ಹೊಸಪೇಟೆ: ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ.
ಬುಧವಾರ ರಾತ್ರಿ ಆರಂಭಗೊಂಡ ಮಳೆ ಎಡೆಬಿಡದೆ ಸುರಿಯಿತು. ಗುರುವಾರ ನಸುಕಿನ ಜಾವ ಕೆಲ ಸಮಯ ಬಿಡುವು ಕೊಟ್ಟ ಮಳೆ ಪುನಃ ಸುರಿಯಲಾರಂಭಿಸಿದೆ.
ಸತತ ಮಳೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದೆ. ಚರಂಡಿಗಳು ತುಂಬಿ ಹರಿಯುತ್ತಿದ್ದು, ಹೊಲಸು ಮಿಶ್ರಿತ ನೀರು ರಸ್ತೆ ಮೇಲೆ ಹರಿಯುತ್ತಿದೆfd.
ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳಿಗ್ಗೆ ದೈನಂದಿನ ಕೆಲಸಕ್ಕೆ ಹೋಗುವವರು ಕೊಡೆಗಳನ್ನು ಹಿಡಿದುಕೊಂಡು ಹೆಜ್ಜೆ ಹಾಕುತ್ತಿರುವುದು ಕಂಡು ಬಂತು.
ಪ್ರವಾಸಿ ತಾಣ ಹಂಪಿ, ಕಮಲಾಪುರ ಸೇರಿದಂತೆ ಹೊಸೂರು, ನಾಗೇನಹಳ್ಳಿ, ಮರಿಯಮ್ಮನಹಳ್ಳಿ, ಬಸವನದುರ್ಗ, ಮಲಪನಗುಡಿ, ಕೊಂಡನಾಯಕನಹಳ್ಳಿ, ಕಡ್ಡಿರಾಂಪುರದಲ್ಲೂ ಮಳೆಯಾಗಿರುವುದು ವರದಿಯಾಗಿದೆ.
ಇನ್ನು ಮೂರರಿಂದ ನಾಲ್ಕು ದಿನ ಇದೇ ರೀತಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆಯಿಂದ ಬಿತ್ತನೆ ಕೆಲಸ ಮತ್ತಷ್ಟು ಚುರುಕು ಪಡೆದುಕೊಂಡಿದೆ. ಮೇ ಕೊನೆಯ ವಾರಕ್ಕೆ ಶೇ 70ರಷ್ಟು ರೈತರು ಬಿತ್ತನೆಗೆ ನೆಲ ಹದ ಮಾಡಿಕೊಂಡಿದ್ದರು. ಎರಡ್ಮೂರು ದಿನಗಳಲ್ಲಿ ಇದು ನೂರು ಆಗಲಿದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.