ಸಿರುಗುಪ್ಪ: ಕಾಂಗ್ರೆಸ್ ಆಡಳಿತದಲ್ಲಿ ಹಣ ಮಾಡುವುದನ್ನೇ ವೃತ್ತಿಯಾಗಿಸಿಕೊಂಡಿ ರುವ ನಾಯಕರು ಸಾಮಾನ್ಯ ರೈತರ ಬಗ್ಗೆ ಯಾವುದೇ ಕಾಳಜಿ ತೋರುತ್ತಿಲ್ಲ. ತಾಲ್ಲೂಕಿನಲ್ಲಿ ಬರ ಪರಿಹಾರ ರೈತರಿಗೆ ನೀಡಿರುವ ಬಗ್ಗೆ ಮಾಹಿತಿಯೂ ಇಲ್ಲದೆ ಇರುವುದು ಸ್ಥಳೀಯ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಎಂ.ಎಸ್. ಸೋಮ ಲಿಂಗಪ್ಪ ವ್ಯಂಗ್ಯವಾಡಿದರು.
ಇಲ್ಲಿಯ ಅಯ್ಯಪ್ಪಸ್ವಾಮಿ ದೇವ ಸ್ಥಾನದ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ತಾಲ್ಲೂಕು ಬಿಜೆಪಿ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಸತತ ಬರಗಾಲದಿಂದ ತತ್ತರಿಸಿರುವ ರೈತರ ಸಾಲ ಮನ್ನಾ ಮಾಡಿಲ್ಲ. ಬರಗಾಲದ ಪರಿಹಾರವೂ ಸಮರ್ಪಕವಾಗಿ ಹಂಚಿಕೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿರುವ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಜನಪರ ಯೋಜನೆಗಳು ಇಲ್ಲದೆ, ಕೂಲಿಯೂ ದೊರೆಯದೆ ಜನರು ನಿತ್ಯವೂ ಗುಳೆ ಹೋಗುತ್ತಿದ್ದಾರೆ.
ಹೀಗಿದ್ದರೂ ರಾಜ್ಯ ಸರ್ಕಾರ 4ನೇ ವರ್ಷದ ಸಂಭ್ರಮಾಚರಣೆ ಕೈಗೊಳ್ಳುತ್ತಿ ರುವುದು ನಾಚಿಕೆಗೇಡಿನ ಸಂಗತಿ. ಮುಂದಿನ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನ ಸೂಕ್ತ ಪಾಠ ಕಲಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪಕ್ಷದ ಬೆಳವಣಿಗೆಗೆ ಸಹಕಾರಿಯಾಗುವಂತೆ ತಾಲ್ಲೂಕಿನಲ್ಲಿ ಒಟ್ಟು 7 ಶಕ್ತಿ ಕೇಂದ್ರಗಳ ನ್ನು ಪ್ರಾರಂಭಿಸಿದ್ದು, ನಿತ್ಯವೂ ಪಕ್ಷದ ಚಟುವಟಿಕೆ ಮತ್ತು ಆಯಾ ಭಾಗದಲ್ಲಿ ನಡೆಯುವ ಪಕ್ಷದ ಚಟುವಟಿಕೆ ಸಂಘಟನೆಗಾಗಿ ಶಕ್ತಿ ಕೇಂದ್ರಗಳಿಗೆ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳ ನೇಮಕ ಮಾಡಲಾಗಿದೆ ಎಂದು ವಿವರಿಸಿದರು.
ಬಿಜೆಪಿ ಮುಖಂಡರಾದ ಕೆ.ಎ.ರಾಮ ಲಿಂಗಪ್ಪ, ಗುತ್ತಿಗನೂರು ವಿರುಪಾಕ್ಷ ಗೌಡ, ಎಚ್.ಎಂ.ಗುರುಸಿದ್ದಯ್ಯಸ್ವಾಮಿ ಎಂ.ಪಂಪಾಪತಿಶೆಟ್ಟಿ, ದಮ್ಮೂರು ಸೋಮಪ್ಪ, ಕೊಡ್ಲೆ ಮಲ್ಲಿಕಾರ್ಜುನ ಮಾತನಾಡಿದರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ನಾಗರಾಜಗೌಡ ಅಧ್ಯಕ್ಷತೆ ವಹಿಸಿದ್ದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮಿನಾಗೇಶಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಿ.ಜಿ.ರವಿ, ಎಂ.ಕೋಟೇ ಶ್ವರರೆಡ್ಡಿ, ಎಚ್.ಸಿ.ರಾಧ ಧರಪ್ಪನಾ ಯಕ, ತಾ.ಪಂ.ಮಾಜಿ ಅಧ್ಯಕ್ಷ ಪದ್ಮಾವತಿ ಚಿರಂಜೀವಿರೆಡ್ಡಿ, ಮುಂಖಡರಾದ ಪ್ರತಾಪಚೌದ್ರಿ, ಎಂ.ಆರ್.ಬಸವನಗೌಡ, ಸಿದ್ದಪ್ಪ, ಈರಣ್ಣ, ಕೆ.ಮರೇಗೌಡ, ಬಾವಿಕಟ್ಟೆ ಪಂಪಾಪತಿಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.