ಹೊಸಪೇಟೆ (ವಿಜಯನಗರ): ಮುಸ್ಲಿಂ ಸಮಾಜಕ್ಕೆ ನೀಡಿದ್ದ ಪ್ರವರ್ಗ–2ಬಿ ಮೀಸಲಾತಿ ರದ್ದುಗೊಳಿಸಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್ಎಸ್) ತಿಳಿಸಿದೆ.
ಪಕ್ಷದ ಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಸಾಂಕೇತಿಕ ಧರಣಿ ನಡೆಸಿ, ರಾಷ್ಟ್ರಪತಿಯವರ ಹೆಸರಿಗೆ ಬರೆದ ಮನವಿ ಪತ್ರ ಸಲ್ಲಿಸಿ ಹಕ್ಕೊತ್ತಾಯ ಮಾಡಿದರು.
ದೇಶದಲ್ಲಿ ಶೇ 15ರಷ್ಟು ಮುಸ್ಲಿಮರಿದ್ದಾರೆ. ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ. ಹೀಗಿರುವಾಗ 2ಬಿ ಮೀಸಲು ರದ್ದುಪಡಿಸಿದ ಕ್ರಮ ಸರಿಯಲ್ಲ. ಇದರಿಂದ ಸಮಾಜದವರು ಮತ್ತಷ್ಟು ಹಿಂದುಳಿಯಬಹುದು. ಅನ್ಯಾಯ ಮಾಡಿದಂತಾಗುತ್ತದೆ. ಕೂಡಲೇ ಸರ್ಕಾರ ತನ್ನ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಬಡ ಮುಸ್ಲಿಮರ ಸಮಗ್ರ ಕಲ್ಯಾಣಕ್ಕಾಗಿ ಸರ್ಕಾರ ಯೋಜನೆ ರೂಪಿಸಬೇಕು. ಅದರಲ್ಲೂ ಮಹಿಳಾ ಸ್ವಸಹಾಯ ಗುಂಪುಗಳ ರಚನೆಗೆ ಪ್ರೋತ್ಸಾಹಿಸಬೇಕು. ಕೌಶಲ ತರಬೇತಿ ನೀಡಬೇಕು. ರಕ್ಷಣಾ ಪಡೆಗಳಲ್ಲಿ ಮುಸ್ಲಿಮರಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು. ಪಕ್ಷದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಟಿ. ನಜೀರ್ ಇತರರಿದ್ದರು.