ಬಾದಾಮಿ: ಬರದ ಪರಿಣಾಮದಿಂದ ಜಾನುವಾರು ಜಾತ್ರೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ರೈತರು ತಮ್ಮ ಜಾನುವಾರುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ತಂದಿದ್ದರು. ಶುಕ್ರವಾರ ಅಧಿಕ ಸಂಖ್ಯೆಯಲ್ಲಿ ಜಾನುವಾರುಗಳು ಕಂಡು ಬಂದವು.
ಬನಶಂಕರಿದೇವಿ ಜಾತ್ರೆಯ ಅಂಗವಾಗಿ ಇಲ್ಲಿನ ಎಪಿಎಂಸಿ ಆವರಣದಲ್ಲಿ ಕೃಷಿ ಉತ್ಪನ್ ಮಾರುಕಟ್ಟೆ ಸಮಿತಿ ಮತ್ತು ಜಾನುವಾರು ಜಾತ್ರಾ ಕಮಿಟಿ ಆಶ್ರಯದಲ್ಲಿ ಜಾನುವಾರು ಜಾತ್ರೆಯನ್ನು ಜ. 30 ರಿಂದ ಫೆ. 3 ರ ವರೆಗೆ ಹಮ್ಮಿಕೊಳ್ಳಲಾಗಿದೆ.
‘ ಈ ವರ್ಸ ಮಳಿ ಆಗಲಿಲ್ಲ ಮೇವು ಇರಲಾರದಕ್ಕ ರೈತರು ಮೊದಲ ದನಾ ಮಾರಿಬಿಟ್ಟಾರ್ರಿ. ಜಾತ್ರಿಗೆ ದನ ಕಡಿಮಿ ಬಂದಾವು ತುಟ್ಟಿ ಕಿಮ್ಮತ್ತನ್ಯಾಗ ಮಾರಾಟ ನಡದಾವ್ರಿ ‘ ಎಂದು ಗದಗ ಜಿಲ್ಲೆಯ ಶೆಡಲಿಗೇರಿ ಗ್ರಾಮದ ರೈತ ಬಸಪ್ಪ ಹೇಳಿದರು.
‘ ಎತ್ತುಗಳು ತುಟ್ಟಿ ಮಾರಾಟ ನಡದದ್ದಕ ರೈತರು ದನಾ ತೊಗೊಳ್ಳವಲ್ಲರು. ರೈತರ ಕೈಯ್ಯಾಗ ರೊಕ್ಕ ಇಲ್ಲ ಎತ್ತು ನೋಡತಾರಿ ಖರೀದಿ ಮಾಡುವಲ್ಲರು ’ ಎಂದು ಕೆಂದೂರ ಗ್ರಾಮದ ರೈತ ಶಿವಪ್ಪ ಅಂಗಡಿ ಹೇಳಿದರು.
ಜಾತ್ರೆಯಲ್ಲಿ ಒಂದು ಲಕ್ಷದಿಂದ ರೂ. 21 ಲಕ್ಷ ಮೌಲ್ಯದ ವರೆಗಿನ ಎತ್ತುಗಳು ಮತ್ತು ಹೋರಿಗಳು ಜಾತ್ರೆಯಲ್ಲಿ ರೈತರು ಮಾರಾಟಕ್ಕೆ ತಂದಿದ್ದರು. ರಾಯಬಾಗ ತಾಲ್ಲೂಕಿನ ಕಂಕಣವಾಡಿ ಗ್ರಾಮದ ರೈತ ಅಪ್ಪಣ್ಣ ಗಡಕರಿ ಪ್ರದರ್ಶನ ಮತ್ತು ಮಾರಾಟಕ್ಕೆ ತಂದಿರುವ ಒಂದು ಹೋರಿ ಜಾತ್ರೆಯಲ್ಲಿ ಆಕರ್ಷಕವಾಗಿತ್ತು.
ಕಂಕಣವಾಡಿ ಗ್ರಾಮದ ರೈತನ ಎರಡು ಹಲ್ಲಿನ ಹೋರಿಯು ಆರು ಫೂಟು ಎತ್ತರವಿದ್ದು ಜಾತ್ರೆಯಲ್ಲಿ ಈ ಹೋರಿಯನ್ನು ರೈತರು ವೀಕ್ಷಿಸಿ ರೈತನ ಸಾಕುವಿಕೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.
‘ ಹಿಂದಿನ ಜಾನುವಾರು ಜಾತ್ರೆಯಲ್ಲಿ 5 ಸಾವಿರಕ್ಕೂ ಅಧಿಕ ಜಾನುವಾರುಗಳು ಬರುತ್ತಿದ್ದವು. ಬರದ ಹಿನ್ನೆಲೆಯಲ್ಲಿ ಅಂದಾಜು ಮೂರು ಸಾವಿರ ಜಾನುವಾರುಗಳು ಬಂದಿವೆ ’ ಎಂದು ಎಪಿಎಂಸಿ ಕಾರ್ಯದರ್ಶಿ ರವಿ ರಾಠೋಡ ಹೇಳಿದರು.
ಬೆಳಗಾವಿ, ರಾಯಚೂರ, ಬಾಗಲಕೋಟೆ, ಹುಬ್ಬಳ್ಳಿ, ಗದಗ ಮತ್ತು ಕೊಪ್ಪಳ ಜಿಲ್ಲೆಗಳ ರೈತರು ತಮ್ಮ ಜಾನುವಾರುಗಳ ಮೂಲಕ ಆಗಮಿಸಿದ್ದರು.