ರಾಂಪುರ: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಾಗಲಕೋಟೆ- ಆಲಮಟ್ಟಿ ಮುಖ್ಯ ರಸ್ತೆಯ ರಾಂಪುರ ಗ್ರಾಮದಲ್ಲಿ ರಸ್ತೆ ಅತಿಕ್ರಮಿತ ಹಾಗೂ ಪಾದಚಾರಿ ರಸ್ತೆ ಮೇಲೆ ಹಾಕಲಾಗಿರುವ ಅಂಗಡಿ- ಮುಂಗ್ಗಟ್ಟುಗಳು ಮತ್ತು ಸರ್ಕಾರಿ ಜಾಗೆಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಇಮಾರತಿ (ಕಟ್ಟಡ)ಗಳನ್ನು ಕೂಡಲೇ ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ.
ಈ ಕುರಿತಂತೆ ವಾರದ ಹಿಂದೆಯೇ ಎಲ್ಲ ಅಂಗಡಿಗಳು, ವ್ಯಾಪಾರಸ್ಥರಿಗೆ ತಿಳುವಳಿಕೆ ನೋಟಿಸ್ ನೀಡಲಾಗಿದ್ದು, ಸೋಮವಾರ ಈ ಬಗ್ಗೆ ಸ್ಥಳಿಯ ಗ್ರಾ.ಪಂ ನಲ್ಲಿ ಸಭೆ ನಡೆಸಿ ಮತ್ತೊಂದು ಬಾರಿ ಎಲ್ಲ ವ್ಯಾಪಾರಿಗಳಿಗೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ಮಾತನಾಡಿದ ಗ್ರಾಮೀಣ ಸಿಪಿಐ ನಾಗರಾಜ ಅಂಬಿಗೇರ, ನ್ಯಾಯಾಲಯದ ಆದೇಶ ಪಾಲಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ರಸ್ತೆ ಅತಿಕ್ರಮಣ ಮಾಡಿರುವವರು ಕೂಡಲೇ ತಮ್ಮ ಅಂಗಡಿ, ಮುಂಗ್ಗಟ್ಟುಗಳನ್ನು ತೆರವುಗೊಳಿಸಿ ಎಂದು ಹೇಳಿದರು.
ಕೆಲವು ವ್ಯಾಪಾರಿಗಳು, ತಮಗೆ ಎಪಿಎಂಸಿ ಜಾಗವನ್ನು ಸ್ವಚ್ಛಗೊಳಿಸಿಕೊಡುವಂತೆ ಮನವಿ ಮಾಡಿದರು. ಮಾರುಕಟ್ಟೆ ಸ್ಥಳ ಎಪಿಎಂಸಿ ಜಾಗವನ್ನು ಸ್ವಚ್ಛಗೊಳಿಸಿ ವ್ಯಾಪಾರ ನಡೆಸಲು ಅನುವು ಮಾಡಿಕೊಡುವುದಾಗಿ ಗ್ರಾ.ಪಂ ಅಧಿಕಾರಿಗಳು ಭರವಸೆ ನೀಡಿದರು.
ಎರಡು ದಿನ ಅವಕಾಶ: ಸಭೆಯ ನಂತರ ಗ್ರಾಮೀಣ ಸಿಪಿಐ ನಾಗರಾಜ ಅಂಬಿಗೇರ, ಪಿಎಸ್ಐ ರಾಮನಗೌಡ ಸಂಕನಾಳ ಹಾಗೂ ಗ್ರಾ.ಪಂ ಅಧಿಕಾರಿಗಳು ಸ್ವತ: ಪ್ರತಿಯೊಂದು ಅಂಗಡಿಗಳಿಗೆ ತೆರಳಿ ಕೂಡಲೇ ಒತ್ತುವರಿ ತೆರುವುಗೊಳಿಸುವಂತೆ ಸೂಚನೆ ನೀಡಿದರು. ಎರಡು ದಿನಗಳ ಕಾಲಾವಕಾಶ ತೆಗೆದುಕೊಂಡು ಜಾಗೆ ಖಾಲಿ ಮಾಡಬೇಕು. ಇಲ್ಲದೇ ಹೋದಲ್ಲಿ ಜೆಸಿಬಿಯೊಂದಿಗೆ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಲಾಯಿತು.
ಗ್ರಾ.ಪಂ.ನಲ್ಲಿ ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಗೀತಾ ಹಕಾರಿ, ಉಪಾಧ್ಯಕ್ಷೆ ರೋಹಿಣಿ ಹಡಗಲಿ ಹಾಗೂ ಸದಸ್ಯರು, ಕೃಷ್ಣಾ ಭಾಗ್ಯ ಜಲ ನಿಗಮ (ಆಣೆಕಟ್ಟು ವಿಭಾಗ)ದ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ ಉಪ್ಪಾರ , ಲೆಕ್ಕಾಧಿಕಾರಿ ರಾಮಲಿಂಗಪ್ಪ ದೋಟಿಹಾಳ, ವ್ಯಾಪಾರಸ್ಥರು, ತಳ್ಳು ಗಾಡಿ ವ್ಯಾಪಾರಿಗಳು ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.