ಸಮಾಜವು ಪಾಪಿಗಳು ಎಂದು ಕರೆದು ಊರ ಹೊರಗೆ ಹಾಕಿದ್ದ ದೀನರ ಒಡನಾಡಿಯಾದ ಕ್ರಿಸ್ತ, ಅವರ ಜೊತೆ ಊಟ ಮಾಡಿದರು, ಅವರ ಮನೆಗಳಲ್ಲಿ ತಂಗಿದರು, ಅವರ ನೋವು ನಲಿವುಗಳಿಗೆ ಸ್ಪಂದಿಸಿ, ಅವರನ್ನು ತನ್ನ ಸ್ನೇಹಿತರು, ಸಹೋದರರೆಂದು ಕರೆದರು. ಕ್ರಿಸ್ತನ ಈ ಕ್ರಿಯೆಗಳು ಸಾವಿರಾರು ಜನರ ಬದುಕಿನಲ್ಲಿ ಸಮಾಧಾನ, ಸಾಂತ್ವನದ ನಿಟ್ಟುಸಿರಿಗೆ ಕಾರಣವಾಯಿತು.

ಕ್ರಿಸ್ತನ ಈ ಸಾಮಾಜಿಕ ಕ್ರಾಂತಿಗೆ ಹೆದರಿದ ಅಲ್ಲಿಯ ಧಾರ್ಮಿಕ ನಾಯಕರು, ಆತನ ಕೊಲೆಗೆ ಸಂಚು ರೂಪಿಸಿತು. ಈ ಸಂಚಿನ ಭಾಗವಾಗಿ, ಯೇಸುವಿನ ಹನ್ನೆರೆಡು ಶಿಷ್ಯರಲ್ಲಿ ಒಬ್ಬನಾಗಿದ್ದ ಜೂದಾಸನು ಮೂವತ್ತು ಬೆಳ್ಳಿ ನಾಣ್ಯಗಳಿಗೆ ಯೇಸುವಿಗೆ ದ್ರೋಹ ಬಗೆದು, ಯೇಸುವನ್ನು ಯೆಹೂದ್ಯರಿಗೆ ಹಿಡಿದು ಕೊಟ್ಟನು. ನಂತರ ಅವರು ಯೇಸುವನ್ನು ಶಿಲುಬೆಗೇರಿಸಿದರು.

ಶುಭ ಶುಕ್ರವಾರ ಪ್ರಮುಖವಾಗಿ ಪ್ರೀತಿ, ತ್ಯಾಗ ಮತ್ತು ಕ್ಷಮೆ ಎಂಬ ಮೂರು ಸಂದೇಶಗಳನ್ನು ಸಾರುತ್ತದೆ. ಕ್ರಿಸ್ತ ತನ್ನ ಜನರನ್ನು ಆಪರಿಮಿತವಾಗಿ ಪ್ರೀತಿಸಿದ್ದು ಮಾತ್ರವಲ್ಲದೆ, ಅವರ ಕಷ್ಟಗಳಿಗೆ, ನೋವುಗಳಿಗೆ ಸ್ಪಂದಿಸಿದ. ತನ್ನ ಜನರ ರೋಗ-ರುಜಿನಗಳನ್ನು ವಾಸಿ ಮಾಡಿ, ಅವರಲ್ಲಿ ಬದುಕುವ ಸ್ಫೂರ್ತಿಯನ್ನು ತುಂಬಿದ. ದೇವರನ್ನು ಹಾಗೂ ಪರರನ್ನು ಪ್ರೀತಿಸುವಂತೆ ಪ್ರೇರೇಪಿಸಿದ. ಇದಕ್ಕೆ ಪ್ರತಿಯಾಗಿ ಆತನಿಗೆ ದ್ರೋಹ ಬಗೆದಾಗಲೂ ಆತ ಹತಾಶನಾಗಿ, ಹಲುಬಲಿಲ್ಲ.

ಶುಕ್ರವಾರ ನಡು ಮಧ್ಯಾಹ್ನ ಕ್ರಿಸ್ತನನ್ನು ಶಿಲುಬೆಗೇರಿಸಿದಾಗ ಅಲ್ಲಿನ ಜನರು ಹಾಗೂ ಸೈನಿಕರು ಕ್ರಿಸ್ತನನ್ನು ಪರಿಹಾಸ್ಯ ಮಾಡುತ್ತಿದ್ದರು. ಆಗಲೂ ಕ್ರಿಸ್ತ ‘ತಂದೆಯೇ, ಇವರನ್ನು ಕ್ಷಮಿಸು, ಇವರೇನು ಮಾಡುತ್ತಿರುವರೆಂದು ಅರಿಯರು,’ ಎಂದು ಅವರನ್ನು ಕ್ಷಮಿಸಿದ. ಇದಲ್ಲದೆ, ಹಿಂದಿನ ರಾತ್ರಿ ತನ್ನನ್ನು ಅಲ್ಲಗಳೆದಿದ್ದ ತಮ್ಮ ಆಪ್ತಶಿಷ್ಯ ಸಿಮೋನ್ ಪೇತ್ರನನ್ನು ಸಹ ಕ್ಷಮಿಸುವ ಮೂಲಕ, ಕ್ಷಮೆ ಎಂಬ ದೈವಮೌಲ್ಯದ ಪ್ರಾಮುಖ್ಯವನ್ನು ತಿಳಿಸಿದ. ‘ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ’ ಎಂದಿದ್ದ ಯೇಸು ಕ್ರಿಸ್ತ, ತನ್ನ ಸ್ನೇಹಿತರಿಗಾಗಿ ಹಾಗೂ ತನ್ನ ಜನರ ಉದ್ಧಾರಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ. ಒಬ್ಬ ಮನುಷ್ಯ ತನ್ನ ಪ್ರಾಣಕ್ಕಿಂತ ಮಿಗಿಲಾಗಿ ಯಾವ ತ್ಯಾಗವನ್ನು ಮಾಡಲು ಸಾಧ್ಯ?

ಹೀಗೆ ಕ್ರಿಸ್ತ ಸಾರಿದ ಪ್ರೀತಿ, ಕ್ಷಮೆ ಮತ್ತು ತ್ಯಾಗಗಳು ಶುಭ ಶುಕ್ರವಾರದಂದು ಆತನ ಮರಣದಲ್ಲಿ ಅವುಗಳ ಪ್ರಸ್ತುತತೆಯನ್ನು ನೆನಪಿಸುವ ಕಾರಣ ಆತನ ಮರಣ ಕ್ರೈಸ್ತರಿಗೆ ಶುಭವಾಗಿದೆ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT