ಹೊಸಪೇಟೆ: ಕೊರೊನಾ ಸೋಂಕು ಹರಡದಂತೆ ಲಾಕ್ಡೌನ್ ಘೋಷಿಸಿದರೂ ಅದನ್ನು ಲೆಕ್ಕಿಸದೆ ಹೊರಬರುತ್ತಿರುವ ಜನರಿಗೆ ‘ದುರ್ಗಾ ಟೀಂ’ ವಿನೂತನ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದೆ.
ಹೊರಗೆ ಬಂದವರನ್ನು ತಡೆದು ಅವರಿಗೆ, ‘ನಾನು ನನಗೆ ನಾಚಿಕೆಪಡುತ್ತೇನೆ. ನಾನು ನಿಮ್ಮ ಜೀವನವನ್ನು ಅಪಾಯಕ್ಕೆ ಸಿಲುಕಿಸಿದೆ’ ಎಂಬ ಒಕ್ಕಣೆ ಹೊಂದಿರುವ ಪೋಸ್ಟರ್ ಅನ್ನು ಕೊಟ್ಟು ಕಳುಹಿಸುತ್ತಿದ್ದಾರೆ.
ಅನಗತ್ಯವಾಗಿ ಹೊರಗೆ ಓಡಾಡುತ್ತಿರುವವರಿಗೆ ಬೆತ್ತದ ರುಚಿ ತೋರಿಸಿ ಸಾಕಾಗಿರುವ ಮಹಿಳಾ ಪೊಲೀಸರು ಈಗ ಈ ಹೊಸ ದಾರಿ ಕಂಡುಕೊಂಡಿದ್ದು, ಎಷ್ಟರಮಟ್ಟಿಗೆ ಫಲ ಕೊಡುತ್ತದೆ ನೋಡಬೇಕಿದೆ.
‘ಜನರಿಗೆ ಎಲ್ಲಾ ರೀತಿಯಿಂದಲೂ ಹೇಳಿ ಹೇಳಿ ಸಾಕಾಗಿದೆ. ಇನ್ನೊಂದು ಹೊಸ ಪ್ರಯತ್ನದ ಭಾಗವಾಗಿ ಪೋಸ್ಟರ್ ಕೊಡಲಾಗುತ್ತಿದೆ. ಅದರಿಂದಲಾದರೂ ಬದಲಾಗಬಹುದು ಎಂಬ ಭರವಸೆ ಇದೆ’ ಎಂದು ಡಿವೈಎಸ್ಪಿ ವಿ. ರಘುಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.