ಹೊಸಪೇಟೆ(ವಿಜಯನಗರ): ತಾಲ್ಲೂಕಿನ ಹಂಪಿಯಲ್ಲಿ ಭಾನುವಾರ ಸ್ವಚ್ಛ ಭಾರತ, ಸ್ವಚ್ಛ ಪರ್ಯಟನೆ ಕಾರ್ಯಕ್ರಮದ ಪ್ರಯುಕ್ತ ಪ್ರವಾಸಿಗರಲ್ಲಿ ಜನಜಾಗೃತಿ ಮೂಡಿಸಲಾಯಿತು.
ಪ್ರವಾಸೋದ್ಯಮ ಸಚಿವಾಲಯ, ಸ್ವಚ್ಛ ಭಾರತ್ ಮಿಷನ್ ಹಾಗೂ ನೋಯ್ಡಾದ ಐಐಟಿಟಿಎಂ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರು ರಾಮಾಯಣ ನಾಟಕ ಪ್ರದರ್ಶನ ಮಾಡಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿದರು.
ಐಐಟಿಟಿಎಂ ನೋಡಲ್ ಅಧಿಕಾರಿ ಪವನ್ ಗುಪ್ತಾ ಮಾತನಾಡಿ, ‘ವಿಶ್ವವಿಖ್ಯಾತ ಹಂಪಿಗೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಸ್ಮಾರಕಗಳನ್ನು ಸಂರಕ್ಷಿಸುವ ಜೊತೆಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.
ಜಾಗೃತಿ ಕಾರ್ಯಕ್ರಮದ ಸಂಯೋಜಕ ಸಂಜೀವರೆಡ್ಡಿ, ಚಾರುಶೀಲ ಯಾದವ್, ಕರ್ನಾಟಕ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವಿ.ವಿರುಪಾಕ್ಷಿ, ಎಸ್ ದೇವರಾಜ್, ಎಚ್.ಹುಲಗಪ್ಪ, ಶಂಕರ್, ವಿ.ಗೋಪಾಲ್ ಹಾಗೂ ಮಂಜುನಾಥ್ ಗೌಡ ಇದ್ದರು.