ಹೂವಿನಹಡಗಲಿ: ಪಟ್ಟಣದ ತಾಲ್ಲೂಕು ಕಚೇರಿಗೆ ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಅವರು ಶುಕ್ರವಾರ ದಿಢೀರ್ ಭೇಟಿ ನೀಡಿ, ಭೂ ಮಾಪನ ಶಾಖೆ, ಕಂದಾಯ ವಿಭಾಗ, ಆಹಾರ ಶಾಖೆ ವೀಕ್ಷಿಸಿದರು. ಸ್ಥಳದಲ್ಲಿದ್ದ ಸಾರ್ವಜನಿಕರ ಅಹವಾಲು ಆಲಿಸಿದರು.
‘ಜನರನ್ನು ಅಲೆದಾಡಿಸದೆ ಕಾಲಮಿತಿಯೊಳಗೆ ಕೆಲಸ ಮಾಡಿಕೊಡಿ. ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿ’ ಎಂದು ಸೂಚಿಸಿದರು.
ಅಬಕಾರಿ, ಭೂಮಾಪನ, ಆಹಾರ, ಉಪ ನೋಂದಣಾಧಿಕಾರಿ ಕಚೇರಿಗಳ ಮುಖ್ಯಸ್ಥರು ತಮ್ಮ ವಿಭಾಗಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ತಿಳಿಸಿದರು. ಶೌಚಾಲಯಕ್ಕೆ ಬೀಗ ಹಾಕಿರುವುದನ್ನು ಕಂಡು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ನಂತರ ಹಿರೇಹಡಗಲಿಯ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ, ದಾಸ್ತಾನು ಕೊಠಡಿ ಪರಿಶೀಲಿಸಿದರು. ಕೊಠಡಿಯಲ್ಲಿದ್ದ ಸಾಮಗ್ರಿಗೂ, ದಾಸ್ತಾನು ಪುಸ್ತಕದ ಮಾಹಿತಿಗೂ ತಾಳೆಯಾಗದ್ದಕ್ಕೆ ವಾರ್ಡನ್ಗೆ ನೋಟಿಸ್ ನೀಡಲು ತಹಶೀಲ್ದಾರ್ ಶರಣಮ್ಮ ಅವರಿಗೆ ತಿಳಿಸಿದರು. ಸಮರ್ಪಕ ಉತ್ತರ ನೀಡದಿದ್ದಲ್ಲಿ ಸೇವೆಯಿಂದ ಅಮಾನತುಗೊಳಿಸಲು ಸೂಚಿಸಿದರು.
ಬಯೋಮೆಟ್ರಿಕ್ ವ್ಯವಸ್ಥೆ ಇದ್ದರೂ ಬಳಕೆ ಮಾಡದಿರುವ ಕುರಿತು ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳಿಗೂ ನೋಟಿಸ್ ನೀಡಲು ತಿಳಿಸಿದರು. ‘ನಿಲಯಕ್ಕೆ ಗುಣಮಟ್ಟದ ತರಕಾರಿ, ಹಾಲು ಪೂರೈಕೆಯಾಗುತ್ತಿಲ್ಲ. ಪೂರೈಕೆದಾರರಿಗೆ ಒಮ್ಮೆ ತಿಳಿಸಿ ಹೇಳಿ, ಸರಿಪಡಿಸಿಕೊಳ್ಳದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸಿ’ ಎಂದರು.
ಹೊಳಲು ಗ್ರಾಮದಲ್ಲಿ ಮಳೆಯಿಂದ ಹಾನಿಗೀಡಾದ ಮನೆಗಳನ್ನು ವೀಕ್ಷಿಸಿದ ಅವರು, ‘ಕುಸಿದ ಮನೆಗಳಿಗೆ ನೀಡುವ ಪರಿಹಾರ ಮೊತ್ತವನ್ನು ಸರ್ಕಾರ ಪರಿಷ್ಕರಿಸಿದೆ. ಸಂಪೂರ್ಣ ಬಿದ್ದಿದ್ದರೆ ₹5 ಲಕ್ಷ, ಭಾಗಶಃ ಬಿದ್ದರೆ ₹3 ಲಕ್ಷ, ಕಡಿಮೆ ಹಾನಿಗೀಡಾದ ಮನೆಯ ದುರಸ್ತಿಗೆ ₹50 ಸಾವಿರ ಪರಿಹಾರ ನೀಡಲಾಗುತ್ತದೆ’ ಎಂದು ತಿಳಿಸಿದರು.
ಹೂವಿನಹಡಗಲಿ ತಾಲ್ಲೂಕು ಹೊಳಲು ಗ್ರಾಮದಲ್ಲಿ ಮಳೆಯಿಂದ ಹಾನಿಗೀಡಾದ ಮನೆಯನ್ನು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ವೀಕ್ಷಿಸಿ ಸಂತ್ರಸ್ತರೊಂದಿಗೆ ಮಾತನಾಡಿದರು.