ರಬಕವಿ ಬನಹಟ್ಟಿ: ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕರು 42 ವರ್ಷಗಳಿಂದ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ. 3 ರಿಂದ ಶೇ.7.5ಕ್ಕೆ ಹೆಚ್ಚಿಸಬೇಕು ಮತ್ತು ನ್ಯಾ. ನಾಗಮೋಹನದಾಸ್ ವರದಿಯನ್ನು ಸಚಿವ ಸಂಪುಟದಲ್ಲಿ ಅನುಮೋದಿಸಿ ಆದಷ್ಟು ಬೇಗನೆ ಆದೇಶ ಹೊರಡಿಸಬೇಕು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಮೆಳ್ಳಿಗೇರಿ ಅಗ್ರಹಿಸಿದರು.
ಅವರು ಬುಧವಾರ ಸ್ಥಳೀಯ ತಹಶೀಲ್ದಾರ್ ಕಾರ್ಯಾಲಯದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲ್ಲೂಕು ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸರಣಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು. ದೇಶ ಮತ್ತು ರಾಜ್ಯದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ವಾಲ್ಮೀಕಿ ನಾಯಕ ಸಮುದಾಯವು ನಾಡು ನುಡಿಗೆ ತನ್ನದೆ ಆದ ಕೊಡುಗೆಯನ್ನು ನೀಡಿದೆ. ಇಂದಿನ ಆಧುನಿಕ ದಿನಗಳಲ್ಲಿ ನಮ್ಮ ಸಮುದಾಯ ಅನೇಕ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಆದ್ದರಿಂದ ಸರ್ಕಾರ ಗಮನ ಸೆಳೆಯುವುದರ ಸಲುವಾಗಿ ಸಮುದಾಯದವರು ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಇದೇ 21 ರಿಂದ 30 ರವರೆಗೆ ಸರಣಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ ಎಂದು ರಮೇಶ ಮೆಳ್ಳಿಗೇರಿ ತಿಳಿಸಿದರು.
ಕಾಡಪ್ಪ ಮಂಟೂರ, ರಾಮಣ್ಣ ದಳವಾಯಿ, ರಮೇಶ ನಾಯಕ, ಫಕೀರಪ್ಪ ತಳವಾರ, ಹುಚ್ಚಪ್ಪ ತಳವಾರ, ಪ್ರಭು ಅಮಾತ್ಯನವರ, ಸಂತೋಷ ದಂಡಿಮನಿ, ಶಿವಕುಮಾರ ಕುಲ್ಲೊಳ್ಳಿ, ರಮೇಶ ಮಂಟೂರ, ಮಾರುತಿ ಕುಳಲಿ, ಎಸ್.ಎಂ. ವಾಲೀಕಾರ, ಎಲ್.ಆರ್.ಸಂತಿ, ವಿ.ಪಿ.ದೊಡಮನಿ, ಎಸ್.ಎಸ್.ಹಲಗಲಿ ಸೇರಿದಂತೆ ಅನೇಕರು ಇದ್ದರು.