ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಬಿಡದ ಮಳೆ: ರೈತರಲ್ಲಿ ಆತಂಕ

Last Updated 9 ಅಕ್ಟೋಬರ್ 2017, 5:19 IST
ಅಕ್ಷರ ಗಾತ್ರ

ಕುರುಗೋಡು: ಜಿಲ್ಲೆಯಲ್ಲಿ ಅತಿ ಹೆಚ್ಚು ಮೆಣಸಿನಕಾಯಿ ಬೆಳೆಯುವ ಕುರುಗೋಡು ಭಾಗದ ರೈತರ ಮೊಗದಲ್ಲೀಗ ಆತಂಕ ಮೂಡಿದೆ. ಒಂದು ತಿಂಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ತೇವಾಂಶ ಹೆಚ್ಚಾಗಿ ಮೆಣಸಿನಕಾಯಿ ಕೊಳೆಲಾರಂಭಿಸಿದ. ಗಿಡದ ಬೆಳವಣಿಗೆಗೆ ಮಾರಕವಾಗುವ ಬಂಗಾರು ಬಳ್ಳಿ ರೋಗ ರೈತರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಉತ್ತಮ ಮಳೆಯಿಂದ ಹೊಲಗಳಲ್ಲಿ ಬೆಳೆ ನಳನಳಿಸುತ್ತಿದೆಯಾದರೂ ರೋಗದ ಕಾರಣ ಇಳುವರಿ ಕುಸಿಯುವ ಭೀತಿ ರೈತರನ್ನು ಕಾಡತೊಡಗಿದೆ. ‘ಮಳೆ ಬರಲಿಲ್ಲ ಅಂತ ಕಾಲುವೆಗೆ ನೀರು ಬಿಡಲಿಲ್ಲ. ಬೋರ್ ನೀರಿನ್ಯಾಗ ಮೆಣಸಿನಕಾಯಿ ಗಿಡ ಬೆಳೆಸಿದ್ವಿ.ಗಿಡ ಬೆಳೆದಿರೋದು ನೋಡಿದ್ರೆ ಎಕ್ರಿಗೆ 25 ಕಿಂಟಾಲ್ ಮೆಣಸಿನಕಾಯಿ ಬರತೈತಿ ಅಂತ ಲೆಕ್ಕಾಚಾರ ಮಾಡಿದ್ದೆ.

ಆದ್ರೆ ಏನು ಮಾಡೋದು ಮಳೆರಾಯ ರೈತ್ರ ಬದುಕಿನ್ಯಾಗ ಆಟ ಆಡಿಬುಟ್ಟ. ಬೇಕಾದಾಗ ಮಳೆ ಬರಲಿಲ್ಲ. ಈಗ ಬ್ಯಾಡಾಗೈತೆ, ಆದರೆ, ದಿನಾ ಮಳೆ ಬರಾಕತ್ತೈತಿ. ಗಿಡದಾಗ ನೀರು ನಿಂತು ಬೇರು ಕೊಳತು ಒಣಗಾಕತ್ಯಾವ. ಎಕ್ರಿಗೆ 45 ರಿಂದ 50 ಸಾವ್ರ ಖರ್ಚು ಮಾಡೀವಿ. ಅದು ವಾಪಾಸು ಬಂದ್ರೆ ಸಾಕು ಲಾಭಬ್ಯಾಡ’ ಎನ್ನುತ್ತಾರೆ ಆರು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಬೆಳೆದಿರುವ ಸ್ಥಳೀಯ ರೈತ ಆಗಲೂರಪ್ಪ.

ಕುರುಗೋಡು ಮತ್ತು ಕೋಳೂರು ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಎರ್ರಂಗಳಿಗಿ, ಸಿದ್ದಮ್ಮನಹಳ್ಳಿ, ಬಾದನಹಟ್ಟಿ, ವದ್ದಟ್ಟಿ, ಕುರುಗೋಡು, ಸಿಂಧಿಗೇರಿ, ಬೈಲೂರು, ಕೋಳೂರು, ಸೋಮಸಮುದ್ರ, ಯಲ್ಲಾಪುರ, ಕಲ್ಲುಕಂಭ, ಓರ್ವಾಯಿ, ಗುತ್ತಿಗನೂರು, ಪಟ್ಟಣ ಸೆರಗು ಗ್ರಾಮಗಳ ವ್ಯಾಪ್ತಿಯಲ್ಲಿ 12 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಬೆಳೆದಿರುವ ಮೆಣಸಿನಕಾಯಿಯಲ್ಲಿ ಈ ರೋಗ ಲಕ್ಷಣಗಳು ಕಂಡುಬಂದಿವೆ.

ಗಿಡದ ಬೇರುಗಳು ಕೊಳೆಯುವ ಗುರುತು ಕಾಣಿಸುತ್ತಿದೆ. ಇದರಿಂದ ಗಿಡದ ಮೇಲ್ಬಾಗಕ್ಕೆ ಪೋಷಕಾಂಶಗಳು ಪೂರೈಕೆಯಾಗದೆ ಗಿಡ ಒಣಗತೊಡಗಿದೆ.  ಸಮಸ್ಯೆ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ತೋಟಗಾರಿಕೆ ಸಹಾಯಕ ಅಧಿಕಾರಿ ಎನ್.ಆರ್. ರಾಜೇಶ್ ಕುಮಾರ್, ‘ತೇವಾಂಶ ಹೆಚ್ಚಾಗಿರುವುದು ಮೆಣಸಿನಕಾಯಿ ಬೆಳೆಯಲ್ಲಿ ಬೇರು ಕೊಳೆ ರೋಗ ಕಾಣಿಸಿಕೊಳ್ಳಲು ಪ್ರಮುಖ ಕಾರಣ. ನಿರಂತರವಾಗಿ ಸುರಿದ ಮಳೆಯಿಂದ ಈ ರೋಗಕಾಣಿಸಿಕೊಂಡಿದೆ’ ಎಂದು ತಿಳಿಸಿದ್ದಾರೆ. ಬೇರು ಕೊಳೆ ರೋಗದಿಂದ ಬೆಳೆಯನ್ನು ಸಂರಕ್ಷಿಸಲು ಕೆಲವು ಸಲಹೆಗಳನ್ನು ನೀಡಿದ್ದಾರೆ.

ಸಲಹೆ: ಒಂದು ಲೀಟರ್ ನೀರಿನಲ್ಲಿ ಐದು ಗ್ರಾಂ. ಸಿಡೋಮೊನಸ್ ಪುಡಿಯನ್ನು ಬೆರೆಸಿದ ದ್ರಾವಣವನ್ನು ಗಿಡದ ಬುಡದಲ್ಲಿ ಸಿಂಪರಣೆ ಮಾಡಬೇಕು. ಒಂದು ಲೀಟರ್ ನೀರಿಗೆ ಎರಡು ಗ್ರಾಂ. ‘ಕಾಪರ್ ಓಕ್ಸೀ ಕ್ಲೋರೈಡ್’ (ಸಿಓಸಿ) ಬೆರೆಸಿದ ದ್ರಾವಣವನ್ನು ಗಿಡದ ಬುಡಕ್ಕೆ ಡ್ರಂಚಿಂಗ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ತೋಟಗಾರಿಕೆ ಇಲಾಖೆ ವತಿಯಿಂದ ಮೆಣಸಿನಕಾಯಿ ಬೆಳೆಗಾರರಿಗೆ ಶೇ. 90ರ ರಿಯಾಯಿತಿ ದರದಲ್ಲಿ ಹನಿ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ವರ್ಷ ಕೆಲವು ರೈತರು ಮೆಣಸಿನಕಾಯಿ ಬೆಳೆಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಎಲ್ಲ ರೈತರೂ ಈ ಯೋಜನೆಯ ಸದುಪಯೋಗ ಪಡಿಸಿಕೊಂಡು ನೀರಿನ ಮಿತಬಳಕೆ ಮಾಡುವ ಜೊತೆಗೆ ಬೆಳೆಗೆ ಬರಬಹುದಾದ ರೋಗಗಳಿಂದ ಮುಕ್ತರಾಗಬಹುದು ಎಂದು ರಾಜೇಶ್ ಕುಮಾರ್ ಸಲಹೆ ಮಾಡಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT