ದೊಡ್ಡಬಳ್ಳಾಪುರ: ದನದ ಮಾಂಸ ಸಾಗಿಸುತ್ತಿದ್ದ ವಾಹನ ಚಾಲಕರ ಮೇಲೆ ಹಲ್ಲೆ ನಡೆಸಿದ ಶ್ರೀರಾಮ ಸೇನೆಯ ನಾಲ್ವರು ಕಾರ್ಯಕರ್ತರ ವಿರುದ್ಧ ಸೋಮವಾರ ಡಕಾಯಿತಿ ಪ್ರಕರಣ ದಾಖಲಾಗಿದೆ.
ಘಟನೆ ನಡೆದ ದಿನ ಆ ಮಾರ್ಗವಾಗಿ ಹೊರಟಿದ್ದ ಬೇರೊಂದು ವಾಹನವನ್ನು ಸಂಘಟನೆಯ ಕಾರ್ಯಕರ್ತರು ಅಡ್ಡಗಟ್ಟಿ ಹಣ ದೋಚಿದ್ದಾರೆ ಎಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕರ್ನೂಲ್ನ ಕೃಷ್ಣ ಐಸ್ ಕ್ರೀಂ ತಯಾರಿಕೆ ಘಟಕದಿಂದ ಭಾನುವಾರ ಬೆಳಗಿನ ಜಾವ ಐಸ್ ಕ್ರೀಂ ತುಂಬಿಕೊಂಡು ಬರುತ್ತಿದ್ದ ವಾಹನವನ್ನು ಶ್ರೀರಾಮಸೇನೆ ಕಾರ್ಯಕರ್ತರು ಪಾಲನಜೋಗಿಹಳ್ಳಿ ಬಳಿ ಅಡ್ಡಗಟ್ಟಿದ್ದಾರೆ. ವಾಹನ ಜಖಂಗೊಳಿಸಿ, ಚಾಲಕನ ಮೇಲೆ ಹಲ್ಲೆ ನಡೆಸಿ ಆತನ ಬಳಿ ಇದ್ದ ₹90 ಸಾವಿರ ನಗದು ದೋಚಿದ್ದಾರೆ.
ಈ ಬಗ್ಗೆ ಐಸ್ಕ್ರೀಂ ವಾಹನ ಚಾಲಕ ಕಿಶನ್ ಲಾಲ್ ಜಾಟ್ ದೂರು ನೀಡಿದ್ದಾರೆ. ಪೊಲೀಸರು ತೋರಿಸಿದ ಫೋಟೊ ಮತ್ತು ವಿಡಿಯೊಗಳಲ್ಲಿರುವ ಶ್ರೀರಾಮ ಸೇನೆಯ ಮಂಜು ನಾಯ್ಕ, ದೇವರಾಜ್, ಪವನ್ ಹಾಗೂ ಪುನೀತ್ ಎಂಬುವರನ್ನು ಚಾಲಕ ಗುರುತಿಸಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.