ಹೊಸಪೇಟೆ(ವಿಜಯನಗರ): ‘ಕೋವಿಡ್ನಿಂದ ಸ್ಥಳೀಯ ಕಲಾವಿದರಿಗೆ ಯಾವುದೇ ಕಾರ್ಯಕ್ರಮ ಸಿಗದೆ ಕಲಾವಿದರ ಬದುಕು ದಯನೀಯ ಸ್ಥಿತಿಗೆ ಬಂದು ತಲುಪಿದೆ. ಯಾರ ಮುಂದೆಯೂ ಹೇಳಲಾಗದೆ ಮೂಕವೇದನೆ ಅನುಭವಿಸುತ್ತಿರುವ ಕಲಾವಿದರ ನೋವಿಗೆ ಸರ್ಕಾರ ಸ್ಪಂದಿಸಬೇಕು’ ಎಂದು ಕಲಾವಿದರ ಮಾಸಾಶನ ಮಂಜೂರಾತಿ ಆಯ್ಕೆ ಸಮಿತಿ ಸದಸ್ಯ ವಿ.ಡಿ.ವೆಂಕನಗೌಡ ತಿಳಿಸಿದರು.
ತಾಲ್ಲೂಕಿನ ಕಡ್ಡಿರಾಂಪುರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದದಿಂದ ಆಯೋಜಿಸಿದ್ದ ಸಾಂಸ್ಕೃತಿಕೊತ್ಸವ ಕಾರ್ಯಕ್ರಮವನ್ನು ಶನಿವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.
‘ಸ್ವಾಭಿಮಾನಿ ಕಲಾವಿದರು ತಮ್ಮ ಸಮಸ್ಯೆಗಳನ್ನು ಯಾರ ಮುಂದೆಯೂ ಹೇಳದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಥಳೀಯ ಕಲಾವಿದರು ಅನೇಕರಿದ್ದಾರೆ. ಅವರನ್ನು ಗುರುತಿಸಿ ಗೌರವಿಸಬೇಕಿದೆ’ ಎಂದು ಹೇಳಿದರು.
ಕಲಾವೃಂದದ ಅಧ್ಯಕ್ಷ ಅಂಗಡಿ ವಾಮದೇವ, ಮಲ್ಲಿಕಾರ್ಜುನ ಬಡಿಗೇರ, ಎಚ್.ಕೆ. ಶರಣೇಶ, ಕೆ.ಪಂಪನಗೌಡ, ಎ.ದೊಡ್ಡಬಸಪ್ಪ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಬಾಲಕಿಯರು ಆಕರ್ಷಕ ನೃತ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಮನೋವೈದ್ಯ ಟಿ.ಅಜಯ್ ಕುಮಾರ್, ಹಂಪಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ರಾಜೇಶ್ವರಿ, ಸಖಿ ಸಂಸ್ಥೆಯ ಭಾಗ್ಯಲಕ್ಷ್ಮಿ, ಉಪನ್ಯಾಸಕ ಟಿ.ಎಚ್.ಬಸವರಾಜ ಇದ್ದರು.