ಹೊಸಪೇಟೆ: ಗುರುವಾರ ಬಿಜೆಪಿ ಅಭ್ಯರ್ಥಿ ಪರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮತಯಾಚಿಸಿದ್ದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಶುಕ್ರವಾರ ಕೂಡ ಬಿರುಸಿನ ಪ್ರಚಾರ ಕೈಗೊಂಡರು.
ಕ್ಷೇತ್ರ ವ್ಯಾಪ್ತಿಯ ಕಾರಿಗನೂರು, ಜಿ.ಜಿ. ಕ್ಯಾಂಪ್, ಶಂಕರ ನಗರ ಕ್ಯಾಂಪ್, ಇಂಗಳಗಿ, ವಡ್ಡರಹಳ್ಳಿ, ಪಾಪಿನಾಯಕನಹಳ್ಳಿ, ಕಾಕುಬಾಳು, ಗುಂಡ್ಲವದ್ದಿಗೇರಿ, ಬೈಲುವದ್ದಿಗೇರಿ, ಧರ್ಮಸಾಗರ, ಕೊಟಗಿನಹಾಳು, ಗಾದಿಗನೂರು ಹಾಗೂ ಭುವನಹಳ್ಳಿಯಲ್ಲಿ ಓಡಾಡಿ ಆನಂದ್ ಸಿಂಗ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
‘ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸುಭದ್ರವಾಗಿರಬೇಕಾದರೆ ಜನ ಆನಂದ್ ಸಿಂಗ್ ಅವರನ್ನು ಗೆಲ್ಲಿಸಬೇಕು. ಅವರು ಗೆದ್ದರೆ ಮಂತ್ರಿ ಆಗುವುದು ಖಚಿತ. ಅದರಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಯಾಗಲಿದೆ’ ಎಂದು ಹೇಳಿದರು.
‘ಆನಂದ್ ಸಿಂಗ್ ಸತತ ಮೂರು ಸಲ ಗೆದ್ದು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಅಂತಹವರು ರಾಜಕಾರಣದಲ್ಲಿ ಇರಬೇಕು. ಜನ ಖಂಡಿತವಾಗಿಯೂ ಅವರ ಕೈ ಹಿಡಿಯುತ್ತಾರೆ ಎಂಬ ಭರವಸೆ ಇದೆ’ ಎಂದು ತಿಳಿಸಿದರು.
ಶ್ರೀರಾಮುಲು ಅವರಿಗೆ ಸಂಸದ ವೈ. ದೇವೇಂದ್ರಪ್ಪ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ, ಮುಖಂಡರಾದ ನಾರಾಯಣಸಾ ಭಾಂಡಗೆ, ಅನಂತ ಪದ್ಮನಾಭ, ಅಯ್ಯಾಳಿ ತಿಮ್ಮಪ್ಪ, ಬಸವರಾಜ ನಾಲತ್ವಾಡ ಸಾಥ್ ಕೊಟ್ಟರು.