ಬಾಗಲಕೋಟೆ: ‘ರಾಜ್ಯದಲ್ಲಿ ಮಾಹೇಶ್ವರಿ ಸಮಾಜಕ್ಕೆ ಜಾತಿ ಪ್ರಮಾಣ ದೊರೆಯುತ್ತಿಲ್ಲ. ಇದರಿಂದ ಮಕ್ಕಳ ಭವಿಷ್ಯದ ಮೇಲೆ ಕರಿನೆರಳು ಆವರಿಸಿದೆ’ ಎಂದು ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚಿಂಡಕ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಮಾಹೇಶ್ವರಿ ಸಮಾಜವನ್ನು ಗುರುತಿಸಿ ಜಾತಿ ಪ್ರಮಾಣ ಪತ್ರ ನೀಡಬೇಕು. ಸಮುದಾಯದವರನ್ನು ಭಾಷಾ ಅಲ್ಪಸಂಖ್ಯಾತರು ಎಂದು ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.
‘ರಾಜಸ್ಥಾನದಿಂದ 150 ವರ್ಷಗಳ ಹಿಂದೆ ಉದ್ಯೋಗ ಅರಸಿ ಮಾಹೇಶ್ವರಿ ಸಮಾಜದವರು ಕರ್ನಾಟಕಕ್ಕೆ ವಲಸೆ ಬಂದಿದ್ದಾರೆ. ರಾಜ್ಯದಲ್ಲಿ 1400 ಕುಟುಂಬಗಳಿದ್ದು, ಬಾಲಕೋಟೆ ಜಿಲ್ಲೆಯಲ್ಲಿ 800 ಕುಟುಂಬಗಳು ವಾಸ ಮಾಡುತ್ತಿವೆ’ ಎಂದರು.
‘ಈ ಬಗ್ಗೆ ಜಿಲ್ಲೆಯ ಶಾಸಕರು, ಸಂಸದರು, ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಬೇಗನೆ ನಿರ್ಧಾರ ತೆಗೆದುಕೊಂಡಲ್ಲಿ ಅನುಕೂಲವಾಗಲಿದೆ’ ಎಂದರು. ಸಮಾಜದ ಮುಖಂಡರಾದ ಕಮಲ್ ಕಿಶೋರ ಮಾಲಪಾಣಿ, ಶಾಮ ಸುಂದರ್ ಕರವಾ, ದ್ವಾರಕಾನಾಥ ಕಾಸಟ್, ಶ್ರೀಧರ ಮಾಲಪಾಣಿ ಇದ್ದರು.