ಬಾದಾಮಿ: ಚಾಲುಕ್ಯ ದೊರೆಗಳು 250 ವರ್ಷಗಳ ಕಾಲ ವೈಭವದಿಂದ ಸಾಮ್ರಾಜ್ಯವನ್ನಾಳಿ ಅನೇಕ ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ದೇಶದ ಸಾಂಸ್ಕೃತಿಕ ಗತವೈಭವದ ಇತಿಹಾಸದ ಸಾಕ್ಷಿಗಳನ್ನು ಸ್ಮಾರಕಗಳಲ್ಲಿ ವೀಕ್ಷಿಸಬಹುದಾಗಿದೆ. ಆದರೆ, ಸ್ಮಾರಕಗಳಿಗೆ ಪೂರ್ಣ ಪ್ರಮಾಣದಲ್ಲಿ ಕಾಯಕಲ್ಪ ನೀಡುವ ಕೆಲಸ ಆಗಬೇಕಿದೆ.
ಚಾಲುಕ್ಯರು ಬಾದಾಮಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸಾಲು ಬೆಟ್ಟಗಳ ಪರಿಸರದಲ್ಲಿ ಬಾದಾಮಿ, ಪಟ್ಟದಕಲ್ಲು, ಐಹೊಳೆ, ಮಹಾಕೂಟ, ಹುಲಿಗೆಮ್ಮನಕೊಳ್ಳ, ನಾಗನಾಥಕೊಳ್ಳ, ಬಾಚಿನಗುಡ್ಡ ಬೆಟ್ಟಗಳಲ್ಲಿ ಗುಹಾಂತರ ಮತ್ತು ರಾಚನಿಕ ದೇವಾಲಯಗಳನ್ನು ನಿರ್ಮಿಸಿದರು.
ರಾಜ್ಯ, ಹೊರರಾಜ್ಯ ಮತ್ತು ವಿದೇಶಗಳಿಂದ ನಿತ್ಯ ಸಾವಿರಾರು ಪ್ರವಾಸಿಗರು ಚಾಲುಕ್ಯರ ಸ್ಮಾರಕಗಳನ್ನು ವೀಕ್ಷಿಸಿಲು ಬರುವರು. ಆದರೆ, ಇಲ್ಲಿ ಪ್ರವಾಸಿಗರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.
ಸ್ಮಾರಕಗಳಿಗೆ ರಸ್ತೆ ಸಂಪರ್ಕ, ಶೌಚಾಲಯ, ವಸತಿ ಸೌಕರ್ಯ, ಉತ್ತಮ ಹೋಟೆಲ್, ಸಾರಿಗೆ ಸಂಪರ್ಕ ಹಾಗೂ ಪಾರ್ಕಿಂಗ್ ಮತ್ತಿತರ ಮೂಲ ಸೌಲಭ್ಯಗಳು ಇಲ್ಲದ ಕಾರಣ ಪ್ರವಾಸಿಗರು ಪರದಾಡುವಂತಾಗಿದೆ.
ಬಾದಾಮಿ ಅಗಸ್ತ್ಯತೀರ್ಥ ದಂಡೆಯ 95 ಮನೆಗಳ ತೆರವು ಕಾರ್ಯಾಚರಣೆ ಎರಡು ದಶಕಗಳಿಂದ ನನೆಗುದಿಗೆ ಬಿದ್ದಿದೆ. ವಸ್ತು ಸಂಗ್ರಹಾಲಯಕ್ಕೆ ಹೋಗಲು ಸರಿಯಾದ ರಸ್ತೆ, ಮೇಣ ಬಸದಿ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯಲ್ಲಿಯೇ ವಾಹನ ಪಾರ್ಕಿಂಗ್ ಮಾಡುವಂತಾಗಿದೆ.
ಪ್ರವಾಸಿಗರ ವಾಹನಗಳ ಪಾರ್ಕಿಂಗ್ ಮಾಡಲು ಪಾರ್ಕಿಂಗ್ ಪ್ಲಾಜಾ ನಿರ್ಮಾಣಕ್ಕಾಗಿ ಎಪಿಎಂಸಿಯು 9 ಎಕರೆ ಭೂಮಿಯನ್ನು ಪ್ರವಾಸೋದ್ಯಮ ಇಲಾಖೆಗೆ ಕೊಟ್ಟಿದೆ. ನಿವೇಶನ ಇನ್ನೂ ಹಸ್ತಾಂತರವಾಗಿಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಎರಡೂ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಸೌಲಭ್ಯ ಕಲ್ಪಿಸಲು ಹಿನ್ನಡೆಯಾಗಿದೆ.
ಪಟ್ಟದಕಲ್ಲಿನಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಪ್ರವಾಸೋದ್ಯಮ ಇಲಾಖೆ ಎರಡು ಎಕರೆ ಜಮೀನು ಖರೀದಿಸಿ ಅನೇಕ ವರ್ಷಗಳು ಗತಿಸಿವೆ. ವಾಹನ ಚಾಲಕರು ರಸ್ತೆಯಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ. ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕಿದೆ.
₹28 ಕೋಟಿ ವೆಚ್ಚದಲ್ಲಿ ಪಟ್ಟದಕಲ್ಲಿನಲ್ಲಿ ಟೂರಿಸಂ ಪ್ಲಾಜಾ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಸರ್ಕಾರ ಅನುದಾನ ಬಿಡುಗಡೆ ಮಾಡಿ ಕಟ್ಟಡವನ್ನು ಪೂರ್ಣಗೊಳಿಸಬೇಕಿದೆ ಎಂದು ಗ್ರಾಮದ ಸಿದ್ದಪ್ಪ ಮಾದರ ಒತ್ತಾಯಿಸುತ್ತಾರೆ.
‘ಪ್ರವಾಸೋದ್ಯಮ ಬೆಳೆಯಲು ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಿದೆ. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಬಾಗಲಕೋಟೆಯಲ್ಲಿದೆ. ಬಾದಾಮಿಯಲ್ಲಿ ಆರಂಭಿಸಬೇಕೆಂದು ಪ್ರವಾಸೋದ್ಯಮ ಇಲಾಖೆ ಸಚಿವರಾಗಿದ್ದ ಸಾ.ರಾ. ಮಹೇಶ ಮತ್ತು ಈಗ ಮುಖ್ಯಮಮತ್ರಿಯಾಗಿರುವ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರೂ ಸೂಕ್ತ ಕ್ರಮ ಕೈಗೊಂಡಿಲ್ಲ’ ಎಂದು ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್. ವಾಸನ ಹೇಳಿದರು.
ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಸೋಮವಾರ ಬಾದಾಮಿಗೆ ಬರಲಿದ್ದು, ಪ್ರವಾಸಿ ತಾಣಗಳ ಅಭಿವೃದ್ಧಿ ಕುರಿತು ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು ಎನ್ನುತ್ತಾರೆ ವಾಸನ.
ಪಟ್ಟದಕಲ್ಲಿನಲ್ಲಿ ಹೌಸಿಂಗ್ ಬೋರ್ಡ್ ಮೂಲಕ ಟೂರಿಸಂ ಪ್ಲಾಜಾ ಹೋಟೆಲ್ ನಿರ್ಮಾಣ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದುಮಲ್ಲಿಕಾರ್ಜುನ ಭಜಂತ್ರಿ ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.