ಹೂವಿನಹಡಗಲಿ: ‘ಬರಗಾಲ ಹಿನ್ನೆಲೆಯಲ್ಲಿ ಕಾರ್ಮಿಕರು ಕೂಲಿ ಅರಸಿ ವಲಸೆ ಹೋಗಬಾರದು. ನಮೂನೆ-6 ಮೂಲಕ ಬೇಡಿಕೆ ಸಲ್ಲಿಸಿದವರಿಗೆ ಸ್ಥಳೀಯವಾಗಿ ಕೂಲಿ ಕೆಲಸ ನೀಡಲಾಗುತ್ತಿದೆ’ ಎಂದು ನರೇಗಾ ಸಹಾಯಕ ನಿರ್ದೇಶಕ ಡಿ. ವೀರಣ್ಣ ನಾಯ್ಕ ಹೇಳಿದರು.
ತಾಲ್ಲೂಕಿನ ಮಾಗಳ ಗ್ರಾಮದಲ್ಲಿ ಬುಧವಾರ ನಾಲಾ ಪುನಶ್ಚೇತನ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕಾರ್ಮಿಕರೊಂದಿಗೆ ಸಮಾಲೋಚಿಸಿದರು.
‘ನಿಗದಿತ ಅಳತೆಯ ಕೆಲಸ ನಿರ್ವಹಿಸುವ ಕೂಲಿಕಾರರಿಗೆ ₹349 ಪೂರ್ಣ ಕೂಲಿ ದೊರೆಯಲಿದೆ. ನರೇಗಾ ಕಾರ್ಮಿಕರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.
‘ಮೇ 7 ರಂದು ಜರುಗಲಿರುವ ಲೋಕಸಭೆ ಚುನಾವಣೆಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡಬೇಕು. ಕಾರ್ಮಿಕರು ತಪ್ಪದೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು’ ಎಂದು ಹೇಳಿದರು.
ಪಿಡಿಒ ಮಂಜುನಾಥ ರಡ್ಡೇರ, ತಾಂತ್ರಿಕ ಸಿಬ್ಬಂದಿ ರವಿಕುಮಾರ್, ಪ್ರಕಾಶನಾಯ್ಕ, ಸಂತೋಷನಾಯ್ಕ, ದಿಲ್ ಶಾದ್ ಇದ್ದರು.