ಜಮಖಂಡಿ: ತಾಲ್ಲೂಕಿನ ಹಿರೇಪಡಸಲಗಿ ಗ್ರಾಮದ ಹತ್ತಿರದ ಕೃಷ್ಣಾ ನದಿಯಲ್ಲಿ ಮೀನುಗಾರನ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದ ಮೊಸಳೆಯನ್ನು ಗ್ರಾಮಸ್ಥರೇ ಹಿಡಿದಿದ್ದಾರೆ.
ಮೀನುಗಾರ ಮಹದೇವ ಮೋಹನ ಮೋರೆ ಮಂಗಳವಾರ ಮೀನು ಹಿಡಿಯಲು ಹೋದ ವೇಳೆ ಮೊಸಳೆ ಕಾಲು ಕಚ್ಚಿ ಎಳೆದುಕೊಳ್ಳಲು ಪ್ರಯತ್ನಿಸಿತು. ಅಲ್ಲಿಯೇ ಇದ್ದ ಇಬ್ಬರು ಮೋರೆ ಅವರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದರು.
‘ಎರಡು ದಿನ ಹುಡುಕಾಟದ ಬಳಿಕ ಗುರುವಾರ ಬೆಳಿಗ್ಗೆ ಮೊಸಳೆ ಹಿಡಿದು, ಬಾಯಿಗೆ ಹಗ್ಗ ಕಟ್ಟಿದೆವು. ಅರಣ್ಯ ಇಲಾಖೆಗೆ ಮಾಹಿತಿ ನೀಡಿದೆವು. ನಂತರ ಮೊಸಳೆಯನ್ನು ಗ್ರಾಮ ಪಂಚಾಯತಿಯ ಕಸ ತುಂಬುವ ವಾಹನದಲ್ಲಿ ಸಾಗಿಸಿ ಆಲಮಟ್ಟಿ ಹಿನ್ನೀರಿನಲ್ಲಿ ಬಿಡಲಾಯಿತು’ ಎಂದು ಗ್ರಾಮಸ್ಥರು ತಿಳಿಸಿದರು.
‘ಸುಮಾರು 2 ಕ್ವಿಂಟಲ್ ತೂಕ ಮತ್ತು 6 ಅಡಿ ಉದ್ದದ ಮೊಸಳೆಯನ್ನು ಬಿದರಿ ಗ್ರಾಮದ ಪ್ರವೀಣ ಶಿರಬೂರ, ಸಚಿನ ಶಿರಹಟ್ಟಿ ಸೇರಿ 10 ಮಂದಿ ಹಿಡಿದಿದ್ದಾರೆ’ ಎಂದರು.