ಗುಳೇದಗುಡ್ಡ: ನಗರದ ಮಧ್ಯಭಾಗದಲ್ಲಿ ಬರುವ ಬನ್ನಿಕಟ್ಟಿಯಿಂದ ಪ್ರಾರಂಭವಾಗಿ ಕಮೇಲಿ ಹತ್ತಿರ ಹಳ್ಳಕ್ಕೆ ಸೇರುವ ದೊಡ್ಡ ಗಟಾರು ಸ್ವಚ್ಛ ಮಾಡದಿರುವುದರಿಂದ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿದು ಹೋಗದ ಕಾರಣ ಸೊಳ್ಳೆ ಉತ್ಪತ್ತಿ ತಾಣವಾಗಿದೆ.
ಭಾರತ ಮಾರ್ಕೆಟ್ ಹತ್ತಿರ ಇರುವ ಈ ಗಟಾರನ್ನು ಸ್ವಚ್ಛ ಮಾಡದಿರುವುದರಿಂದ ಮುಳ್ಳು ಕಂಟಿಗಳು ಬೆಳೆದಿವೆ. ಇದರಿಂದಾಗಿ ಐದು ಅಗಲದ ಗಟಾರು ಈಗ ಮೂರು ಅಡಿಗೆ ಇಳಿದಿದೆ.
ಗಟಾರಿಗೆ ಹೊಂದಿಕೊಂಡಂತೆ ನೂರಾರು ಮನೆಗಳಿದ್ದು, ಸೊಳ್ಳೆ ಕಾಟ, ದುರ್ವಾಸನೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸುತ್ತಲೂ ಇರುವ ಅಂಗಡಿಯ ಕಸ, ಕೊಳಚೆ ನೀರು ಇಲ್ಲಿಯೇ ಸೇರುತ್ತಿದೆ. ಪುರಸಭೆ ಅಧಿಕಾರಿಗಳು ಹಾಗೂ ವಾರ್ಡ್ ಸದಸ್ಯರು ಗಮನಹರಿಸಿ ಕಾಲ ಕಾಲಕ್ಕೆ ಗಟಾರನ್ನು ಸ್ವಚ್ಛ ಮಾಡಬೇಕು ಎಂಬುದು ನಿವಾಸಿಗಳ ಆಗ್ರಹ.