ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಮೀಪದ ಕ್ರೀಡಾ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ರೂಬಿ ಆಂಗ್ಲ ಶಾಲೆಯ ಶಾಲಾ ವಾರ್ಷಿಕೋತ್ಸವದ ವೇಳೆ ಜೇನು ಹುಳುಗಳು ದಾಳಿ ನಡೆಸಿ ಸುಮಾರು 40ಕ್ಕೂ ಹೆಚ್ಚು ಮಕ್ಕಳು ಮತ್ತು ಪೋಷಕರನ್ನು ಕಚ್ಚಿವೆ. ಈ ಘಟನೆಯ ಬಳಿಕ ಜನರು ಪುರಸಭೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ನಿವಾಸಿ ನಾರಾಯಣಸ್ವಾಮಿ ಮಾತನಾಡಿ, ’ತಿಂಗಳ ಸಂಬಳ ಪಡೆಯಲು ಮಾತ್ರ ಅಧಿಕಾರಿಗಳು ಕೆಲಸ ಮಾಡುವಂತಿದೆ. ಇದುವರೆಗೆ ನಾಲ್ಕು ಬಾರಿ ಹೆಜ್ಜೇನು ಹುಳುಗಳು ದಾಳಿ ನಡೆಸಿ ಅನೇಕರು ಗಾಯಗೊಂಡಿದ್ದಾರೆ. ಇಂದು ಬಂದ್ ಅಂಗವಾಗಿ ಕಾಲೇಜು ರಜೆ ಇರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ’ ಎಂದರು.