ಜಮಖಂಡಿ: ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ಡಿಸಿಪಿಯಾಗಿದ್ದ ರಾಜೀವ್ ಎಂ, ಹಾಗೂ ಡಿವೈಎಸ್ಪಿ ವಿಜಯಕುಮಾರ ತಳವಾರ ಅವರ ಅಮಾನತು ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿ ತಾಲ್ಲೂಕು ಮಾದಿಕ ಸಂಘಟನೆಗಳ ಒಕ್ಕೂಟದಿಂದ ಶನಿವಾರ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ ಗೆ ಮನವಿ ಸಲ್ಲಿಸಲಾಯಿತು.
ಮುಖಂಡ ಮುತ್ತಣ್ಣ ಮೇತ್ರಿ ಮಾತನಾಡಿ, ‘ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಗಳಲ್ಲಿ ದಲಿತ ಸಮುದಾಯದ ಅಧಿಕಾರಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ರಾಜೀವ್ ಅವರ ಅಮಾನತು ಆದೇಶ ಹಿಂಪಡೆಯಬೇಕು.ಇಲ್ಲದಿದ್ದರೆ ರಾಜ್ಯದಾದ್ಯಂತ ದಲಿತ ಸಂಘಟನೆಗಳಿಂದ ಹೋರಾಟ ಮಾಡಲಾಗುವುದು’ ಎಂದರು.
ಕೊಲೆಯಾದ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಜಾತಿವಾದಿ ಕಾಣದ ಕೈಗಳ ಒತ್ತಡಕ್ಕೆ ಮಣಿದು ಕುತಂತ್ರ ಮಾಡಲಾಗಿದೆ. ಸಿಎಂ ಹಾಗೂ ಗೃಹ ಸಚಿವರು ಸೂಕ್ಷ್ಮವಾಗಿ ವಿಚಾರಣೆ ಮಾಡಿ ಕೂಡಲೇ ಅಮಾನತು ಮರಳಿ ಪಡೆಯಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಹುಗ್ಗೆನ್ನವರ, ಸಂಜು ಪೂಜಾರಿ, ಯಮನೂರ ಮೂಲಂಗಿ, ಮಾರುತಿ ಮಾದರ, ಅರ್ಜುನ ಮಾದರ, ವೀರಣ್ಣ ರಾಮೋಜಿ, ಲಕ್ಷ್ಮಣ ಬಳೊಲ್, ಸಂಗಮೇಶ ಮಾದರ, ರಮೇಶ ಪೂಜಾರಿ, ಯಮನಪ್ಪ ಮಾದರ ಸೇರಿದಂತೆ ಇತರರು ಇದ್ದರು.