ವಿಜಯಪುರ(ದೇವನಹಳ್ಳಿ): ಪಠ್ಯ ಹಾಗೂ ಪ್ರಾಯೋಗಿಕವಾಗಿ ತಾವು ಕಲಿತಿರುವ ಕೃಷಿ ವಿದ್ಯೆಯನ್ನು ಬೆಂಗಳೂರು ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇಲ್ಲಿನ ಕೋರಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಂಡಿಗಾನಹಳ್ಳಿ ಗ್ರಾಮದಲ್ಲಿ ಕಾರ್ಯರೂಪಕ್ಕೆ ತರಲು ಹತ್ತು ಎಕರೆಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.
ಗ್ರಾಮೀಣ ಕೃಷಿ ಅನುಭವದ ಕಾರ್ಯಕ್ರಮದಡಿ ಮೂರು ತಿಂಗಳ ತರಬೇತಿ ಶಿಬಿರ ಆಯೋಜಿಸಲಾಗಿದ್ದು, ಶಿಬಿರದಲ್ಲಿ ಭಾಗವಹಿಸಿರುವ 24 ವಿದ್ಯಾರ್ಥಿಗಳು ತಾವು ಕಲಿತಿರುವುದನ್ನು ರೈತರಿಗೆ ತಿಳಿಸುತ್ತಾ, ಅವರಿಂದಲೂ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಅರಿತುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಸ್ಥಳೀಯ ರೈತರ ಹತ್ತು ಎಕರೆ ಭೂಮಿಯಲ್ಲಿ ವ್ಯವಸಾಯ ಆರಂಭಿಸಿದ್ದಾರೆ.
ರಾಗಿ, ಶೆಂಗಾ, ಸೂರ್ಯಕಾಂತಿ, ಕಡಲೆ, ಹುರುಳಿ, ಅಲಸಂಧಿ, ಉದ್ದು, ನವಣೆ, ದಂಟಿ ಸೊಪ್ಪು, ಮುಸುಕಿನ ಜೋಳ, ಹುಚ್ಚೆಳ್ಳು, ಟಮೋಟೊ, ಸೇವಂತಿಗೆ, ಎಲೆಕೋಸು, ಹೂ ಕೋಸು, ಅವರೆಕಾಳು, ಹೂ, ಔಷಧಿ ಸಸ್ಯಗಳಾದ ನಿಂಬೆಹುಲ್ಲು, ಪಚೋಲಿ, ಸ್ನೆಕ್ ಪ್ಲಾಂಟ್, ದೊಡ್ಡಪತ್ರೆ, ಮಸಣಮಲ್ಲಿಗೆ, ಅಜೋಲಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ತೋಟಗಾರಿಕೆ ಬೆಳೆ ಬೆಳೆಯಲು ನೀರಾವರಿ ನಂಬಿಕೊಂಡಿರುವ ರೈತರು, ಮಳೆಗಾಲದಲ್ಲಿ ರಾಗಿ ಹೊರತು ಪಡಿಸಿ ಪರ್ಯಾಯ ಬೆಳೆ ಬೆಳೆಯುತ್ತಿಲ್ಲ. ಮಳೆಗಾಲ ಹೊರತುಪಡಿಸಿ, ಬೇರೆ ಸಮಯಗಳಲ್ಲೂ ಪರ್ಯಾಯ ಬೆಳೆ ಬೆಳೆಯುವ ಕುರಿತು, ರಸಗೊಬ್ಬರಗಳ ಬಳಕೆ, ಕೀಟನಾಶಕ, ಕಳೆನಾಶಕಗಳ ಬಳಕೆಯಿಂದ ಆಗುವ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳು ಸಂಜೆಯ ವೇಳೆ ರೈತರಿಗೆ ತರಬೇತಿ ನೀಡುತ್ತಿದ್ದಾರೆ.
‘ಈ ಭಾಗದ ರೈತರು ಭೂಮಿಗೆ ಹೆಚ್ಚು ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಕಳೆನಾಶಕ ಔಷಧಿ ಬಳಕೆಯಿಂದ ಎಷ್ಟೇ ನೀರುಣಿಸಿದರೂ ಭೂಮಿ ಹಿಡಿದಿಟ್ಟುಕೊಳ್ಳುವ ಶಕ್ತಿ ಕಳೆದುಕೊಳ್ಳುತ್ತದೆ. ಆದ್ದರಿಂದ ನಾವು ಭೂಮಿಗೆ ಕೊಟ್ಟಿಗೆ ಗೊಬ್ಬರದ ಜೊತೆಗೆ ಕಡಿಮೆ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಮಾಡಿ,ಮಿಶ್ರಬೆಳೆಗಳು ಬೆಳೆಯುತ್ತಿದ್ದೇವೆ’ ಕೃಷಿ ಮಹಾವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ಗಣೇಶ್ ತಿಳಿಸಿದರು.
‘ರೈತರು, ದ್ರಾಕ್ಷಿ ಮತ್ತು ದಾಳಿಂಬೆ ಪಳಗಿದ್ದಾರೆ. ಅವರಿಂದ ಬೆಳೆಗಳ ನಿರ್ವಹಣೆ ಜೊತೆಗೆ ಹೇಗೆ ಲಾಭ ಮಾಡಿಕೊಳ್ಳುತ್ತಾರೆ. ಹೇಗೆ ನಷ್ಟವನ್ನು ಸರಿದೂಗಿಸುತ್ತಾರೆ. ಕಾರ್ಮಿಕರ ಕೊರತೆಯ ನಡುವೆಯೂ ಹೇಗೆ ತೋಟಗಾರಿಕೆ ಮಾಡುತ್ತಾರೆ ಎನ್ನುವ ಕುರಿತು ನಾವು ರೈತರಿಂದ ಕಲಿಯುತ್ತಿದ್ದೇವೆ’ ಎಂದು ಅಂತಿಮ ವರ್ಷದ ವಿದ್ಯಾರ್ಥಿನಿ ಗೌತಮಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.