ಹರಪನಹಳ್ಳಿ: ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡರೆ ಜೀವನದ ಸಾರ್ಥಕತೆ ಪಡೆಯಬಹುದು ಎಂದು ಪ್ರಾಂಶುಪಾಲ ಎಚ್.ಮಲ್ಲಿಕಾರ್ಜುನ್ ತಿಳಿಸಿದರು.
ಪಟ್ಟಣದ ಎಸ್ಯುಜೆಎಂ ಪಿಯು ಕಾಲೇಜಿನಲ್ಲಿ ಶುಕ್ರವಾರ ಜರುಗಿದ ಶ್ರೀಮತಿ ಬಸಮ್ಮ ಕೊಟ್ರಪ್ಪನವರ ಸ್ಮರಣಾರ್ಥ ದತ್ತಿ, ಸ್ವಾಮಿ ವಿವೇಕಾನಂದರ ಜಯಂತಿ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಓದಿನ ಬಳಿಕ ಯುವಜನತೆ ದುಡಿಮೆ ಜೊತೆಗೆ ಸಮಾಜಸೇವೆ, ರಾಷ್ಟ್ರಸೇವೆ ಮಾಡಿದರೆ ಆದರ್ಶ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಹೆಚ್ಚೆಚ್ಚು ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಸಂಪತ್ತು ಹೆಚ್ಚಿಸಿಕೊಳ್ಳಿ. ಮಹಾತ್ಮರ ಜೀವನ ಚರಿತ್ರೆ ಓದುವ ಮೂಲಕ ಜೀವನ ಕೌಶಲ ಕಲಿತುಕೊಳ್ಳಿ ಎಂದರು.
ಎಬಿವಿಪಿ ಜಿಲ್ಲಾ ಸಂಚಾಲಕ ವರುಣ್ ಕೌಟಿ ಮಾತನಾಡಿ, ವಿದ್ಯಾರ್ಥಿಗಳ ಓದು ತಪಸ್ಸಿನಂತಿರಬೇಕು. ಸ್ವಾಮಿ ವಿವೇಕಾನಂದರು ಆಧಾತ್ಮದ ಧೃವತಾರೆ ಆಗಿದ್ದಾರೆ ಎಂದು ಹೇಳಿದರು.
ರಾಮಾಯಣ ಮತ್ತು ಮಹಾಭಾರತ ಕುರಿತ ಪ್ರಬಂಧ ಸ್ಪರ್ಧೆ, ಎಸ್ಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಕನ್ನಡ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕನ್ನಡ ಉಪನ್ಯಾಸಕ ಎಸ್.ಚನ್ನಬಸಪ್ಪ ಮಾತನಾಡಿದರು. ಉಪನ್ಯಾಸಕರಾದ ಬಿ.ಕೃಷ್ಣಮೂರ್ತಿ, ಎಸ್.ಕೊಟ್ರಪ್ಪ, ಟಿ.ಎಂ.ಜಯದೀಪ, ಕೆ.ಬೀರಾನಾಯ್ಕ, ಸಿ.ಎಂ.ಪ್ರವೀಣ, ಎಂ.ಆತ್ಮಾನಂದ, ಕೆ.ಎಂ.ಶೈಲಜ ಇದ್ದರು.