ವಿಜಯಪುರ: ‘ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮಾನವೀಯತೆ ಅಂಶಗಳ ಕೊರತೆ ಕಂಡುಬರುತ್ತಿದೆ. ಮಾನವೀಯ ಮೌಲ್ಯಗಳು ತಾಂತ್ರಿಕ ಶಿಕ್ಷಣದಲ್ಲಿ ಸಿಗುವುದಿಲ್ಲ’ ಎಂದು ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್ ಹೇಳಿದರು.
ಇಲ್ಲಿನ ಇನ್ಸ್ಫೈರ್ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ 2019-20 ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕೇವಲ ಗೋಡೆಗಳ ನಡುವೆ ಪಡೆಯುತ್ತಿರುವ ಶಿಕ್ಷಣದಿಂದ ಸಾಧನೆ ಅಸಾಧ್ಯ. ಶಾಲಾ–ಕಾಲೇಜುಗಳ ಹೊರಗೆ ಕಲಿಯುವುದೂ ಬಹಳಷ್ಟಿದೆ. ಕಲಿಕೆ ನಿರಂತರ. ಅದಕ್ಕೆ ಮುಖ್ಯವಾಗಿ ಉತ್ತಮ ಮಾನವೀಯ ಮೌಲ್ಯ, ಪರೋಪಕಾರ ಗುಣ, ಉತ್ತಮ ಸಂಸ್ಕಾರ ಬೇಕು.ಕೆಲ ಮಾಧ್ಯಮಗಳು ಇತ್ತೀಚೆಗೆ ಜನರನ್ನು ದಿಕ್ಕು ತಪ್ಪಿಸುವ ಮತ್ತು ತಮ್ಮ ದಾಸರನ್ನಾಗಿಸಿಕೊಳ್ಳುವಂತಹ ಕಾರ್ಯಕ್ರಮಗಳನ್ನೇ ಬಿತ್ತರಿಸುತ್ತಿದ್ದಾರೆ. ಆ ಮೂಲಕ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಸಮಾಜದಲ್ಲಿನ ತಮ್ಮ ಹೊಣೆಗಾರಿಕೆ ಮರೆಯುತ್ತಿವೆ. ಯುವಪೀಳಿಗೆ ಇದನ್ನು ಅರಿಯಬೇಕು’ ಎಂದರು.
ಮುಖಂಡ ಪಿ.ಮಂಜುನಾಥ್ ಮಾತನಾಡಿ, ‘ಸಮಾಜ ಮುನ್ನಡೆಸುವ ಜವಾಬ್ದಾರಿ ಶಿಕ್ಷಕರ ಮೇಲಲಿರುವಂತೆಯೇ ವಿದ್ಯಾರ್ಥಿಗಳ ಮೇಲೂ ಇದೆ. ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸಮಯ ಸ್ಫೂರ್ತಿ ತುಂಬುತ್ತವೆ’ ಎಂದರು.
ಪ್ರೊ.ಜಿ.ಶಶಿಧರ್, ಪ್ರಾಂಶುಪಾಲ ಪ್ರೊ.ಎನ್.ಶ್ರೀನಿವಾಸಮೂರ್ತಿ ಮಾತನಾಡಿದರು. ವಿಶ್ವವಿದ್ಯಾಲಯ ಮಟ್ಟದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಪ್ರೊ. ಮಹಾಂತೇಶಪ್ಪ, ಪ್ರೊ.ದೇವರಾಜ್, ಮನೋಜ್ ಕುಮಾರ್, ಉಮೇಶ್, ರವಿಕುಮಾರ್, ಪೋಷಕರು ಇದ್ದರು.