ಜಮಖಂಡಿ: ‘ಅಂದು ಅರಿವಿಲ್ಲದೆ ಎಲ್ಲರೂ ಕೂಡಿದ್ದೆವು. ಇಂದು ಅರಿವಿನಿಂದ ಎಲ್ಲರೂ ಸೇರಿದ್ದೇವೆ. ಒಂದೆಡೆ ಸೇರುವುದರಿಂದ ಪರಸ್ಪರ ಸಂಬಂಧಗಳು ಬೆಳೆಯುತ್ತವೆ. ಹಳೆಯ ನೆನಪುಗಳನ್ನು ಮೆಲಕು ಹಾಕುವುದರಲ್ಲಿ ಸಿಗುವ ಖುಷಿ ಬೇರೆ ಯಾವುದರಲ್ಲಿಯೂ ಸಿಗುವುದಿಲ್ಲ’ ಎಂದು ಡಾ.ಉಮೇಶ ಮಹಾಬಳಶೆಟ್ಟಿ ಹೇಳಿದರು.
ನಗರದ ಸರ್ಕಾರಿ ಪಿ.ಬಿ. ಹೈಸ್ಕೂಲ್ ಮತ್ತು ಸರ್ಕಾರಿ ಬಾಲಿಕೆಯರ ಹೈಸ್ಕೂಲ್ನ (ಜಿ.ಜಿ. ಹೈಸ್ಕೂಲ್) 1978–81 ನೇ ತಂಡದ ಹಳೆಯ ವಿದ್ಯಾರ್ಥಿಗಳು ಇಲ್ಲಿನ ಎಸ್ಆರ್ಎ ಕ್ಲಬ್ ಸಭಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪುನರ್ ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಎಲ್ಲ ಭೇದಭಾವ ಮರೆತು ಒಂದೆಡೆ ಸೇರುವುದು ಅಪರೂಪ ಎನಿಸುತ್ತದೆ. ಪರಸ್ಪರ ಕಷ್ಟ–ಸುಖಗಳನ್ನು ಹಂಚಿಕೊಳ್ಳಲು ಒಂದು ವೇದಿಕೆ ದೊರೆಯುತ್ತದೆ. ಪುನರ್ ಮಿಲನ ನಿರಂತರವಾಗಿ ನೆನಪಿನ ಅಂಗಳದಲ್ಲಿ ಉಳಿಯುತ್ತದೆ. ಒಬ್ಬರಿಗೊಬ್ಬರು ಸಹಾಯ ಮಾಡಲು ನೆನಪು ನೆರವಾಗುತ್ತವೆ’ ಎಂದರು.
ಹುನಗುಂದ ತಹಶೀಲ್ದಾರ್ ಸುಭಾಷ್ ಸಂಪಗಾವಿ ಮಾತನಾಡಿ, ‘ಸರ್ಕಾರಿ ಹುದ್ದೆ ಮತ್ತು ಹುದ್ದೆಯಿಂದ ದೊರೆಯುವ ಗೌರವ ಶಾಶ್ವತವಲ್ಲ. ಬದಲಾಗಿ ಸ್ನೇಹತ್ವ ಶಾಶ್ವತ’ ಎಂದರು.
ಹುಬ್ಬಳ್ಳಿಯ ಕೆಎಲ್ಇ ಸಂಸ್ಥೆಯ ಕಾಡಸಿದ್ಧೇಶ್ವರ ಕಲಾ ಮತ್ತು ಕೋತಂಬ್ರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮಿ ಹಿರೇಮಠ ಮಾತನಾಡಿ, ‘ಮಿಲನ ಶಬ್ದ ಬಹಳ ಪವಿತ್ರವಾದುದು’ ಎಂದು ಹೇಳಿದರು.
ಡಾ.ಶಾರದಾ ಮುಳ್ಳೂರ, ಪ್ರಮೋದ ಗಲಗಲಿ, ಕೆ.ಎಲ್. ಮಾಳಿ, ಕಾಡು ಪರೀಟ, ಬಸಗೊಂಡ ಕನಾಳ, ಜಗನ್ನಾಥ ಕುಲಕರ್ಣಿ, ಬಾಗಲಕೋಟೆಯ ಮಾರಾಟ ತೆರಿಗೆ ಸಹಾಯಕ ಆಯುಕ್ತ ಆಲಬಾಳ ಮಾತನಾಡಿದರು.
ಪುನರ್ ಮಿಲನ ತಂಡ ಹಳೆಯ ವಿದ್ಯಾರ್ಥಿಗಳಿಂದ ಪಿ.ಬಿ. ಹೈಸ್ಕೂಲ್ನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಇ–ಶೌಚಾಲಯ ನಿರ್ಮಿಸಿ ಅವುಗಳ ಸಂಪೂರ್ಣ ನಿರ್ವಹಣೆಯ ಹೊಣೆಯನ್ನು ನಿಭಾಯಿಸುವ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.