ಬಳ್ಳಾರಿ: ತುಂಗಭದ್ರ ಕೆಳದಂಡೆ ಕಾಲುವೆ ವ್ಯಾಪ್ತಿಯ 75 ಸಾವಿರ ಹೆಕ್ಟೇರ್ ಭತ್ತದ ಬೆಳೆರಕ್ಷಣೆ ಸಲುವಾಗಿ ಏ.10 ರವರೆಗೆ ನೀರು ಹರಿಸಬೇಕು ಎಂದು ತುಂಗಭದ್ರ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಆಗ್ರಹಿಸಿದರು.
ಹಿಂದಿನ ವರ್ಷಕ್ಕಿಂತ ಈ ಬಾರಿ ಜಲಾಶಯದಲ್ಲಿ 3ಟಿಎಂಸಿ ಅಡಿಯಷ್ಟು ನೀರು ಹೆಚ್ಚಿದ್ದರೂ ತುಂಗಭದ್ರಾ ಮಂಡಳಿ ನೀರು ಹರಿಸದೆ ನಿರ್ಲಕ್ಷ್ಯ ವಹಿಸಿದೆ. ಜನಪ್ರತಿನಿಧಿಗಳು ಮಂಡಳಿಯ ಮೇಲೆ ಒತ್ತಡ ಹೇರದೆ, ಅದರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ನೀರು ಹರಿಸದಿದ್ದರೆ ಮಾರ್ಚ್ 31 ರಂದು ಕೂಡ್ಲಿಗಿ ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಚುನಾವಣೆಗೆ ಸ್ಪರ್ಧಿಸಿರುವವರು ಈ ಸಂದರ್ಭದಲ್ಲಿ ರೈತರ ಪರವಾಗಿ ನಿಲ್ಲಬೇಕು. ನಿಲ್ಲದಿದ್ದರೆ ಕಣದಿಂದ ಹಿಂದೆ ಸರಿಯಬೇಕು. ಹಿಂದಿನ ವರ್ಷ ನೀರಿನ ವಿಚಾರದಲ್ಲಿ ರೈತರ ಪರ ನಿಲ್ಲದ ಆಗಿನ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರನ್ನು ಸೋಲಿಸಿದ್ದೇವೆ ಎಂದು ಹೇಳಿದರು.
ಕಾಲುವೆ ದುರಸ್ತಿ ನೆಪದಲ್ಲಿ ನೀರು ಬಂದ್ ಮಾಡಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವುದಷ್ಟೇ ತಮ್ಮ ಕೆಲಸ ಎಂದು ಭಾವಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಂಗಭದ್ರ ಜಲಾಶಯ ಅಮೃತ ಮಹೋತ್ಸವ: ತುಂಗಭದ್ರ ಜಲಾಶಯದ ಅಮೃತ ಮಹೋತ್ಸವ ನಗರದಲ್ಲಿ ಏಪ್ರಿಲ್ 24 ರಂದು ನಡೆಯಲಿದೆ.
ಹೂಳಿನ ಜಾತ್ರೆ: ಮೇ 16ರಂದು ಜಲಾಶಯದಲ್ಲಿ ಮೂರನೇ ವರ್ಷದ ಹೂಳಿನ ಜಾತ್ರೆಯನ್ನು ನಡೆಸಲಾಗುವುದು ಎಂದು ತಿಳಿಸಿದರು. ಮುಖಂಡರಾದ ಬಸವನಗೌಡ, ವೀರೇಶ, ಶ್ರೀಧರಗೌಡ, ಮಲ್ಲಪ್ಪ, ರಾಮನಗೌಡ ಇದ್ದರು.