ದೊಡ್ಡಬಳ್ಳಾಪುರ: ಸಂಕಷ್ಟದಲ್ಲಿರುವ ನೇಕಾರರಿಗೆ ವಿದ್ಯುತ್ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾಗಾಗಿ ಇನ್ನೂ 15 ದಿನಗಳಲ್ಲಿ ವಿದ್ಯುತ್ ದರ ಕಡಿಮೆ ಮಾಡದಿದ್ದರೆ ನೇಕಾರರ ಸಂಘಟನೆಗಳು ಹೋರಾಟ ನಡೆಸುತ್ತವೆ ಎಂದು ಎಚ್ಚರಿಕೆ ನೀಡಿವೆ.
ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ವತಿಯಿಂದ ನೇಕಾರರ ಸಮಸ್ಯೆಗಳ ಕುರಿತಂತೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಅಧ್ಯಕ್ಷ ಪಿ.ಎ.ವೆಂಕಟೇಶ್ ಮಾತನಾಡಿ, ರಾಜ್ಯ ಸರ್ಕಾರ ವಿದ್ಯುತ್ ದರ ಹೆಚ್ಚಿಸಿ ಜನಸಾಮಾನ್ಯರಿಗೆ ಹೊರೆಯಾಗುವಂತೆ ಮಾಡಿದೆ ಎಂದರು.
ನೇಯ್ಗೆ ಉದ್ಯಮ ಎರಡು ವರ್ಷಗಳಿಂದ ಬಿಕ್ಕಟ್ಟಿನಲ್ಲಿದೆ. ನೇಕಾರರು ನೇಯ್ದ ಸೀರೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕೋವಿಡ್-19, ಜಿಎಸ್ಟಿ ಗಳಿಂದ ತತ್ತರಿಸಿರುವ ಉದ್ಯಮ ಇನ್ನೂ ಚೇತರಿಸಿಕೊಂಡಿಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿಯೇ ವಿದ್ಯುತ್ ದರ ಏರಿಕೆ ಮಾಡಿದೆ. ಇದರೊಂದಿಗೆ ಪಿಎಫ್ ದಂಡ, ಬಡ್ಡಿ, ಇತರೆ ಶುಲ್ಕಗಳು ಸೇರಿದಂತೆ ನೂರಾರು ರೂಪಾಯಿ ಹೆಚ್ಚಿಗೆ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದರು.
ನೇಕಾರರಿಗೆ ನೀಡುತ್ತಿದ್ದ ಸಹಾಯಧನ ಇಲ್ಲದಿದ್ದರೆ ನೇಕಾರರು ಮಗ್ಗಗಳನ್ನು ನಿಲ್ಲಿಸಿ, ಅನ್ಯ ಮಾರ್ಗ ಹಿಡಿಯುವ ಪರಿಸ್ಥತಿ ನಿರ್ಮಾಣವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚುನಾವಣೆಗೂ ಮುನ್ನ ನೇಕಾರರಿಗೆ 20 ಎಚ್ಪಿವರೆಗೆ ವಿದ್ಯುತ್ ಉಚಿತವಾಗಿ ನೀಡುವ ಭರವಸೆ ನೀಡಿದ್ದರು ಎಂದರು.