ವಿಜಯಪುರ: ದೇಶದಾದ್ಯಂತ ಮೇ 1 ಕಾರ್ಮಿಕ ದಿನಾಚರಣೆ ಮಾಡಲಾಗುತ್ತಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಲು ಕಾರ್ಮಿಕರಿಗೆ ಸೂಕ್ತ ಮಾರ್ಗದರ್ಶನ ಮಾಡುವವರಿಲ್ಲದೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
ವೆಲ್ಡಿಂಗ್, ಮರಗೆಲಸ, ದ್ವಿಚಕ್ರ ವಾಹನಗಳ ಮೆಕ್ಯಾನಿಕ್, ರೇಷ್ಮೆ ನೂಲು ಬಿಚ್ಚಾಣಿಕೆ, ಹಮಾಲಿ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ಕೃಷಿ, ತೋಟಗಾರಿಕೆಗಳಲ್ಲಿ ತೊಡಗಿಸಿಕೊಂಡಿರುವ ಅಸಂಘಟಿತ ಕಾರ್ಮಿಕರು– ಹೀಗೆ ವಿವಿಧ ಹಂತಗಳಲ್ಲಿ ಕೆಲಸ ಮಾಡುವ ಶ್ರಮ ಜೀವಿಗಳಾಗಿದ್ದು ಸದಾ ದುಡಿಮೆಯಲ್ಲಿ ತೊಡಗಿರುತ್ತಾರೆ.
ಇಂತಹ ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಕಾರ್ಮಿಕ ಇಲಾಖೆಯ ಮೂಲಕ ಅನುಷ್ಠಾನಗೊಳಿಸುತ್ತಿದೆಯಾದರೂ ಬಹುತೇಕ ಕಾರ್ಮಿಕರಿಗೆ ನಮಗೊಂದು ಇಲಾಖೆಯಿದೆ ಎನ್ನುವುದೇ ಕಲ್ಪನೆ ಇಲ್ಲ.
‘ನಾವು ಎಷ್ಟು ಸಮಯ ಕೆಲಸ ಮಾಡಬೇಕು, ನಾವು ಏನೇನು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು, ನಮಗೆ ಸರ್ಕಾರದಿಂದ ಏನೇನು ಸೌಲಭ್ಯಗಳು ಸಿಗುತ್ತವೆ. ಅದನ್ನು ಕೊಡುವವರು ಯಾರು, ಹೇಗೆ ಪಡೆಯಬೇಕು ಎನ್ನುವ ಬಗ್ಗೆ ಗೊತ್ತಿಲ್ಲ’ ಎಂದು ಕಾರ್ಮಿಕ ಸಾಧಿಕ್ ಪಾಷ ಹೇಳುತ್ತಾರೆ.
ದೇಶದಲ್ಲಿ ಹಿಂದೆ ಖಾಸಗಿ ಕಂಪನಿಗಳು, ಕಾರ್ಖಾನೆಗಳು ಕಾರ್ಮಿಕರನ್ನು ಗುಲಾಮರಂತೆ ಕಾಣುತ್ತಿದ್ದರು. ಕಾರ್ಮಿಕರಿಂದ ಸಾಕಷ್ಟು ದುಡಿಸಿಕೊಂಡು ಸಮರ್ಪಕವಾಗಿ ಪ್ರತಿಫಲವನ್ನು ನೀಡುತ್ತಿರಲಿಲ್ಲ. ಕಾರ್ಮಿಕರ ಸ್ಥಿತಿ ಶೋಚನೀಯವಾಗಿತ್ತು. ಅದಕ್ಕಾಗಿ ಅನೇಕ ಹೋರಾಟಗಳು ನಡೆದವು. ಹೋರಾಟಕ್ಕೆ ಜಯ ದೊರೆತ ಕಾರಣ ಪ್ರತಿ ವರ್ಷ ಮೇ 1 ರಂದು ಕಾರ್ಮಿಕ ದಿನವನ್ನು ಆಚರಿಸಲಾಗುತ್ತಿದೆ.
ಕಾರ್ಮಿಕರು ಸಂಘಟಿತರಾದಾಗ ಮಾತ್ರ ಹಕ್ಕು ಮತ್ತು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಕಾರ್ಮಿಕರು ಕಾನೂನು ಅರಿವನ್ನು ಪಡೆದುಕೊಂಡರೆ ವಿವಿಧ ಸೌಲಭ್ಯಗಳ ಅರಿವು ಉಂಟಾಗುತ್ತದೆ ಈ ಬಗ್ಗೆ ಇಲಾಖೆ ಗಮನ ಹರಿಸಬೇಕು ಎಂದರು.
ಕಾರ್ಮಿಕರ ಕುರಿತು ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್ ಮಾತನಾಡಿ, ಕಾರ್ಮಿಕರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು. ಅವರನ್ನು ಕಾರ್ಮಿಕರನ್ನಾಗಿ ಮಾಡದೆ ಉನ್ನತ ಸ್ಥಾನಗಳಿಗೆ ಕಳುಹಿಸಬೇಕು ಎನ್ನುತ್ತಾರೆ.
ಶ್ರಮಪಡುವುದೇ ಕಾರ್ಮಿಕರ ನಿತ್ಯ ಬದುಕಿನ ಭಾಗವಾಗಿದೆ. ಆದ್ದರಿಂದ ಅವರಿಗೆ ಸರ್ಕಾರದಿಂದ ದೊರೆಯುವ ಎಲ್ಲ ಸವಲತ್ತುಗಳು ಪ್ರಾಮಾಣಿಕವಾಗಿ ದೊರೆಯಬೇಕಿದೆ. ಕೆಲಸದ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಬೇಕಿದೆ. ಮುಖ್ಯವಾಗಿ ಕಾರ್ಮಿಕರಿಗೆ ಕಾನೂನಿನ ಅರಿವು ಮೂಡಿಸುವ ಅಗತ್ಯವೂ ಇದೆ ಎನ್ನುತ್ತಾರೆ.
ಕಾರ್ಮಿಕರು ಕಾನೂನು ಅರಿವು ಹೊಂದುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಅನೇಕ ಹಕ್ಕು ಮತ್ತು ಸವಲತ್ತುಗಳಿಂದ ವಂಚಿತರಾಗಬೇಕಾಗುತ್ತದೆ. ಕಾರ್ಮಿಕ ಇಲಾಖೆಯಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಕಾರ್ಮಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಮಾಡಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.