ವಿಜಯಪುರ: ಮಠಗಳು ಸಮಾಜದ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಭವಿಷ್ಯದ ಸಮಾಜಕ್ಕೆ ಮಠಗಳ ಮಾರ್ಗದರ್ಶನ ಅಗತ್ಯವಾಗಿ ಬೇಕಾಗಿದೆ ಎಂದು ಬಸವಕಲ್ಯಾಣ ಮಠದ ಅಧ್ಯಕ್ಷ ಮಹದೇವ ಸ್ವಾಮೀಜಿ ಹೇಳಿದರು.
ಇಲ್ಲಿನ ಬಸವ ಕಲ್ಯಾಣಮಠದಲ್ಲಿ ಆಯೋಜಿಸಿದ್ದ ಗುರುಪೂರ್ಣಿಮಾ ಚಿಂತನಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಮಾಜ ಸುಧಾರಣೆಗೆ ಮಠಗಳ ಕೊಡುಗೆ ಅಪಾರವಾಗಿದೆ. ಅನ್ನ ದಾಸೋಹದ ಜೊತೆಗೆ ಅಕ್ಷರ ದಾಸೋಹ ನೀಡುವ ಮೂಲಕ ಮಠ ಮಾನ್ಯಗಳು ಉನ್ನತ ಕಾರ್ಯ ಮಾಡುತ್ತಿವೆ. ಮಠಗಳು ಸಮಾಜ ಸುಧಾರಣೆಗೆ ಮುಂದಾಗಬೇಕಿದೆ ಎಂದರು.
ಈ ನಿಟ್ಟಿನಲ್ಲಿ ಬಸವಕಲ್ಯಾಣ ಮಠವನ್ನು ಸಮಾಜದ ಒಳಿತಿಗಾಗಿ ಉಪಯೋಗ ಮಾಡುವಂತಹ ಕಾರ್ಯವನ್ನು ಮಾಡಲಾಗುತ್ತಿದೆ. ಎಲ್ಲ ಜಾತಿ, ಧರ್ಮಗಳ ಭಾವೈಕ್ಯತಾ ಕೇಂದ್ರವನ್ನಾಗಿ ಮಾರ್ಪಡಿಸಲಾಗುತ್ತಿದೆ. ಇದಕ್ಕೆ ಜನರ ಸಹಕಾರವೂ ಬೇಕಾಗುತ್ತದೆ. ಧರ್ಮಪ್ರಚಾರ, ಶೈಕ್ಷಣಿಕ ಮತ್ತು ಸಾಮಾಜಿಕ ಏಳಿಗೆಯು ಮಠಗಳ ಗುರುಗಳ ಕಾಣಿಕೆಯಂತಾಗಿ ಮಾಡಲು ಹೆಚ್ಚು ಶ್ರಮ ಪಡುತ್ತಿದ್ದೇವೆ ಎಂದರು.
ಪ್ರಕ್ರಿಯೆ ಆರಂಭ: ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸುವ ಪ್ರಕ್ರಿಯೆ ಆರಂಭ ಮಾಡಿದ್ದೇವೆ. ಮೈಸೂರಿನಿಂದ ನವೀನ್ ದೇವರು ಎನ್ನುವ ಭಕ್ತರು ಬಂದಿದ್ದಾರೆ. ಮಠದ ಉತ್ತರಾಧಿಕಾರಿಯಾಗುವವರು ಇಲ್ಲಿನ ಮಠದ ಸಿದ್ಧಾಂತಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಜ್ಞಾನ, ವಿವೇಕಗಳನ್ನೂ ಮೈಗೂಡಿಸಿಕೊಳ್ಳಬೇಕು. ಹಲವಾರು ಮಂದಿ ಬರುತ್ತಿರುತ್ತಾರೆ. ನಮ್ಮ ಮಠದ ಕೇಂದ್ರ ಮಠಗಳ ಸ್ವಾಮೀಜಿಗಳು ಯಾರಿಗೆ ಒಪ್ಪಿಗೆ ಸೂಚಿಸುತ್ತಾರೋ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಾಡುತ್ತೇವೆ ಎಂದು ಮಹದೇವಸ್ವಾಮೀಜಿ ಹೇಳಿದರು.
ನವೀನ್ ದೇವರು, ಅಕ್ಕನ ಬಳಗ ಸೇವಾ ಟ್ರಸ್ಟ್ನ ಉಪಾಧ್ಯಕ್ಷೆ ಕಾಮಾಕ್ಷಮ್ಮ, ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ. ಪ್ರಶಾಂತ್, ಬಸವರಾಜು, ಮಠದ ಕಾರ್ಯದರ್ಶಿ ಜಯಕುಮಾರ್, ನಿವೃತ್ತ ಶಿಕ್ಷಕಿ ಸಂಪಂಗಮ್ಮ, ದ್ರಾಕ್ಷಾಯಿಣಮ್ಮ, ಶಿವಸ್ವಾಮಿ, ಇದ್ದರು.