ಅಮೀನಗಡ: ತಹಶೀಲ್ದಾರ್ ಅವರ ಎಚ್ಚರಿಕೆಯ ನಂತರ, ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗೆ ತಳ್ಳೀಕೇರಿ ಗ್ರಾಮದಲ್ಲಿ ಕ್ಷೌರ ಮಾಡಲಾಯಿತು.
ಮಂಗಳವಾರ ಬೆಳಿಗ್ಗೆ ಹುಲಿಗೆಪ್ಪ ಚಲವಾದಿ ಕ್ಷೌರ ಮಾಡಿಸಿಕೊಳ್ಳಲು ಬಸಪ್ಪ ಹಡಪದ ಅವರ ಅಂಗಡಿಗೆ ಬಂದಿದ್ದರು. ಆಗ, ‘ಪರಿಶಿಷ್ಟರಿಗೆ ಕ್ಷೌರ ಮಾಡುವ ಪದ್ಧತಿ ನಮ್ಮಲ್ಲಿ ಇಲ್ಲ’ ಎಂದು ನಿರಾಕರಿಸಿದರು. ಹುಲಿಗೆಪ್ಪ ಹಾಗೂ ಬಸಪ್ಪ ನಡುವೆ ಮಾತಿನ ಚಕಮಕಿಯೂ ನಡೆಯಿತು.
ವಿಷಯ ತಿಳಿಯುತ್ತಿದ್ದಂತೆ ತಹಶೀಲ್ದಾರ್ ವೇದವ್ಯಾಸ ಮುತಾಲಿಕ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಬಸಪ್ಪ ಅವರ ಮನವೊಲಿಕೆಗೆ ಪ್ರಯತ್ನಿಸಿದರು.
‘ಕ್ಷೌರ ಮಾಡದಿದ್ದರೆ ಜಾತಿ ನಿಂದನೆ ಆರೋಪದಲ್ಲಿ ಬಂಧಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ ನಂತರ ಬಸಪ್ಪ ಅಧಿಕಾರಿಗಳ ಸಮ್ಮುಖದಲ್ಲಿಯೇ ಕ್ಷೌರ ಮಾಡಿದರು.