ಹೊಸಪೇಟೆ: ನಗರದ ಕೆಲವು ಕಡೆ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಗುರುವಾರ ಬಿರುಸಿನ ಮಳೆಯಾಗಿದೆ.
ಸಂಡೂರು ರಸ್ತೆ, ನೆಹರೂ ಕಾಲೊನಿ, ಟಿ.ಬಿ. ಡ್ಯಾಂ ರಸ್ತೆ, ಹರಿಹರ ರಸ್ತೆಯಲ್ಲಿ ಒಂದು ಗಂಟೆಗೂ ಅಧಿಕ ಸಮಯ ಬಿರುಸಿನ ಮಳೆಯಾಗಿದ್ದರಿಂದ ರಸ್ತೆಯ ತುಂಬೆಲ್ಲ ನೀರು ಆವರಿಸಿಕೊಂಡಿತ್ತು. ಹರಿಹರ ರಸ್ತೆಯ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಯ ಪ್ರಾಂಗಣ, ಅದರ ಎದುರಿನ ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು. ತಡಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಇನ್ನೂ ಪಟೇಲ್ ನಗರ, ರಾಣಿಪೇಟೆ, ಚಪ್ಪರದಹಳ್ಳಿ, ವಾಲ್ಮೀಕಿ ವೃತ್ತ, ಏಳುಕೇರಿ, ಎಂ.ಪಿ. ಪ್ರಕಾಶ್ ಬಡಾವಣೆಯಲ್ಲಿ ಕೆಲಹೊತ್ತು ತುಂತುರು ಮಳೆಯಾಗಿದೆ. ತಾಲ್ಲೂಕಿನ ವ್ಯಾಸನಕೆರೆ, ಸಂಕ್ಲಾಪುರ, ಸೀತಾರಾಮ ತಾಂಡಾ, ಚಿನ್ನಾಪುರ ಸೇರಿದಂತೆ ಹಲವೆಡೆ ಮಳೆಯಾಗಿರುವುದು ವರದಿಯಾಗಿದೆ.