ಆನೇಕಲ್ : ಪ್ರವಾಸಿಗರ ಆರೋಗ್ಯದ ದೃಷ್ಟಿಯಿಂದ ಮತ್ತು ಕೊರೊನಾ ವೈರಸ್ ಹರಡುವುದನ್ನು ತಡೆಯುವ ಸಲುವಾಗಿ ರಾಜ್ಯದ ಎಲ್ಲ ರಾಷ್ಟ್ರೀಯ ಉದ್ಯಾನಗಳನ್ನು ಮಾರ್ಚ್ 15ರಿಂದ ಒಂದುವಾರ ಕಾಲ ಮುಚ್ಚಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಸಚಿವ ಆನಂದ್ಸಿಂಗ್ ತಿಳಿಸಿದರು.
ಅವರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಶನಿವಾರ ಭೇಟಿ ನೀಡಿ ಅಧಿಕಾರಿಗಳೊಂದಿಗೆ ತುರ್ತುಸಭೆ ನಡೆಸಿದರು. ಕೇರಳ – ಕರ್ನಾಟಕ ಗಡಿಯಲ್ಲಿ ಹಕ್ಕಿಜ್ವರ ಹಬ್ಬುತ್ತಿದೆ ಎನ್ನುವ ವಿಚಾರದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ತುರ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬನ್ನೇರುಘಟ್ಟ ಪರಿಸರ ಸೂಕ್ಷ್ಮವಲಯ (ಎಸ್ಇಝಡ್) ವ್ಯಾಪ್ತಿಯನ್ನು ಕಡಿತಗೊಳಿಸಿರುವ ವಿಚಾರದ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಪರಿಸರ ಉಳಿಸುವುದು ಎಲ್ಲರ ಜವಾಬ್ದಾರಿ ಎಂದರು.
ಆನೆ ಮರಿಯೊಂದಿಗೆ ಮಗುವಾದ ಸಚಿವರು: ರಾಗಿಹಳ್ಳಿ ಅರಣ್ಯ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟಿದ್ದ ಆನೆ ಮರಿ ಸಂರಕ್ಷಣೆಗಾಗಿ ತೀವ್ರ ಕಾಳಜಿ ವಹಿಸಿರುವ ಅರಣ್ಯ ಸಚಿವರು, ಮರಿಯಾನೆ ಸಿಕ್ಕ ಮೇಲೆ ಮೂರು ಬಾರಿ ಬನ್ನೇರುಘಟ್ಟಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಉದ್ಯಾನದ ವೈದ್ಯರು ಮತ್ತು ಸಿಬ್ಬಂದಿ ಆರೈಕೆ ಮತ್ತು ಕಾಳಜಿಯಿಂದ ಆನೆ ಮರಿ ಆರೋಗ್ಯವಾಗಿದೆ ಎಂದರು.