ಬಳ್ಳಾರಿ: ‘ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಇರುವ ಸಮಸ್ಯೆಗಳ ಕುರಿತು ಸದನದಲ್ಲಿ ಧ್ವನಿ ಎತ್ತುತ್ತೇನೆ. ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಲು ಶ್ರಮಿಸುತ್ತೇನೆ’ ಎಂದು ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಹೇಳಿದರು.
ಚುನಾವಣೆಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳಿಗಾಗಿ ಮಂಗಳವಾರ ಪಕ್ಷದ ಜಿಲ್ಲಾ ಘಟಕದ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
‘ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗುವುದು. ಹಾಗಾಗಿ ನನ್ನ ಗುರುತಿಗೆ ಒಂದು ಗೆರೆ ಎಳೆಯುವುದರ ಮೂಲಕ ನನ್ನನ್ನು ಶಾಸನಸಭೆಗೆ ಕಳುಹಿಸಿ ಕೊಡಬೇಕು‘ ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಜಿಲ್ಲಾ ಅಧ್ಯಕ್ಷ ಅನೀಲ್ ಕುಮಾರ್ ಮೋಕ, ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಮಹಿಪಾಲ್, ಮಹೇಶ್ವರ ಸ್ವಾಮಿ, ಮುರಹರ ಗೌಡ, ಗುರುಲಿಂಗನ ಗೌಡ ಸೇರಿದಂತೆ ಹಲವರು ಇದ್ದರು.
ಕಾಲೇಜುಗಳಲ್ಲಿ ಮತಯಾಚನೆ: ಅಮರನಾಥ ಪಾಟೀಲ ಅವರು ನಗರದ ರಾವ್ ಬಹದ್ದೂರ್ ಇಂಜಿನಿಯರಿಂಗ್ ಕಾಲೇಜು ಮತ್ತು ಬಿಐಟಿಎಂಗಳಲ್ಲಿ ಮಂಗಳವಾರ ಮತಯಾಚಿಸಿದರು. ಅವರೊಂದಿಗೆ ಜಿಲ್ಲೆಯ ಹಲವು ಮುಖಂಡರು ಭಾಗಿಯಾಗಿದ್ದರು.