ಹೊಸಪೇಟೆ: ವಿಜಯನಗರ ಕ್ಷೇತ್ರದ ಉಪಚುನಾವಣೆಗೆ ಮಂಗಳವಾರ ಯಾರೊಬ್ಬರೂ ನಾಮಪತ್ರ ಸಲ್ಲಿಸಲಿಲ್ಲ.
ಚುನಾವಣಾ ಪ್ರಕ್ರಿಯೆಗೆ ಅಧಿಸೂಚನೆ ಹೊರಬಿದ್ದ ಮೊದಲ ದಿನ ಸೋಮವಾರ ಜೆ.ಡಿ.ಎಸ್.ನಿಂದ ಎನ್.ಎಂ. ನಬಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಎರಡನೇ ದಿನ ಯಾರೊಬ್ಬರೂ ಸಂಡೂರು ರಸ್ತೆಯ ಚುನಾವಣಾಧಿಕಾರಿ ಕಚೇರಿಯತ್ತ ಸುಳಿಯಲಿಲ್ಲ. ಚುನಾವಣಾ ಸಿಬ್ಬಂದಿ ಯಾವುದೇ ಕೆಲಸವಿಲ್ಲದೆ ಸುಮ್ಮನೆ ಕೂರುವಂತಾಯಿತು.
ನಾಮಪತ್ರ ಸಲ್ಲಿಸಲು ನ. 18 ಕೊನೆಯ ದಿನವಾಗಿದ್ದು, ಅನರ್ಹ ಶಾಸಕ ಆನಂದ್ ಸಿಂಗ್ ಅವರ ಅನರ್ಹತೆ ಪ್ರಕರಣ ಬುಧವಾರ (ನ. 13) ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಿದೆ. ಅದರ ಬಳಿಕ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಚುರುಕುಗೊಳ್ಳಬಹುದು.
ಉಪಚುನಾವಣೆಗೆ ಇದುವರೆಗೆ ಮೂವರು ನಾಮಪತ್ರ ಸಲ್ಲಿಸಿದಂತಾಗಿದೆ. ಸೆಪ್ಟೆಂಬರ್ನಲ್ಲಿ ಚುನಾವಣೆ ಘೋಷಣೆಯಾದಾಗ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಅವುಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.