ಹೊಸಕೋಟೆ: ತಾಲ್ಲೂಕಿನ ಹಾಗೂ ಸುತ್ತಮುತ್ತಲಿನ ಜನತೆಗೆ ಕಳೆದ ಎರಡು ದಶಕಗಳಿಂದ ಆರೋಗ್ಯದ ಸೇವೆ ನೀಡುತ್ತಾ ಬಂದಿರುವ ಎಂ.ವಿ.ಜೆ ಆಸ್ಪತ್ರೆಯು ಈಗ ಜನತೆಗೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಮುಂದಾಗಿದೆ ಎಂದು ಆಸ್ಪತ್ರೆಯ ಸಹಾಯಕ ಮುಖ್ಯ ಆರೋಗ್ಯಾಧಿಕಾರಿ ಡಾ.ಪ್ರಮೋದ್ ತಿಳಿಸಿದರು.
ಅವರು ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಸ್ಪತ್ರೆಯು ಜನರಿಗೆ ಉಚಿತವಾಗಿ ಹಾಗೂ ಕೆಲವು ಸೇವೆಗಳಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುತ್ತಾ ಬಂದಿದೆ ಎಂದರು.
ಆಸ್ಪತ್ರೆಯು ಬೆಂಗಳೂರಿನ ನಾರಾಯಣ ಹಾರ್ಟ್ ಸೆಂಟರ್ ಸಹಯೋಗದಲ್ಲಿ ಪ್ರತಿ ಮಂಗಳವಾರ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಿ ಕೊಂಡು ಶಸ್ತ್ರಚಿಕಿತ್ಸೆಯ ಎಲ್ಲಾ ವ್ಯವಸ್ಥೆಯನ್ನು ನಾರಾಯಣ ಹಾರ್ಟ್ ಸೆಂಟರ್ ಸಹಯೋಗದಲ್ಲಿ ಮಾಡಲಾಗುವುದು ಎಂದುಹೇಳಿದರು.
ನಾರಾಯಣ ಹಾರ್ಟ್ ಸೆಂಟರ್ನ ಡಾ.ಯಶವಂತ್ ಮಾತನಾಡಿ,ಹಾರ್ಟ್ ಕೇರ್ ಸೆಂಟರ್ಗಳ ಕೊರತೆಯಿಂದ ರೋಗಿಗೆ ಸೂಕ್ತ ಚಿಕಿತ್ಸೆ ದೊರೆಯದೆ ಹೆಚ್ಚಿನ ಪ್ರಮಾಣದಲ್ಲಿ ಸಾವನ್ನಪ್ಪುತ್ತಿದ್ದಾರೆ. ಅದನ್ನು ತಡೆಯಲು ಈ ಭಾಗದಲ್ಲಿ ಈ ಸೇವೆ ಪ್ರಾರಂಭ ಮಾಡಲಾಗಿದೆ ಎಂದರು.
ಹೃದಯ ಸಂಬಂಧಿ ಚಿಕಿತ್ಸೆಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಕಾರ್ಡಿಯಾಲಜಿ ವಿಭಾಗಕ್ಕೆ ಪ್ರತ್ಯೇಕ ವೈದ್ಯರನ್ನು ನೇಮಕ ಮಾಡಲಾಗಿದೆ. ರಿಯಾಯಿತಿ ದರದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹೃದಯ ರೋಗ ತಜ್ಞ ಡಾ.ಮೋಹನ್, ವರದರಾಜ್ ಹಾಜರಿದ್ದರು.