ರಾಶಿಕೂಟ ಗಣ ಸಂಬಂಧ, ಚಂದ್ರಬಲ ತಾರಾಬಲ ಉಂಟೆಂದು ಹೇಳಿ ಸ್ವತಃ ಬಾಗಲಕೋಟೆ ಜಿಲ್ಲಾಡಳಿತ ಮದುವೆಯ ಪೌರೋಹಿತ್ಯ ವಹಿಸಿತ್ತು ! ಈ ಸ್ಮರಣೀಯ ಕಾರ್ಯಕ್ಕೆ ಪೂರಕವಾಗಿ ನವನಗರದ ಕಲಾಭವನ ಮದುವೆ ಮಂಟಪವಾಗಿ ಬದಲಾಗಿತ್ತು. ರಾಜ್ಯ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆಯೂ ಆದ ನಿವೃತ್ತ ಮುಖ್ಯ ಕಾರ್ಯದರ್ಶಿ ಡಾ.ಕೆ.ರತ್ನಪ್ರಭಾ ವಧು–ವರರಿಗೆ ಅರಿಶಿನ ಶಾಸ್ತ್ರ ಮಾಡಿ ಧಾರೆ ಎರೆದುಕೊಟ್ಟರು. ಸಭಾಂಗಣದಲ್ಲಿ ನೆರೆದಿದ್ದ ನಾಲ್ಕು ಸಾವಿರಕ್ಕೂ ಹೆಚ್ಚು ಮಾಜಿ ದೇವದಾಸಿಯರು ಅಕ್ಷತೆ ಹಾಕಿ ನವಜೋಡಿಯ ಬದುಕು ಹಸನಾಗಲು ಹರಸಿದರು.