ವಿಜಯಪುರ: ಕೋಲಾರ ರಸ್ತೆಯಲ್ಲಿ ಬಸ್ ನಿಲ್ದಾಣದಿಂದ ಟಿಪ್ಪುನಗರದವರೆಗೂ ಪಟ್ಟಣ ಸಾಕಷ್ಟು ಬೆಳವಣಿಗೆಯಾಗಿದೆ. ನೂರಾರು ಅಂಗಡಿಗಳು ತಲೆ ಎತ್ತಿವೆ. ಇಲ್ಲಿಗೆ ಬಂದು ವ್ಯಾಪಾರ ವಹಿವಾಟು ನಡೆಸುವಂತಹ ನಾಗರಿಕರು ಶೌಚಾಲಯಗಳಿಲ್ಲದೆ ಪರದಾಡುವಂತಾಗಿದ್ದು ಪುರಸಭೆಯವರು ಕೂಡಲೇ ಸಾಮೂಹಿಕ ಶೌಚಾಲಯಗಳನ್ನು ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಕೋಲಾರ ರಸ್ತೆಯಲ್ಲಿ ಪೊಲೀಸ್ ಠಾಣೆಯು ಸೇರಿದಂತೆ ಸರ್ಕಾರಿ ಶಾಲೆಗಳು, ಬ್ಯಾಂಕುಗಳು, ಸೇರಿದಂತೆ ನೂರಾರು ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ವಹಿವಾಟುಗಳು ಮಾಡುತ್ತಿದ್ದಾರೆ. 1.ಕೀ.ಮಿ. ವ್ಯಾಪ್ತಿಗೆ ಶೌಚಾಲಯಗಳಿಲ್ಲದೆ ಪರದಾಡುವಂತಾಗಿದೆ. ಮಹಿಳೆಯರ ಪಾಡಂತೂ ಹೇಳತೀರದಾಗಿದ್ದು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಮಾನವ ಹಕ್ಕುಗಳ ಜಾಗೃತಿ ವೇದಿಕೆ ಗೌರವ ಅಧ್ಯಕ್ಷ ಮುನಿಕೃಷ್ಣಪ್ಪ ಮನವಿ ಮಾಡಿದರು.
‘ಚನ್ನರಾಯಪಟ್ಟಣ ಸರ್ಕಲ್ನಿಂದ ಬಸ್ ನಿಲ್ದಾಣಕ್ಕೆ ಹೋಗಿ ಮೂತ್ರ ವಿಸರ್ಜನೆ ಮಾಡಿ ಅಂಗಡಿಗಳಿಗೆ ವಾಪಸ್ ಬರಬೇಕಾಗಿದೆ. ದೂರದ ಊರುಗಳಿಂದ ಬರುವವರು ಶೌಚಕ್ರಿಯೆಗಳಿಗೆ ಪರದಾಡುತ್ತಿದ್ದಾರೆ. ರಸ್ತೆಯ ಇಕ್ಕೆಲುಗಳಲ್ಲಿರುವ ಖಾಲಿ ಜಾಗಗಳಲ್ಲಿ ಮೂತ್ರ ವಿಸರ್ಜನೆ ಮಾಡಲಿಕ್ಕೆ ಹೋದರೆ ಪಕ್ಕದ ಅಂಗಡಿಗಳಲ್ಲಿನ ವ್ಯಾಪಾರಸ್ಥರು, ನಿವೇಶನಗಳ ಮಾಲೀಕರಿಂದ ಬೈಸಿಕೊಳ್ಳಬೇಕಾಗಿದೆ’ ಎಂದರು.
ಸ್ಥಳೀಯ ಕಾರ್ಪೆಂಟರ್ ನಾಗರಾಜ್ ಮಾತನಾಡಿ, ‘ದಿನಕ್ಕೆ 3 ಲೀಟರ್ಗೂ ಹೆಚ್ಚು ನೀರು ಕುಡಿಯಬೇಕು ಎಂದು ವೈದ್ಯರು ಹೇಳ್ತಾರೆ. ಅಂಗಡಿಗಳ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ನಾವು ಶೌಚಾಲಯದ ಸೌಲಭ್ಯವಿಲ್ಲದ ಕಾರಣದಿಂದಾಗಿ ನೀರು ಕುಡಿಯುವುದನ್ನೆ ಕಡಿಮೆ ಮಾಡಿದ್ದೇವೆ. ಕೆಲ ವ್ಯಾಪಾರಸ್ಥರು ಮೂತ್ರಪಿಂಡಗಳಲ್ಲಿ ಕಲ್ಲುಗಳು ಉತ್ಪತ್ತಿಯಾಗಿ ಸಮಸ್ಯೆ ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲಾ ಶೌಚಾಲಯಗಳಿಲ್ಲದೆ ಇರುವುದೇ ಮೂಲ ಕಾರಣವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಿ, ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.
ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್ ಮಾತನಾಡಿ, ಕೋಲಾರ ರಸ್ತೆಯಲ್ಲಿ ಗುರಪ್ಪನಮಠ ಸರ್ಕಾರಿ ಶಾಲೆಯ ಕಡೆಗೆ ಹೋಗುವ ರಸ್ತೆಯ ಇಕ್ಕೆಲಿನಲ್ಲಿರುವ ಪುರಸಭೆ ಜಾಗದಲ್ಲಿ ಅಂಗಡಿಗಳನ್ನು ಕಟ್ಟಲಿಕ್ಕೆ ವರದಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿ ಕೊಡಲಾಗಿದೆ. ಕೋಲಾರ ರಸ್ತೆಯುದ್ದಕ್ಕೂ ಎಲ್ಲಿಯೂ ಖಾಲಿ ಜಾಗ ಲಭ್ಯವಿಲ್ಲ. ಶೌಚಾಲಯ ನಿರ್ಮಾಣ ಮಾಡಿಕೊಡಬೇಕಾಗಿರುವ ಅವಶ್ಯಕತೆ ಹೆಚ್ಚಾಗಿದೆ ಎನ್ನುತ್ತಾರೆ.
ಈ ಮುಂಚೆಯು ಸಾರ್ವಜನಿಕರಿಂದ ಅಹವಾಲುಗಳು ಬಂದಿವೆ. ಭಾನುವಾರ ಬೆಳಿಗ್ಗೆ ಸ್ಥಳ ಪರಿಶೀಲನೆ ನಡೆಸುತ್ತೇವೆ. ಎಲ್ಲಿ ಖಾಲಿ ಜಾಗ ಲಭ್ಯವಾದರೆ ಅಂತಹ ಕಡೆಯಲ್ಲಿ ಸಾಮೂಹಿಕ ಶೌಚಾಲಯ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು. ಸ್ಥಳೀಯ ಅಂಗಡಿಗಳ ವ್ಯಾಪಾರಸ್ಥರು, ನಾಗರಿಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.