ಆನೇಕಲ್: ನಗರೀಕರಣ, ಪರಿಸರ ಮಾಲಿನ್ಯ ಮತ್ತು ಆಹಾರ ಪದ್ಧತಿಯ ಬದಲಾವಣೆಗಳಿಂದ ಆರೋಗ್ಯ ಹಾಳಾಗುತ್ತಿದೆ. ಹಾಗಾಗಿ ಯೋಗ, ಧ್ಯಾನ, ಆಯುರ್ವೇದ ಪದ್ದತಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಆರೋಗ್ಯ ಪಡೆಯಬೇಕು ಎಂದು ಗುರೂಜಿ ರಿಷಿದೇವ್ ನರೇಂದ್ರನ್ಜೀ ತಿಳಿಸಿದರು.
ಅವರು ತಾಲ್ಲೂಕಿನ ಜಿಗಣಿಯಲ್ಲಿ ಯೋಗ ಮತ್ತು ಆರ್ಯುರ್ವೇದಿಕ್ ಕೇಂದ್ರ ‘ರಿಷಿ ಸಂಜೀವಿನಿ’ ಉದ್ಘಾಟಿಸಿ ಮಾತನಾಡಿದರು.
‘ಸನಾತನ ಕಾಲದಿಂದಲೂ ಆಯುರ್ವೇದಿಕ್ ಮತ್ತು ಹೋಮಿಯೋಪತಿ ಪದ್ಧತಿಯ ಚಿಕಿತ್ಸೆಯನ್ನು ಪಡೆದು ಉತ್ತಮ ಆರೋಗ್ಯ ಹೊಂದುತ್ತಿದ್ದರು. ಭಾರತದಲ್ಲಿ ಆಯುರ್ವೇದಿಕ್ ಗಿಡಮೂಲಿಕೆಗಳು ಹೆಚ್ಚಾಗಿ ಲಭ್ಯವಿದ್ದರೂ ಆಲೋಪಥಿ ಔಷಧಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿರುವುದರಿಂದ ಆಯುಷ್ಯ ಕಡಿಮೆಯಾಗುತ್ತಿದೆ. ಆಯುರ್ವೇದ ಪದ್ಧತಿಯಿಂದ ಮಾತ್ರ ಮನುಷ್ಯ ಉತ್ತಮ ಆರೋಗ್ಯ ಕಂಡುಕೊಳ್ಳಲು ಸಾಧ್ಯ’ ಎಂದರು.
ಮಾತಾಜಿ ಶ್ರೀಪ್ರಿಯಾ ಮಾತನಾಡಿ, ‘ಹಣದಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಸನಾತನ ಪದ್ಧತಿ ಅಳವಡಿಸಿಕೊಂಡು ಸ್ವಾಸ್ಥ್ಯ, ಆರೋಗ್ಯಕರ ಸಮಾಜ ನಿರ್ಮಿಸಬೇಕು. ರಿಷಿ ಸಂಜೀವಿನಿ ಕೇಂದ್ರದಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮ ಇಲ್ಲದೇ ಆಯುರ್ವೇದ ಚಿಕಿತ್ಸೆಯ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಅನುಕೂಲವಾಗಲಿದೆ’ ಎಂದರು.
‘ಜಿಗಣಿಯಲ್ಲಿ ಉಚಿತ ಯೋಗ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುತ್ತಿದ್ದು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು’ ಎಂದರು.