ಹೊಸಪೇಟೆ: ‘ವಿಜ್ಞಾನ ಲೋಕದಲ್ಲಾಗುವ ಆವಿಷ್ಕಾರದ ಪ್ರಯೋಜನಗಳು ಜನಸಾಮಾನ್ಯರಿಗೆ ಸಿಗಬೇಕು ಹೊರತು ಅವುಗಳು ವ್ಯಾಪಾರಿ ಮನೋಭಾವ ಹೊಂದಿರುವ ಕಂಪನಿಗಳ ಪಾಲಾಗಬಾರದು ಎಂದು ಮೇಡಂ ಕ್ಯೂರಿ ಅಚಲವಾಗಿ ನಂಬಿದ್ದರು’ ಎಂದು ‘ಆಲ್ ಇಂಡಿಯಾ ಡೆಮೊಕ್ರಟಿಕ್ ಯುತ್ ಆರ್ಗನೈಸೇಷನ್’ (ಎ.ಐ.ಡಿ.ವೈ.ಒ.) ಜಿಲ್ಲಾ ಉಪಾಧ್ಯಕ್ಷ ಕೆ. ಶ್ರೀಕಾಂತ್ ಹೇಳಿದರು.
ಎ.ಐ.ಡಿ.ವೈ.ಒ.ನಿಂದ ಗುರುವಾರ ಚಿತ್ತವಾಡ್ಗಿಯ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಚಿರಂತನ ಸ್ಫೂರ್ತಿಯ ಸೆಲೆ ಮೇಡಂ ಕ್ಯೂರಿ’ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
‘ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅತಿ ಮಹತ್ವದಾಗಿರುವ ರೇಡಿಯಂ ಎಂಬ ಮೂಲಧಾತುವನ್ನು ಕಂಡು ಹಿಡಿದರು. ಅಷ್ಟೇ ಅಲ್ಲ, ಅಮೆರಿಕದ ಕಂಪನಿಗೆ ಅದರ ಪೇಟೆಂಟ್ ಕೊಡಲು ನಿರಾಕರಿಸಿ, ಅದರ ಲಾಭ ಸಾಮಾನ್ಯ ಜನರಿಗೆ ಸಿಗುವಂತೆ ನೋಡಿಕೊಂಡವರು ಮೇಡಂ ಕ್ಯೂರಿ. ಆದರೆ, ನಮ್ಮನ್ನಾಳುವ ಸರ್ಕಾರ ಅವರ ಆವಿಷ್ಕಾರದ ಫಲವನ್ನು ಖಾಸಗಿಯವರಿಗೆ ಒಪ್ಪಿಸಿ ಕೈಚೆಲ್ಲಿ ಕುಳಿತಿವೆ’ ಎಂದು ತಿಳಿಸಿದರು.
‘ವೈದ್ಯರು ರೋಗಿಗಳಿಂದ ಹಗಲು ದರೋಡೆ ಮಾಡುತ್ತಿರುವುದು, ಒಂದು ರೂಪಾಯಿಯ ಔಷಧ ಕೂಡ ಜನತೆಯನ್ನು ತಲುಪಲು ವಿಫಲವಾಗುತ್ತಿರುವ ಇಂತಹ ದಿನಗಳಲ್ಲಿ ವೈದ್ಯಕೀಯ ಲೋಕಕ್ಕೆ ಅದ್ಭುತ ಕೊಡುಗೆ ಕೊಟ್ಟವರು ಮೇಡಂ ಕ್ಯೂರಿ. ಸಮಾಜದ ಬಗ್ಗೆ ಕ್ಯೂರಿಗಿದ್ದ ಕಾಳಜಿ ಎಷ್ಟು ಹೊಗಳಿದರೂ ಕಡಿಮೆ. ಅಂತಹ ನಿಸ್ವಾರ್ಥ ಮನೋಭಾವದಿಂದ ವೈದ್ಯಕೀಯ ಲೋಕದಲ್ಲಿ ಮತ್ತೆ ಹೊಸ ಹೊಸ ಆವಿಷ್ಕಾರಗಳು ಆಗಬೇಕು’ ಎಂದರು.
ಜಿಲ್ಲಾ ಕಾರ್ಯದರ್ಶಿ ಎಚ್. ಯರ್ರಿಸ್ವಾಮಿ ಮಾತನಾಡಿ, ‘ವಿಜ್ಞಾನದ ಹೆಸರಿನಲ್ಲಿ ಸಮಾಜದಲ್ಲಿ ಸುಳ್ಳು ಬಿತ್ತಲಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ’ ಎಂದರು.
ಪಿಯು ಕಾಲೇಜಿನ ಪ್ರಾಧ್ಯಾಪಕ ನಾಗರಾಜ್, ವಿದ್ಯಾರ್ಥಿ ಮುಖಂಡರಾದ ಹುಲುಗಪ್ಪ, ರವಿ, ಅರುಣಾ, ಪ್ರಭು, ಹೊನ್ನೂರ ಸ್ವಾಮಿ, ರಮೇಶ ನಾಗರಾಜ್, ಮೊಹಮ್ಮದ್ ಇದ್ದರು.