ದೊಡ್ಡಬಳ್ಳಾಪುರ: ವ್ಯಕ್ತಿಯೊಬ್ಬರ ಗಮನವನ್ನು ಬೇರೆಡೆ ಸೆಳೆದು ₹ 5.9 ಲಕ್ಷ ನಗದು ದೋಚಿರುವ ಘಟನೆನಗರದ ಸರ್ಕಾರಿ ನೌಕರರ ಭವನ ಸಮೀಪದ ಉರ್ದು ಶಾಲೆಯ ಮುಂಭಾಗ ಬುಧವಾರ ನಡೆದಿದೆ.
ಜಮೀನು ನೋಂದಣಿಗಾಗಿ ನಗರದ ಉಪ ನೋಂದಣಾಧಿಕಾರಿ ಕಚೇರಿಗೆ ಬಂದಿದ್ದ ನಾಗರಾಜ್ ಹಣ ಕಳೆದುಕೊಂಡವರು. ತಾಂತ್ರಿಕ ತೊಂದರೆಯಿಂದ ಜಮೀನಿನ ನೋಂದಣಿಯಾಗಿರಲಿಲ್ಲ. ಹಾಗಾಗಿ, ಕಾರಿನ ಬಳಿಗೆ ಬಂದ ಅವರು ಹಿಂಬದಿ ಸೀಟ್ನಲ್ಲಿ ಹಣದ ಬ್ಯಾಗ್ ಇಟ್ಟು ಕಾರು ಹತ್ತುವ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಸ್ಥಳಕ್ಕೆ ಬಂದಿದ್ದಾನೆ.
ಕಾರಿನಿಂದ ಆಯಿಲ್ ಸೂರುತ್ತಿದೆ ಎಂದು ನಾಗರಾಜ್ ಅವರ ಗಮನವನ್ನು ಬೇರೆಡೆ ಸೆಳೆದು ಹಣದ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದಾನೆ.
ದುಷ್ಕರ್ಮಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುರುಷೋತ್ತಮ್ ಅವರು ಗುರುವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಸರ್ಕಲ್ ಇನ್ಸ್ಪೆಕ್ಟರ್ ಹರೀಶ್, ರೇಣುಕಾ ಯಾದವ್ ಇದ್ದರು.