ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ವರ್ಷಗಳಲ್ಲಿ 42 ನೇಕಾರರ ಆತ್ಮಹತ್ಯೆ

ಗುಂಪು ವಿಮಾ ಯೋಜನೆಯಡಿ 68 ನೇಕಾರರ ಕುಟುಂಬಗಳಿಗೆ ಸಿಕ್ಕಿಲ್ಲ ಪರಿಹಾರ
Published 11 ಮಾರ್ಚ್ 2024, 0:14 IST
Last Updated 11 ಮಾರ್ಚ್ 2024, 0:14 IST
ಅಕ್ಷರ ಗಾತ್ರ

ಬಾಗಲಕೋಟೆ: ಕಚ್ಚಾ ವಸ್ತುಗಳ ಬೆಲೆ ಏರಿಕೆ, ಅನಿಶ್ಚಿತ ಮಾರುಕಟ್ಟೆ, ಆರ್ಥಿಕ ಸಂಕಷ್ಟ ಸೇರಿ ವಿವಿಧ ಕಾರಣಗಳಿಂದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ 42 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

42 ಪೈಕಿ 40 ಪ್ರಕರಣಗಳನ್ನು ಮಾತ್ರ ಪರಿಹಾರಕ್ಕೆ ಪರಿಗಣಿಸಲಾಗಿದೆ. ರಾಮನಗರ ಜಿಲ್ಲೆಯ ಇನ್ನೆರಡು ಪ್ರಕರಣಗಳ ಕುರಿತು ಇನ್ನೂ ಎಫ್‌ಐಆರ್‌ ದಾಖಲಾಗಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ 24, ಬಾಗಲಕೋಟೆ 5, ಬೆಂಗಳೂರು ಗ್ರಾಮಾಂತರ 4, ರಾಮನಗರ 3, ತುಮಕೂರು 2, ಬೆಂಗಳೂರು ನಗರ, ಧಾರವಾಡ, ಚಿಕ್ಕಬಳ್ಳಾಪುರ, ವಿಜಯಪುರ ಜಿಲ್ಲೆಯಲ್ಲಿ ತಲಾ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಆತ್ಮಹತ್ಯೆ ಮಾಡಿಕೊಂಡ 25 ನೇಕಾರರ ಕುಟುಂಬದ ಸದಸ್ಯರಿಗೆ ತಲಾ ₹5 ಲಕ್ಷ ಪರಿಹಾರ ನೀಡಲಾಗಿದೆ. ಪ್ರಧಾನಮಂತ್ರಿ ಜೀವನ್‌ ಜ್ಯೋತಿ ಬಿಮಾ ಯೋಜನೆಯಡಿ ನೋಂದಾಯಿಸಿಕೊಂಡಿದ್ದ ನಾಲ್ವರಿಗೆ ಯೋಜನೆಯಡಿ ಪರಿಹಾರ ಪಡೆಯಲು ಸೂಚಿಸಲಾಗಿದೆ. ಆರು ಪ್ರಸ್ತಾವಗಳಿಗೆ ಶೀಘ್ರದಲ್ಲಿಯೇ ಪರಿಹಾರ ಬಿಡುಗಡೆ ಮಾಡಲಾಗುವುದು. ಉಳಿದ ಏಳು ಪ್ರಕರಣಗಳಲ್ಲಿ ಸೂಕ್ತ ದಾಖಲೆ ಸಲ್ಲಿಸದ ಕಾರಣ ಪ್ರಸ್ತಾವ ಕೈ ಬಿಡಲಾಗಿದೆ ಎಂದು ಜವಳಿ ಇಲಾಖೆ ತಿಳಿಸಿದೆ.

ಐದು ವರ್ಷಗಳಿಂದ ಬಾರದ ಪರಿಹಾರ: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದಡಿ ಗುಂಪು ವಿಮಾ ಯೋಜನೆಯಡಿ ನೋಂದಾಯಿಸಿಕೊಂಡಿದ್ದ 68 ನೇಕಾರರ ಕುಟುಂಬದ ಸದಸ್ಯರಿಗೆ ತಲಾ ₹2 ಲಕ್ಷದಂತೆ ಪರಿಹಾರ ಐದು ವರ್ಷಗಳಿಂದ ಬಂದಿಲ್ಲ.

‘ಕಚ್ಚಾ ನೂಲಿನ ಬೆಲೆ, ರೇಷ್ಮೆ ಬೆಲೆ ದುಪ್ಪಟ್ಟಾಗಿದೆ. ಆದರೆ, ಅದಕ್ಕೆ ತಕ್ಕಂತೆ ಸೀರೆಗಳ ಬೆಲೆಯಲ್ಲಿ ಏರಿಕೆಯಾಗಿಲ್ಲ. ಮಧ್ಯವರ್ತಿಗಳಿಂದ ಏಕಾಏಕಿ ಬೆಲೆ ಏರಿಳಿತದ ಪರಿಣಾಮ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.

‘ಸಾಲ ಸೌಲಭ್ಯದ ಯೋಜನೆಗಳಿದ್ದರೂ ಬಹುತೇಕ ನೇಕಾರರಿಗೆ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ನೀಡಲ್ಲ. ಹೆಚ್ಚಿನ ಬಡ್ಡಿಗೆ ಖಾಸಗಿ ಸಾಲ ಮಾಡಬೇಕು. ಕಡಿಮೆ ಬೆಲೆಯ ಸೂರತ್ ಬಟ್ಟೆಯ ಹಾವಳಿಯಿಂದಲೂ ತೊಂದರೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT