ಬಾದಾಮಿ : ಗ್ರಾಮದಲ್ಲಿರುವ ಎಂಎಸ್ಐಎಲ್ ಮದ್ಯದ ಅಂಗಡಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿ ಸಮೀಪದ ಹೊಸೂರ ಗ್ರಾಮದ ಮಹಿಳೆಯರು ಮಂಗಳವಾರ ಶಾಸಕ ಸಿದ್ದರಾಮಯ್ಯ ಅವರಿಗೆ ಅಡ್ಡಗಟ್ಟಿ ತಡೆದು ಮನವಿ ಸಲ್ಲಿಸಿದರು.
ಸಿದ್ದರಾಮಯ್ಯ ಕಂದಾಯ ಇಲಾಖೆಯ ಆವರಣದಲ್ಲಿ ಮಂಗಳವಾರ ಸಮಾರಂಭ ಮುಗಿಸಿ ವೇದಿಕೆಯಿಂದ ಹೊರಗೆ ಬರುತ್ತಿದ್ದಾಗ ಮಹಿಳೆಯರು ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದರು. ನಂತರ ಅವರಿಗೆ ಮುತ್ತಿಗೆ ಹಾಕಿ ಸಮಸ್ಯೆಯನ್ನು ಹೇಳಿದರು.
ಎಂಎಸ್ಐಎಲ್ ಮದ್ಯದ ಅಂಗಡಿಯಿಂದ ಗ್ರಾಮದ ಜನರು ಮತ್ತು ಯುವಕರು ಕೆಟ್ಟ ಹವ್ಯಾಸಕ್ಕೆ ಬಲಿಯಾಗುವರು. ಗ್ರಾಮದಲ್ಲಿ ಮದ್ಯದ ಅಂಗಡಿ ಬೇಡ ಎಂದು ಈಗಾಗಲೇ ಮನವಿ ಸಲ್ಲಿಸಿದ್ದೇವೆ. ಮದ್ಯದ ಅಂಗಡಿಯನ್ನು ಬೇಗ ಬಂದ್ ಮಾಡಿಸಿ ಇಲ್ಲವೇ ನಮಗೆ ವಿಷ ಕೊಡಿ ಎಂದರು.